
ಚೆನ್ನೈ(ಸೆ.17): ಶ್ರೀಲಂಕಾ ವಿರುದ್ಧದ ಸರಣಿಯನ್ನು ಜಯಿಸಿದ ಭಾರತ ತಂಡ ತವರಿನಲ್ಲಿ ಮತ್ತೆ ಪ್ರಬಲ ಆಸ್ಟ್ರೇಲಿಯಾ ತಂಡದ ವಿರುದ್ಧ 5 ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿದ್ದಾರೆ.
ಭಾರತ 282 ರನ್'ಗಳ ಗುರಿ ನೀಡಿತ್ತು. ಇದನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ 2 ಗಂಟೆಗೂ ಹೆಚ್ಚು ಕಾಲ ಮಳೆ ಅಡ್ಡಿ ಪಡಿಸಿದ ಕಾರಣ ಡೆಕ್ವರ್ತ್ ಲೂಯಿಸ್ ಅನ್ವಯ 21 ಒವರ್'ಗಳಲ್ಲಿ 164 ರನ್'ಗಳ ಗುರಿಯನ್ನು ನೀಡಲಾಗಿತ್ತು. ಆದರೆ ಅಂತಿಮವಾಗಿ 21 ಓವರ್'ಗಳಲ್ಲಿ 9 ವಿಕೇಟ್ ನಷ್ಟಕ್ಕೆ 137 ಗಳಿಸಲಷ್ಟೆ ಸಾಧ್ಯವಾಯಿತು.
ಪಾಂಡ್ಯ 28/2, ಚಹಾಲ್ 30/3 ಹಾಗೂ ಕುಲ್'ದೀಪ್ ಯಾದವ್ 33/2 ದಾಳಿಗೆ ಆಸೀಸ್ ತಂಡ 26 ರನ್'ಗಳ ಸೋಲನ್ನು ಅನುಭವಿಸಿತು. ಡೇವಿಡ್ ವಾರ್ನ್'ರ್ (25), ಮ್ಯಾಕ್ಸ್'ವೆಲ್ (39) ಹಾಗೂ ಫ್ಲಾಕ್ನರ್ (32) ರನ್ ಗಳಿಸಿದ್ದು ಬಿಟ್ಟರೆ ಉಳಿದವರ್ಯಾರು ಒಂದಂಕಿಯ ಮೊತ್ತವನ್ನು ಗಳಿಸಲಿಲ್ಲ.
ಪಾಂಡ್ಯ, ಧೋನಿ ಭರ್ಜರಿ ಆಟ
ಚೆನ್ನೈ'ನ ಚಿದಂಬರಮ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ ಪಡೆ 5 ಒವರ್ ಗಳಾಗುವಷ್ಟರಲ್ಲೇ 3 ವಿಕೇಟ್ ಕಳೆದುಕೊಂಡು ಆತಂಕಕ್ಕೆ ಒಳಗಾಗಿತ್ತು. ನಾಯಕ ಕೊಹ್ಲಿ, ಕನ್ನಡಿಗ ಮನೀಶ್ ಪಾಂಡೆ ಶೂನ್ಯಕ್ಕೆ ಔಟಾದರೆ ಆರಂಭಿಕ ಆಟಗಾರ ರಹಾನೆ 5 ರನ್'ಗೆ ಪೆವಿಲಿಯನ್'ಗೆ ತೆರಳಿದರು. ಮತ್ತೊರ್ವ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕೆಲ ಹೊತ್ತು ಕ್ರೀಸ್'ನಲ್ಲಿ ನಿಂತರೂ 15ನೇ ಓವರ್'ನ ಕೊನೆಯ ಎಸೆತದಲ್ಲಿ 28 ರನ್ ಗಳಿಸಿ ಓಟಾದರು.
ಧೋನಿಯೊಂದಿಗೆ ಜೊತೆಯಾದ ಕೇದಾರ್ ಜಾಧವ್ 21ನೇ ಓವರ್'ನಲ್ಲಿ 40 ರನ್'ಗಳಿಸಿ ಔಟಾದರು. 5 ವಿಕೇಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಬೆಳಕಾದವರು ಆಲ್'ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ವಿಕೇಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ. ಪಾಂಡ್ಯ(83:66 ಎಸೆತ, 5 ಸಿಕ್ಸ್'ರ್ 5 ಬಂಡರಿ) ಬಿರುಸಾಗಿ ಆಸ್ಟ್ರೇಲಿಯಾ ಬೌಲರ್'ಗಳನ್ನು ದಂಡಿಸಿದರೆ ಧೋನಿ(88 ಎಸೆತ, 2 ಸಿಕ್ಸ್'ರ್, 4 ಬೌಂಡರಿ) ನಿಧಾನವಾಗಿ ಬ್ಯಾಟ್ ಬೀಸಿ ಪಾಂಡ್ಯರಿಗೆ ಜೊತೆಯಾದರು. 6ನೇ ವಿಕೇಟ್'ಗೆ ಇವರಿಬ್ಬರ ಜೋಡಿ 118 ರನ್ ಪೇರಿಸಿತು. ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 100 ಅರ್ಧ ಶತಕಗಳನ್ನು ಬಾರಿಸಿದ ಎಂ.ಎಸ್. ಧೋನಿ ಹೊಸ ದಾಖಲೆ ಬರೆದರು.
ಕೊನೆಯ ಓವರ್'ಗಳಲ್ಲಿ ಆಗಮಿಸಿದ ಬ್ಯಾಟಿಂಗ್ ಆಪತ್ಬಾಂಧವ ಭುವನೇಶ್ವರ ಕುಮಾರ್ 5 ಬೌಂಡರಿಗಳೊಂದಿಗೆ 32 ರನ್ ಸಿಡಿಸಿದರು. ಅಂತಿಮವಾಗಿ ಭಾರತ 50 ಓವರ್'ಗಳಲ್ಲಿ 7 ವಿಕೇಟ್ ನಷ್ಟಕ್ಕೆ 281 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಕೋಲ್ಟರ್-ನೈಲ್ 44/3, ಸ್ಟೊಯಿನಿಸ್ 54/2 ವಿಕೇಟ್ ಗಳಿಸಿ ಉತ್ತಮ ಬೌಲರ್ ಎನಿಸಿದರು.
ಸ್ಕೋರ್
ಭಾರತ 50 ಓವರ್'ಗಳಲ್ಲಿ 281/7
(ಪಾಂಡ್ಯ 83, ಧೋನಿ 79, ಜಾಧವ್ 40: ನೈಲ್ 44/3, ಸ್ಟೊಯಿನಿಸ್ 54/2)
ಆಸ್ಟ್ರೇಲಿಯಾ 21 ಓವರ್'ಗಳಲ್ಲಿ 137
(ಡೇವಿಡ್ ವಾರ್ನ್'ರ್ (25), ಮ್ಯಾಕ್ಸ್'ವೆಲ್ (39) ಹಾಗೂ ಫ್ಲಾಕ್ನರ್ (32),ಪಾಂಡ್ಯ 28/2,ಚಹಾಲ್ 30/3, ಕುಲ್'ದೀಪ್ ಯಾದವ್ 33/2)
ಫಲಿತಾಂಶ: ಭಾರತಕ್ಕೆ ಡೆಕ್ವರ್ತ್ ಲೂಹಿಸ್ ಅನ್ವಯ 26 ರನ್'ಗಳ ಜಯ
ಪಂದ್ಯ ಶ್ರೇಷ್ಠ: ಹಾರ್ದಿಕ್ ಪಾಂಡ್ಯ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.