
ಸಿಡ್ನಿ[ಜ.12]: ಕಾಫಿ ವಿತ್ ಕರಣ್ ಟೀವಿ ಕಾರ್ಯಕ್ರಮದಲ್ಲಿ ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡಿದ್ದಕ್ಕೆ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ರನ್ನು ಬಿಸಿಸಿಐ ಅಮಾನತುಗೊಳಿಸಿದೆ. ವಿಚಾರಣೆ ಮುಕ್ತಾಯಗೊಳ್ಳುವವರೆಗೂ ಇಬ್ಬರನ್ನು ಅಮಾನತಿನಲ್ಲಿ ಇಡಲು ಕ್ರಿಕೆಟ್ ಬೋರ್ಡ್ ನಿರ್ಧರಿಸಿದ್ದು, ಆಸ್ಪ್ರೇಲಿಯಾ ವಿರುದ್ಧ ಸರಣಿಯಿಂದ ಹೊರಬಿದ್ದಿದ್ದಾರೆ. ಇಬ್ಬರೂ ಶನಿವಾರ ಇಲ್ಲವೇ ಭಾನುವಾರ ಭಾರತಕ್ಕೆ ವಾಪಸಾಗಲಿದ್ದು, ನ್ಯೂಜಿಲೆಂಡ್ ಸರಣಿ ವೇಳೆಗೆ ಮತ್ತೆ ತಂಡ ಕೂಡಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
‘ಪಾಂಡ್ಯ ಹಾಗೂ ರಾಹುಲ್ರ ವಿಚಾರಣೆಯನ್ನು ಆಂತರಿಕ ಸಮಿತಿ ನಡೆಸಬೇಕಾ ಇಲ್ಲವೇ ಸಾರ್ವಜನಿಕ ತನಿಖಾಧಿಕಾರಿ ನಡೆಸಬೇಕಾ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ’ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಭಾರತೀಯ ಕ್ರಿಕೆಟಿಗರು ಟೀವಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ಬಿಸಿಸಿಐ ನಿರ್ಬಂಧ ಹೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೊಹ್ಲಿ ಅಸಮಾಧಾನ
ವಿವಾದದಲ್ಲಿ ಸಿಲುಕಿರುವ ತಮ್ಮ ಸಹ ಆಟಗಾರರನ್ನು ಬೆಂಬಲಿಸುವುದಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ‘ಹಾರ್ದಿಕ್ ಹಾಗೂ ರಾಹುಲ್ ಹೇಳಿಕೆಯ ಜವಾಬ್ದಾರಿಯನ್ನು ತಂಡ ವಹಿಸಿಕೊಳ್ಳುವುದಿಲ್ಲ. ತಂಡಕ್ಕೂ ವಿವಾದಕ್ಕೂ ಸಂಬಂಧವಿಲ್ಲ. ಹಾರ್ದಿಕ್ ಅನುಪಸ್ಥಿತಿ ತಂಡಕ್ಕೆ ಕಾಡುವುದಿಲ್ಲ. ಜಡೇಜಾ ಆಲ್ರೌಂಡರ್ ಸ್ಥಾನದಲ್ಲಿ ಆಡಲಿದ್ದಾರೆ’ ಎಂದು ಶುಕ್ರವಾರ ಕೊಹ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಹಾಟ್ಸ್ಟಾರ್ನಿಂದ ವಿಡಿಯೋ ಔಟ್!
ಬಿಸಿಸಿಐ ಕಠಿಣ ಕ್ರಮಕ್ಕೆ ಮುಂದಾಗುತ್ತಿದ್ದಂತೆ ಕಾಫಿ ವಿತ್ ಕರಣ್ ಶೋನ ‘ಹಾರ್ದಿಕ್ ಹಾಗೂ ರಾಹುಲ್’ ಎಪಿಸೋಡನ್ನು ಹಾಟ್ಸ್ಟಾರ್ನಿಂದ ತೆಗೆದು ಹಾಕಲಾಗಿದೆ. ಕಳೆದ ಭಾನುವಾರ (ಜ.6ಕ್ಕೆ) ಕಾರ್ಯಕ್ರಮ ಪ್ರಸಾರವಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.