ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಹೈ ವೋಲ್ಟೇಜ್ ಪಂದ್ಯ. ಇದೀಗ ಪಂದ್ಯ ಆರಂಭಕ್ಕೂ ಮುನ್ನವೇ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್, ಟೀಂ ಇಂಡಿಯಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದುಬೈ(ಸೆ.18): ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ನಾಳೆ(ಸೆ.19) ಭಾರತ ಹಾಗೂ ಪಾಕಿಸ್ತಾನ ನಡುವಿನ ಹೋರಾಟ ನಡೆಯಲಿದೆ. ಆದರೆ ಪಂದ್ಯ ಆರಂಭಕ್ಕೂ ಮೊದಲೇ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಫರಾಜ್ ಅಹಮ್ಮದ್ ಅಸಮಾಧಾನಕ್ಕೆ ಏಷ್ಯಾಕಪ್ ವೇಳಾಪಟ್ಟಿ ಕಾರಣ. ಏಷ್ಯಾಕಪ್ ಆರಂಭಿಕ ವೇಳಾ ಪಟ್ಟಿ ಪ್ರಕಾರ ಭಾರತ ತನ್ನ ಸೂಪರ್ 4 ಹಂತದ ಪಂದ್ಯಗಳನ್ನ ಅಬುದಾಬಿಯಲ್ಲಿ ಆಡಬೇಕಿತ್ತು. ಆದರೆ ಬಿಸಿಸಿಐ ಸೂಚನೆ ಮೇರೆಗೆ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಟೀಂ ಇಂಡಿಯಾದ ಸೂಪರ್ 4 ಪಂದ್ಯಗಳನ್ನ ಅಬುದಾಬಿಯಿಂದ ದುಬೈಗೆ ಸ್ಥಳಾಂತರಿಸಿತು.
ಪಾಕಿಸ್ತಾನ ಕೂಡ ತನ್ನ ಸೂಪರ್ 4 ಹಂತದ ಪಂದ್ಯಗಳನ್ನ ದುಬೈಗೆ ಸ್ಥಳಾಂತರಿಸಲು ಮನವಿ ಮಾಡಿತ್ತು. ಆದರೆ ಪಾಕ್ ಮನವಿಯನ್ನ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಂಗೀಕರಿಸಿಲ್ಲ. ಹೀಗಾಗಿ ದುಬೈನಲ್ಲಿ ಪಂದ್ಯದ ಬಳಿಕ ಪಾಕಿಸ್ತಾನ ಅಬುದಾಬಿಗೆ ಪ್ರಯಾಣ ಬೆಳೆಸಬೇಕಿದೆ. ಇದರಿಂದ ಆಟಗಾರರು ಹೆಚ್ಚು ಬಳಲಲಿದ್ದಾರೆ ಎಂದು ಸರ್ಫಾರಾಜ್ ಅಹಮ್ಮದ್ ಹೇಳಿದ್ದಾರೆ.
ಟೀಂ ಇಂಡಿಯಾ ಸೆ.18 ಹಾಗೂ ಸೆ.19 ಸತತ 2 ದಿನ ಪಂದ್ಯಗಳನ್ನ ಆಡಲಿದೆ. ಹೀಗಾಗಿ ಬಿಸಿಸಿಐ ವೇಳಾಪಟ್ಟಿ ಬದಲಿಸಲು ಸೂಚಿಸಿತ್ತು. ಆದರೆ ವೇಳಾಪಟ್ಟಿ ಬದಲಿಸಲು ಸಾಧ್ಯವಾಗದ ಕಾರಣ, ಭಾರತದ ಪಂದ್ಯಗಳನ್ನ ಅಬುದಾಬಿಯಿಂದ ದುಬೈಗೆ ಸ್ಥಳಾಂತರಿಸಿತ್ತು.