
ಮುಂಬೈ(ಅ. 30): ರಣಜಿ ಟ್ರೋಫಿಯಲ್ಲಿ ಅಸ್ಸಾಂ ವಿರುದ್ಧದ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ 10 ವಿಕೆಟ್'ಗಳಿಂದ ಜಯಭೇರಿ ಭಾರಿಸಿದೆ. ನಿನ್ನೆ ಮೂರನೇ ದಿನದಂತ್ಯದಲ್ಲಿ ತನ್ನ ಎರಡನೇ ಇನ್ನಿಂಗ್ಸಲ್ಲಿ 1 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿದ್ದ ಅಸ್ಸಾಂ ತಂಡ ಇಂದು 264 ರನ್ನಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸಲ್ಲಿ ಕರ್ನಾಟಕಕ್ಕೆ ತಲೆನೋವಾಗಿದ್ದ ಮಾಜಿ ಕರ್ನಾಟಕ ಆಟಗಾರ ಅಮಿತ್ ವರ್ಮಾ ಈ ಬಾರಿಯೂ ಸ್ವಲ್ಪಮಟ್ಟಕ್ಕೆ ತಡೆಗೋಡೆಯಾಗಿ ನಿಂತರು. ಆದರೆ, ಇನ್ನೊಂದು ಬದಿಯಲ್ಲಿ ವಿಕೆಟ್'ಗಳು ಉರುಳುತ್ತಿದ್ದರಿಂದ ಅಮಿತ್ ವರ್ಮಾಗೆ ಹೆಚ್ಚು ಇನ್ನಿಂಗ್ಸ್ ಕಟ್ಟಲಾಗಲಿಲ್ಲ. ಹೀಗಾಗಿ, ಬೇಗನೇ ಇನ್ನಿಂಗ್ಸ್ ಮುಕ್ತಾಯಗೊಂಡಿತು. ಆಫ್ ಸ್ಪಿನ್ನರ್ ಕೆ.ಗೌತಮ್ 7 ವಿಕೆಟ್ ಕಬಳಿಸಿ ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇನ್ನು, ಗೆಲ್ಲಲು 20 ರನ್ ಗುರಿ ಪಡೆದ ಕರ್ನಾಟಕ ಮೂರೇ ಓವರಲ್ಲಿ ವಿಕೆಟ್ ನಷ್ಟವಿಲ್ಲದೆ ನಿರಾಯಾಸವಾಗಿ ಗೆಲುವಿನ ದಡ ಮುಟ್ಟಿತು. ಇದರೊಂದಿಗೆ ಈ ಬಾರಿಯ ರಣಜಿ ಋತುವಿನಲ್ಲಿ ಕರ್ನಾಟಕಕ್ಕೆ ಇದು ಎರಡನೇ ಗೆಲುವಾಗಿದೆ. ಮೂರು ಪಂದ್ಯಗಳಿಂದ 16 ಪಾಯಿಂಟ್ ಕಲೆಹಾಕಿರುವ ಕರ್ನಾಟಕ ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ನವೆಂಬರ್ 5ರಿಂದ ವಡೋದರಾದಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಕರ್ನಾಟಕ ತಂಡ ವಿದರ್ಭಾವನ್ನು ಎದುರಿಸಲಿದೆ.
ಅಸ್ಸಾಮ್ ಮೊದಲ ಇನ್ನಿಂಗ್ಸ್ 108.5 ಓವರ್ 325 ರನ್ ಆಲೌಟ್
(ಅಮಿತ್ ವರ್ಮಾ ಅಜೇಯ 166, ಸ್ವರೂಪಮ್ ಪುರಕಾಯಸ್ತಾ 59, ಅರುಣ್ ಕಾರ್ತಿಕ್ 35 ರನ್ - ಎಸ್.ಅರವಿಂದ್ 70/5, ಶ್ರೇಯಸ್ ಗೋಪಾಲ್ 74/3
ಕರ್ನಾಟಕ ಮೊದಲ ಇನ್ನಿಂಗ್ಸ್ 138.4 ಓವರ್ 570/9(ಡಿಕ್ಲೇರ್)
(ಸ್ಟುವರ್ಟ್ ಬಿನ್ನಿ 156, ಕರುಣ್ ನಾಯರ್ 145, ರಾಬಿನ್ ಉತ್ತಪ್ಪ 128, ಸಿಎಂ ಗೌತಮ್ 73, ಶ್ರೇಯಸ್ ಗೋಪಾಲ್ 35 ರನ್ - ಅರೂಪ್ ದಾಸ್ 86/4, ಕೃಷ್ಣ ದಾಸ್ 95/2)
ಅಸ್ಸಾಮ್ ಎರಡನೇ ಇನ್ನಿಂಗ್ಸ್ 85 ಓವರ್ 264 ರನ್ ಆಲೌಟ್
(ಅಮಿತ್ ವರ್ಮಾ 74, ರಾಹುಲ್ ಹಜಾರಿಕಾ 44, ಸ್ವರೂಪಮ್ ಪುರಕಾಯಸ್ತಾ 33, ತರ್ಜಿಂದರ್ ಸಿಂಗ್ 26 ರನ್ - ಕೆ.ಗೌತಮ್ 108/7, ಶ್ರೇಯಸ್ ಗೋಪಾಲ್ 97/3)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.