
ಗೃಹರಕ್ಷಕ ದಳ ದೇಶದ ಕಾನೂನು ಮತ್ತು ಶಿಸ್ತು ಪಾಲನೆಯಲ್ಲಿ ಪೊಲೀಸ್ ಇಲಾಖೆಗೆ ಹೆಗಲುಕೊಟ್ಟು ಜಿಲ್ಲಾಡಳಿತಕ್ಕೆ ಪೂರಕವಾಗಿ ಕೆಲಸ ನಿರ್ವಹಿಸುತ್ತದೆ. ಪ್ರಾಕೃತಿಕ ಮತ್ತು ಮಾನವ ನಿರ್ಮಿತ ದುರಂತಗಳಾದ ಭೂಕಂಪ, ನೆರೆ, ಬೆಂಕಿ ಅವಘಡ, ಬಿರುಗಾಳಿ, ಸೈಕ್ಲೋನ್, ಸುನಾಮಿ, ಪ್ರಳಯ, ವಿಮಾನ ದುರಂತ, ರೈಲು ದುರಂತ, ವೈಮಾನಿಕ ದಾಳಿ, ಗ್ಯಾಸ್ ಸ್ಫೋಟ ಹಾಗೂ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ ಮಾಡುತ್ತಾರೆ.
ಇಂದು ಗೃಹ ರಕ್ಷಕರ ರೈಸಿಂಗ್ ಡೇ(ಉತ್ತಾನ ದಿನ)
-ಡಾ|| ಮುರಲೀಮೋಹನ್ ಚೂಂತಾರು,
ಮಾಜಿ ಸಮಾದೇಷ್ಟರು,
ಜಿಲ್ಲಾ ಗೃಹರಕ್ಷಕ ದಳ, ಮಂಗಳೂರು
-ಚರಿತ್ರೆ-
ನಿಷ್ಕಾಮ ಸೇವೆ, ಸೇವೆಯೇ ಪರಮ ಗುರಿ ಎಂಬ ಧ್ಯೇಯ ವಾಕ್ಯದೊಂದಿಗೆ ಸದಾ ಕಾಲ ದೇಶಕ್ಕಾಗಿ ದುಡಿಯುವ ಮತ್ತು ಮಿಡಿಯುವ ಸ್ವಯಂಸೇವಾ ಮನೋಭಾವದ ಶಿಸ್ತು ಬದ್ಧವಾದ ಖಾಕಿ ಸಮವಸ್ತ್ರಧಾರಿ ಸ್ವಯಂಸೇವಕರೇ ನಮ್ಮ ಹೆಮ್ಮೆಯ ಗೃಹರಕ್ಷಕರು. ದೇಶದ ಗಡಿಭಾಗವನ್ನು ವೈರಿಗಳಿಂದ ಮತ್ತು ಭಯೋತ್ಪಾದಕರಿಂದ ಸೈನಿಕರು ರಕ್ಷಿಸುವ ರೀತಿಯಲ್ಲಿ ದೇಶದೊಳಗಿನ ಜನರ ಜೀವ ಮತ್ತು ರಾಷ್ಟ್ರೀಯ ಸಂಪನ್ಮೂಲಗಳನ್ನು ರಕ್ಷಿಸುವ ಹಾಗೂ ತುರ್ತು ಸಂದರ್ಭಗಳಲ್ಲಿ ದೇಶಕ್ಕಾಗಿ ತಮ್ಮ ಸಮಯ ಮತ್ತು ಶಕ್ತಿಯನ್ನು ಶಕ್ತಿಮೀರಿ ನೀಡಿ ದೇಶದ ಐಕ್ಯತೆ ಸ್ವಾತಂತ್ರ್ಯ ಮತ್ತು ಸ್ವಾಯತ್ತೆಯನ್ನು ಕಾಪಾಡುವ ದೇಶದೊಳಗಿನ ಸೈನಿಕರೇ ನಮ್ಮ ಗೃಹರಕ್ಷಕರು ಎಂದರೆ ಅತಿಶಯೋಕ್ತಿಯಾಗದು.
ಎರಡನೇಯ ಮಹಾ ಯುದ್ಧದ ಸಂದರ್ಭದಲ್ಲಿ ಹಿಟ್ಲರನ ನಾಜಿ ಸೈನ್ಯವನ್ನು ಹಿಮ್ಮೆಟ್ಟಿಸಲು ಪೊಲೀಸ್ ಮತ್ತು ಮಿಲಿಟ್ರಿ ಪಡೆಗಳಿಗೆ ಪರ್ಯಾಯವಾಗಿ ಬ್ರಿಟನ್ ದೇಶದ ಜನರೇ ಸೇರಿಕೊಂಡು ನಾಗರಿಕರ ಪಡೆಯೊಂದನ್ನು ಸೃಷ್ಟಿಸಿಕೊಂಡರು. ಈ ಗುಂಪಿಗೆ ಸ್ಥಳೀಯ ರಕ್ಷಣಾ ಕಾರ್ಯಕರ್ತರು (Local Defence Volunteers) ಎಂದೂ ಕರೆಯಲಾಯಿತು. ಮುಂದೆ 1940 ಆಗಸ್ಟ್ 20ರಂದು ವಿನ್ಸ್ಟನ್ ಚರ್ಚಿಲ್ ‘ಹೋಮ್ಗಾರ್ಡ್’ ಎಂದೂ ನಾಮಕರಣ ಮಾಡಿದರು. ಯುದ್ಧದ ಸಂದರ್ಭದಲ್ಲಿ ಗಾಯಗೊಂಡ ಜನರನ್ನು ಆಸ್ಪತ್ರೆಗೆ ಸಾಗಿಸಲು, ಜನರನ್ನು ಉಪಚರಿಸಲು ಮತ್ತು ಸೇನೆಗೆ ನೆರವಾಗಲು ಈ ಹೋಮ್ಗಾರ್ಡ್ಗಳನ್ನು ಬಳಸಲಾಯಿತು. ಮಿಲಿಟರಿ ಸೇರಲು ಸಾಧ್ಯವಾಗದೆ ದೇಶಕ್ಕೆ ಸೇವೆ ಸಲ್ಲಿಸುವ ತುಡಿತ ಇರುವ ಈ ಗುಂಪನ್ನು ಬ್ರೀಟನ್ನಲ್ಲಿ ಮೊದಲು ‘ಡ್ಯಾಡ್ಸ್ ಆರ್ಮಿ’ ಎಂದು ಕರೆಯುತ್ತಿದ್ದರು.
ನಮ್ಮ ಭಾರತ ದೇಶದಲ್ಲಿ 1946ರಲ್ಲಿ ಬಾಂಬೆ ರಾಜ್ಯದಲ್ಲಿ ದೊಂಬಿ, ಹಿಂಸಾಚಾರ, ಕೋಮು ಗಲಭೆಗಳು ಜಾಸ್ತಿಯಾದಾಗ ಭೂಸೇನೆ. ನೌಕಸೇನೆ ಮತ್ತು ವಾಯುಸೇನೆಗೆ ಪೂರಕವಾಗಿ ಕೆಲಸ ಮಾಡಲು ಮೊರಾರ್ಜಿ ದೇಸಾಯಿಯವರ ಮುಂದಾಳತ್ವದಲ್ಲಿ ಸ್ವಯಂಸೇವಾ ಮನೋಭಾವದ ಜನರ ತಂಡ ರಚಿಸಲಾಯಿತು. 1946 ಡಿಸೆಂಬರ್ 6ರಂದು ಅದು ಜನ್ಮ ತಾಳಿತು. ಅವರಿಗೆ ಗೃಹರಕ್ಷಕರು ಎಂದು ನಾಮಕರಣ ಮಾಡಲಾಯಿತು. ಮುಂದೆ 1962ರಲ್ಲಿ ಗೃಹರಕ್ಷಕ ಕಾಯಿದೆಯನ್ನು ಜಾರಿಗೆ ತರಲಾಯಿತು. 1962ರ ಭಾರತ - ಚೀನಾ ಯುದ್ಧದ ಸಂದರ್ಭದಲ್ಲಿ ಈ ಗೃಹರಕ್ಷಕರಿಗೆ ಖಾಕಿ ಸಮವಸ್ತ್ರ ನೀಡಿ ದೇಶ ಸೇವೆಗಾಗಿ ಬಳಸಿಕೊಳ್ಳಲಾಯಿತು. ಅಲ್ಲಿಯವರೆಗೆ ಸಾಮಾನ್ಯ ಧಿರಿಸಿನಲ್ಲಿಯೇ ಗೃಹರಕ್ಷಕರು ದೇಶದ ಶಾಂತಿ ಸುವ್ಯವಸ್ಥೆ ಕಾಪಾಡಲು ಕೆಲಸ ನಿರ್ವಹಿಸುತ್ತಿದ್ದರು.
ಗೃಹರಕ್ಷಕ ದಳ ದೇಶದ ಕಾನೂನು ಮತ್ತು ಶಿಸ್ತು ಪಾಲನೆಯಲ್ಲಿ ಪೊಲೀಸ್ ಇಲಾಖೆಗೆ ಹೆಗಲುಕೊಟ್ಟು ಜಿಲ್ಲಾಡಳಿತಕ್ಕೆ ಪೂರಕವಾಗಿ ಕೆಲಸ ನಿರ್ವಹಿಸುತ್ತದೆ. ಪ್ರಾಕೃತಿಕ ಮತ್ತು ಮಾನವ ನಿರ್ಮಿತ ದುರಂತಗಳಾದ ಭೂಕಂಪ, ನೆರೆ, ಬೆಂಕಿ ಅವಘಡ, ಬಿರುಗಾಳಿ, ಸೈಕ್ಲೋನ್, ಸುನಾಮಿ, ಪ್ರಳಯ, ವಿಮಾನ ದುರಂತ, ರೈಲು ದುರಂತ, ವೈಮಾನಿಕ ದಾಳಿ, ಗ್ಯಾಸ್ ಸ್ಫೋಟ ಹಾಗೂ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ ಮಾಡುತ್ತಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಜನರ ಪ್ರಾಣ ರಕ್ಷಣೆ, ಜಾನುವಾರುಗಳ ರಕ್ಷಣೆ, ದೇಶದ ಸಂಪನ್ಮೂಲಗಳು, ಆಸ್ತಿ ರಕ್ಷಣೆ, ವಿಪತ್ತು ನಿರ್ವಹಣೆ, ಪರಿಹಾರ ಮತ್ತು ಪುನರ್ ವಸತಿ ಕಾರ್ಯಗಳಲ್ಲಿ ಸ್ಥಳೀಯ ಆಡಳಿತಕ್ಕೆ ನೆರವು ನೀಡುತ್ತಾರೆ. ಒಟ್ಟಿನಲ್ಲಿ ಸಾಮಾಜಿಕ ಶಾಂತಿ, ನಮ್ಮ ಕಾನೂನು ಸುವ್ಯವಸ್ಥೆ ಪುನರ್ಸ್ಥಾಪಿಸಲು ದೊಂಬಿ, ಹಿಂಸಾಚಾರ, ಕೋಮುಗಲಭೆಗಳಲ್ಲಿ ಜಿಲ್ಲಾಡಳಿತ ಜೊತೆಗೂಡಿ ಹಗಲಿರುಳು ಶ್ರಮಿಸುತ್ತಾರೆ. ಅದೇ ರೀತಿ ಶಾಂತಿ ಸಮಯದಲ್ಲಿ ಗೃಹರಕ್ಷಕರು ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಅಬಕಾರಿ ಇಲಾಖೆ, ಸಾರಿಗೆ ಇಲಾಖೆ, ಪ್ರಯೋಗ ವಿಧಿ ವಿಜ್ಞಾನ, ಕಾರಾಗೃಹ ಇಲಾಖೆ, ಸರಕಾರಿ ಪಹರೆ ಕರ್ತವ್ಯ, ಪ್ರಾಚ್ಯ ವಸ್ತು ಸಂಗ್ರಹಾಲಯಗಳ ಪಹರೆ, ಪ್ರವಾಸಿ ಮಿತ್ರ ಪೊಲೀಸ್, ಬೀಟ್ ಪೊಲೀಸ್, ಕರಾವಳಿ ಕಾವಲು ಪಡೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಹೀಗೆ ಹತ್ತು ಹಲವು ಇಲಾಖೆಗಳಲ್ಲಿ ಗೃಹರಕ್ಷಕರು ಕೆಲಸ ಮಾಡುತ್ತಾರೆ ಮತ್ತು ವಿಐಪಿ ಬಂದೋಬಸ್ತ್, ಮುಷ್ಕರ, ಜಾತ್ರೆ, ಚಳವಳಿ, ಹರತಾಳಗಳ ಸಂದರ್ಭಗಳಲ್ಲಿ, ಚುನಾವಣಾ ಸಂದರ್ಭಗಳಲ್ಲಿ ಪಾರದರ್ಶಕವಾದ ನ್ಯಾಯಸಮ್ಮತ, ಕಾನೂನುಬದ್ಧ ಚುನಾವಣೆ ನಡೆಸಲು ಸ್ಥಳೀಯ ಆಡಳಿತಕ್ಕೆ ನೆರವಾಗುತ್ತಾರೆ. ಇನ್ನು ಗಡಿ ರಕ್ಷಣಾ ಗೃಹರಕ್ಷಣಾ ಪಡೆ ಗೃಹರಕ್ಷಕ ದಳದ ವಿಶೇಷ ಪಡೆಯಾಗಿದ್ದು, ದೇಶದ ಗಡಿಭಾಗಗಳಲ್ಲಿ ಗಡಿ ಕಾಯುವ ಸೈನಿಕರಿಗೆ ದೇಶ ರಕ್ಷಣೆ ಮಾಡಲು ಸಹಾಯ ಮಾಡುತ್ತದೆ.
ಸ್ವಯಂಸೇವಾ ಮನೋಭಾವ ಇರುವ ದೇಶಕ್ಕಾಗಿ ಏನಾದರೂ ಸೇವೆ ಸಲ್ಲಿಸಬೇಕು ಎಂಬ ತುಡಿತ ಇರುವ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಇರುವ ಸಮಾಜದ ಎಲ್ಲಾ ಸ್ತರದ ವ್ಯಕ್ತಿಗಳು ಯಾವುದೇ ಜಾತಿ, ಮತ, ಧರ್ಮ ಪಂಗಡ ಹಾಗೂ ಲಿಂಗಬೇಧವಿಲ್ಲದೆ ಈ ಗೃಹರಕ್ಷಕ ದಳವನ್ನು ಸೇರಬಹುದಾಗಿದೆ. ಕನಿಷ್ಠ 19 ವರ್ಷ, ಗರಿಷ್ಠ 50 ವರ್ಷ, ಕನಿಷ್ಠ ಎಸ್ಎಸ್ಎಲ್ಸಿ ಆಗಿರಬೇಕು. ಅಪರಾಧದ ಹಿನ್ನೆಲೆ ಇರಬಾರದು. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ಯಾರು ಬೇಕಾದರೂ ಗೃಹರಕ್ಷಕ ದಳ ಸೇರಬಹುದಾಗಿದೆ. ಹೀಗೆ ಸೇರಿದ ವ್ಯಕ್ತಿಗಳಿಗೆ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ನೀಡಿ ಅಗತ್ಯವಿದ್ದಾಗಲೆಲ್ಲಾ ಸೇವೆಗೆ ಬಳಸಿಕೊಳ್ಳಲಾಗುತ್ತದೆ. ಗೃಹರಕ್ಷಕ ಇಲಾಖೆಗೆ ಸೇರಲು ಬೇಕಾದಾಗ ಸರ್ಕಾರವೇ ನಿಗದಿಪಡಿಸಿದ ಎ, ಬಿ, ಡಿ, ಅರ್ಜಿ ನಮೂನೆಗಳು ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಲಭ್ಯವಿರುತ್ತದೆ. ಈ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಅರ್ಜಿಯ ಜೊತೆಗೆ ವಿದ್ಯಾರ್ಹತೆ, ವಯಸ್ಸಿನ ದಾಖಲೆ, ವೈದ್ಯರ ಪ್ರಮಾಣ ಪತ್ರ, ಫೋಟೋ ಮತ್ತು ವಾಸ ಸ್ಥಳಗಳ ದಾಖಲೆಗಳ ನಕಲು ಪ್ರತಿ ನೀಡಬೇಕಾಗುತ್ತದೆ. ಇದರ ಬಳಿಕ ಸಂದರ್ಶನ ಪ್ರಕ್ರಿಯೆ ನಡೆದು ನಿಮ್ಮನ್ನು ಇಲಾಖೆಗೆ ಸಿ ಪ್ರಮಾಣಪತ್ರ ನೀಡಿ ಸೇರಿಸಿಕೊಳ್ಳಲಾಗುತ್ತದೆ. ಒಮ್ಮೆ ಸೇರಿದ ಬಳಿಕ ನಿಮ್ಮ ಮೇಲೆ ಪೊಲೀಸ್ ಕೇಸು ದಾಖಲಾದಲ್ಲಿ ನಿಮ್ಮನ್ನು ಇಲಾಖೆಯಿಂದ ತೆಗೆದುಹಾಕಲಾಗುತ್ತದೆ. ಈ ರೀತಿ ಆಯ್ಕೆಯಾದ ಗೃಹರಕ್ಷಕರಿಗೆ 10 ದಿನಗಳ ಮೂಲ ತರಬೇತಿ ಶಿಬಿರ ನಡೆಸಲಾಗುತ್ತದೆ. ಒಟ್ಟಿನಲ್ಲಿ ಗೃಹರಕ್ಷಕರಿಗೆ ಬೇಕಾದ ಎಲ್ಲಾ ಮೂಲ ತರಬೇತಿ ನೀಡಿ ಖಾಕಿ ಸಮವಸ್ತ್ರ ಮತ್ತು ಲಾಠಿಯನ್ನು ನೀಡಿ ದೇಶ ಸೇವೆಗೆ ಸಜ್ಜುಗೊಳಿಸಲಾಗುತ್ತದೆ.
ಕೊನೆಮಾತು:
ಗೃಹರಕ್ಷಕದಳ ಎನ್ನುವುದು, ಸರಕಾರಿ ಪ್ರಾಯೋಜಿತವಾದ ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಸಮುದಾಯದ ಎಲ್ಲಾ ಜಾತಿ ಧರ್ಮ ಮತ್ತು ವರ್ಗದ ಜನರಿಗೆ ಮುಕ್ತವಾಗಿ ತೆರೆದಿರುತ್ತದೆ. ಅವರು ಮಾಡುವ ಕೆಲಸಕ್ಕೆ ಸಂಬಳವಿಲ್ಲದಿದ್ದರೂ ಸರಕಾರವೇ ನಿಗದಿಪಡಿಸಿದ ಗೌರವ ಧನವನ್ನು ನೀಡಿ ಅವರ ಸೇವೆಯನ್ನು ಸ್ಮರಿಸಲಾಗುತ್ತದೆ. ಇದು ಖಾಯಂ ನೌಕರಿಯಲ್ಲದ ಕಾರಣದಿಂದ ಯಾವುದೇ ಪಿಂಚಣಿ, ನಿವೃತ್ತಿ ಭತ್ಯೆ ಮತ್ತು ಇತರ ಸೌಲಭ್ಯಗಳು ದೊರಕುವುದಿಲ್ಲ. ಕರ್ತವ್ಯ ಸಮಯದಲ್ಲಿ ಏನಾದರೂ ಅಪಘಾತವಾದಲ್ಲಿ ಕೋರಿಕಾ ಪ್ರಾಧಿಕಾರ ಅವರ ಖರ್ಚನ್ನು ಭರಿಸುತ್ತದೆ. ಗೃಹರಕ್ಷಕರ ಕ್ಷೇಮವನ್ನು ಕಾಪಾಡಲು ಗೃಹರಕ್ಷಕರ ಕ್ಷೇಮಾಭಿವೃದ್ಧಿ ನಿಧಿ ಕೂಡಾ ಲಭ್ಯವಿದೆ. ನಮ್ಮ ದೇಶದಲ್ಲಿ ಸುಮಾರು ಆರು ಲಕ್ಷ ಗೃಹರಕ್ಷಕರು ದೇಶದ 28 ರಾಜ್ಯ ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಷ್ಕಾಮ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 30 ಸಾವಿರ ಗೃಹರಕ್ಷಕರು ಕೆಲಸ ಮಾಡುತ್ತಿದ್ದಾರೆ. ಇಂತಹ ನಿಸ್ವಾರ್ಥ, ಪ್ರಾಮಾಣಿಕ, ದೇಶ ಪ್ರೇಮಿ, ನಿಷ್ಕಳಂಕ, ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರಿಗೆ ಗೃಹರಕ್ಷಕ ದಳದ ರೈಸಿಂಗ್ ದಿನದಂದು ಇರಲಿ ಒಂದು ಸಲಾಮ್... ಜೈಹಿಂದ್.