
ನವದೆಹಲಿ(ನ.12): ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು ದೆಹಲಿ ಕ್ರಿಕೆಟ್ ಸಂಸ್ಥೆ ಆಡಳಿತ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಶುಕ್ರವಾರವಷ್ಟೇ ಕೇಂದ್ರ ಸರ್ಕಾರ ತಮ್ಮ ಹೆಸರನ್ನು ನಾಮನಿರ್ದೇಶನ ಮಾಡಿದೆ ಎಂದು ಟ್ವೀಟರ್ನಲ್ಲಿ ಗಂಭೀರ್ ಘೋಷಿಸಿದ್ದರು. ಜತೆಗೆ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರಿಗೆ ಧನ್ಯವಾದ ಸಹ ತಿಳಿಸಿದ್ದರು. ಗಂಭೀರ್ ಒಬ್ಬ ಸಕ್ರಿಯ ಕ್ರಿಕೆಟಿಗರಾಗಿದ್ದು, ನಿವೃತ್ತಿಗೂ ಮೊದಲೇ ಆಟಗಾರನೊಬ್ಬ ಆಡಳಿತ ಮಂಡಳಿ ಸದಸ್ಯರಾಗುವುದು, ನ್ಯಾ.ಲೋಧಾ ಸಮಿತಿ ಶಿಫಾರಸಿನ ಪ್ರಕಾರ ಇದು ಸ್ವಹಿತಾಸಕ್ತಿಯಾಗಲಿದೆ.
ಸ್ವಹಿತಾಸಕ್ತಿ ಆರೋಪವೇಕೆ?
ದೆಹಲಿ ಕ್ರಿಕೆಟ್ ಸಂಸ್ಥೆ ಆಡಳಿತ ಸಮಿತಿ ಸ್ಥಾಪನೆಯಾದ ಬಳಿಕ ಕೋಚ್ ಹಾಗೂ ಆಯ್ಕೆ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಿದೆ. ಒಬ್ಬ ಆಟಗಾರನಾಗಿದ್ದುಕೊಂಡು ಗಂಭೀರ್, ಆಯ್ಕೆ ಸಮಿತಿ ಹಾಗೂ ಕೋಚ್ ನೇಮಕದಲ್ಲಿ ಪಾತ್ರ ವಹಿಸಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಎದಿದ್ದು, ಇದು ಖಂಡಿತವಾಗಿಯೂ ಹಿತಾಸಕ್ತಿ ಸಂಘರ್ಷ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆಡಳಿತಗಾರರಿಗೆ ವಿಷಯವೇ ಗೊತ್ತಿಲ್ಲ!
ಕುತೂಹಲಕಾರಿ ವಿಷಯವೆಂದರೆ ದೆಹಲಿ ಹೈಕೋರ್ಟ್ ನೇಮಿತ ಆಡಳಿತಗಾರ ನಿವೃತ್ತ ನ್ಯಾ.ವಿಕ್ರಂಜಿತ್ ಸೆನ್ಗೆ ಸದ್ಯದ ವ್ಯವಸ್ಥೆಯಲ್ಲಿ ಯಾವುದೇ ಆಡಳಿತ ಸಮಿತಿ ಇರುವ ಬಗ್ಗೆ ಮಾಹಿತಿಯೇ ಇಲ್ಲ. ‘ಗಂಭೀರ್ ನೇಮಕದ ಬಗ್ಗೆ ಸರ್ಕಾರದಿಂದ ನನಗೆ ಯಾವುದೇ ಸೂಚನೆ ಬಂದಿಲ್ಲ. ನನಗೆ ಯಾವುದೇ ಆಡಳಿತ ಸಮಿತಿಯ ಬಗ್ಗೆ ತಿಳಿದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ಒದಗಿಸುವಂತೆ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆಯಲಿದ್ದೇನೆ’ ಎಂದು ನ್ಯಾ.ವಿಕ್ರಂಜಿತ್ ಸೆನ್ ಹೇಳಿದ್ದಾರೆ. ಮೂಲಗಳ ಪ್ರಕಾರ, ನ್ಯಾಯಾಲಯ ಆಡಳಿತಗಾರರನ್ನು ನೇಮಿಸಿದ ಬಳಿಕ, ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಯಾವುದೇ ಆಡಳಿತ ಸಮಿತಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಸಮಿತಿಯಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಬಗ್ಗೆಯೂ ಯಾರಿಗೂ ತಿಳಿದಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.