
ಯಾದಗಿರಿ (ಡಿ.10): ಪರಿಷತ್ತಿನಲ್ಲಿ ಅಕ್ಕಿ ಅಕ್ರಮ ವಿಚಾರ ಕಾವೇರುತ್ತಿದ್ದಂತೆಯೇ, ಸಿ. ಟಿ.ರವಿಯವರಿಗೆ ಉತ್ತರಿಸಲು ಎದ್ದುನಿಂತ ಸಚಿವ ಪ್ರಿಯಾಂಕ್ ಖರ್ಗೆ, ಯಾದಗಿರಿ ಪ್ರಕರಣ ಸಿಐಡಿ ತನಿಖೆಗೆ ವಹಿಸಿದೆ. ಅದರಲ್ಲಿ ಎ-1, ಎ-2, ಎ-3 ಯಾರಿದ್ದಾರೆ ಅಂತ ನೋಡಿ, ಇಲ್ಲಿ ಭಾಷಣ ಮಾಡುವುದರಿಂದ ಏನೂ ಆಗುವುದಿಲ್ಲ, ಯಾದಗಿರಿ ಪ್ರಕರಣದಲ್ಲಿ ಯಾರಿದ್ದಾರೆ ಅನ್ನೋದನ್ನು ರವಿಯವರು ತಿಳಿದುಕೊಳ್ಳಲಿ ಎಂದು ಪ್ರತ್ಯುತ್ತರಕ್ಕೆ ನಿಂತರು.
ಸಚಿವ ಖರ್ಗೆ ಉತ್ತರ ನೀಡುವ ವೇಳೆ ಪರಿಷತ್ತಿನಲ್ಲಿ ಕೆಲಕಾಲ ವಾಕ್ಸ್ಮರ ನಡೆಯಿತು. ಹಗರಣ 30 ಜಿಲ್ಲೆಗಳಲ್ಲೂ ವ್ಯಾಪಿಸಿದೆ, ಕೊಲೆಯಾಗಿದೆ, ಹೀಗಾಗಿ ಎಸ್ಐಟಿ ತನಿಖೆಗೆ ಆಗ್ರಹಿಸುವುದಾಗಿ ಸಿ. ಟಿ. ರವಿ ಹೇಳಿದರೆ, ಇದಕ್ಕೆ ದನಿಗೂಡಿಸಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಚಿವರ ಉತ್ತರದಲ್ಲಿ ರಾಜ್ಯವ್ಯಾಪಿ ದಂಧೆ ನಡೆದಿದೆ ಅನ್ನೋದು ಸ್ಪಷ್ಟವಾಗಿದೆ. ಆದರೆ, ಶಿಕ್ಷೆ ಯಾರಿಗೆ ಆಗಿದೆ ಎಂದು ಪ್ರಶ್ನಿಸಿದ ಅವರು, ಬೇರೆ ಬೇರೆ ಕಡೆಗಳಲ್ಲಿ ಆಗಿರುವುದು ಕಣ್ಣಿಗೆ ಕಾಣದೆ ಹೋಗಿದೆ. ಯಾದಗಿರಿ ಪ್ರಕರಣ ಸಿಐಡಿಗೆ ಕೊಟ್ಟಿದ್ದೇವೆ ಎಂದು ಹೇಳುವವರು 2 ವರ್ಷದ ಹಿಂದೆ ಅಲ್ಲಿನ ಪ್ರಕರಣ ಎಲ್ಲಿ ಕೊಟ್ಟಿದ್ದೀರೆಂದು ತಿರುಗೇಟು ನೀಡಿ, ಈ ಎಲ್ಲ ಕಾರಣಕ್ಕೆ ಎಸ್ಐಟಿ ತನಿಖೆ ಬೇಕಿದೆ ಎಂದು ಆಗ್ರಹಿಸಿದರು.
ಈ ವೇಳೆ ಉತ್ತರಿಸಿದ ಸಚಿವ ಮುನಿಯಪ್ಪ, ಅಕ್ಕಿ ಅಕ್ರಮದಲ್ಲಿ ಕ್ರಮ ಕೈಗೊಂಡಿದ್ದೇವೆ, ಸಿಐಡಿ ತನಿಖೆಗೆ ಕೊಟ್ಟಿದ್ದೇವೆ ಎಂದರು. ಆಗ, ಇಷ್ಟಾದರೂ, ಪದೇ ಪದೇ ಪ್ರಕರಣಗಳು ನಡೆಯುತ್ತಿರುವುದು ನೋಡಿದರೆ ಅಕ್ರಮ ದಂಧೆಕೋರರಿಗೆ ಭವಯಲ್ಲವೇ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಲೆ ಮತ್ತೇ ಎದ್ದು ನಿಂತ ಸಚಿವ ಪ್ರಿಯಾಂಕ ಖರ್ಗೆ, ಯಾದಗಿರಿ ಅಕ್ರಮದಲ್ಲಿ ಬಿಜೆಪಿಯವರೇ ಭಾಗಿಯಾಗಿದ್ದಾರೆ. ಬಿಜೆಪಿಯ ಪದಾಧಿಕಾರಿಗಳೇ ಅಕ್ರಮದಲ್ಲಿದ್ದಾರೆ, ಚಿತ್ತಾಪುರದಲ್ಲಿ ಬಿ-ಫಾರಂ ಪಡೆದ ಅಭ್ಯರ್ಥಿಯೇ ಶಾಮೀಲು, ಎ-1, ಎ-2, ಎ-3 ಬಿಜೆಪಿಯವರು, ಚಿತ್ತಾಪೂರ ಬಿಜೆಪಿ ಅಭ್ಯರ್ಥಿ ಅವರ ತಂದೆ ಆರೋಪಿಗಳು, ಸನಡೆಯಿತು.
ಪಕ್ಷದ ಹೆಸರು ಕಡತದಿಂದ ತೆಗೆಯುವಂತೆ ಆಗ್ರಹಿಸಿದ ಬಿಜೆಪಿ ಸದಸ್ಯರು, ಅಕ್ಕಿ ಅಕ್ರಮದ ಬಗ್ಗೆ ಉತ್ತರಿಸಲು ಮುನಿಯಪ್ಪ ಅವರ ಬದಲು ಸಚಿವ ಖರ್ಗೆ ಏಕೆ ಉತ್ತರಿಸುತ್ತಿದ್ದಾರೆ. ಕೇಂದ್ರ ಸಚಿವರಾಗಿದ್ದ ಮುನಿಯಪ್ಪ ಅವರಿಗೆ ಅವರಿಗೆ ಉತ್ತರಿಸಲು ಸಾಮರ್ಥ್ಯವಿದೆ ಎಂದು ಟಾಂಗ್ ನೀಡಿದರು. ಈ ಬಗ್ಗೆ ಅರ್ಧಗಂಟೆ ಚರ್ಚೆಗೆ ಅವಕಾಶ ಮಾಡುವಂತೆ ಸ್ಪೀಕರ್ ಅವರಿಗೆ ಆಗ್ರಹಿಸಿದರು. ಆರೋಪ- ಪ್ರತ್ಯಾರೋಪ ವಾತಾವರಣ ತಿಳಿಗೊಳಿಸಲು ಸ್ಪೀಕರ್ ಹೊರಟ್ಟಿ ಸಮಾಧಾನಕ್ಕೆ ಮುಂದಾದರು. ಅಕ್ಕಿ ಅಕ್ರಮ ಈಗಷ್ಟೇ ಅಲ್ಲ, ಹಿಂದಿನ ಸರ್ಕಾರಗಳೂ ಇದ್ದಾಗನಿಂದಲೂ ನಡೆದಿದೆ ಎಂದು ಸಚಿವ ಮುನಿಯಪ್ಪ ಸಮರ್ಥನೆಗೆ, ವಿಪಕ್ಷಗಳು ಅರ್ಧ ಗಂಟೆ ಕಾಲ ಚರ್ಚೆಗೆ ಆಗ್ರಹಿಸಿದಾಗ, ಸ್ಪೀಕರ್ ಹೊರಟ್ಟಿ, ಸಮಾಧಾನಪಡಿಸಿ ಮುಂದಿನ ಪ್ರಶ್ನೆಯತ್ತ ಸಾಗಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.