
ನವದೆಹಲಿ(ಸೆ.29): ವಿವಾದಾತ್ಮ ಹೇಳಿಕೆಯಿಂದಲೇ ಹೆಚ್ಚು ಖ್ಯಾತಿ ಪಡೆದಿರುವ ದಿಗ್ವಿಜಯ್ ಸಿಂಗ್ ಇದೀಗ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಆದರೆ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ದಿಗ್ವಿಜಯ್ ಸಿಂಗ್ ನೀಡಿದ ಹೇಳಿಕೆ ಇದೀಗ ಬಿಜೆಪಿ ಆರೋಪಕ್ಕೆ ಪುಷ್ಠಿ ನೀಡುವಂತಿದೆ. ಕಾಂಗ್ರೆಸ್ ಅಧ್ಯಕ್ಷ ಯಾರೇ ಆದರೂ, ನಾವೆಲ್ಲೂ ಗಾಂಧಿ ಕುಟುಂಬದ ನಾಯಕತ್ವದಲ್ಲಿ ಮುನ್ನಡೆಯುತ್ತೇವೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಈ ಹೇಳಿಕೆ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯ ಅಗತ್ಯತೆಯನ್ನೇ ಪ್ರಶ್ನಿಸಿದೆ. ಕಾಂಗ್ರೆಸ್ ಪರಿವಾರ ಪಾರ್ಟಿ, ಗಾಂಧಿ ಕುಟುಂಬಕ್ಕೆ ಅಧಿಕಾರ ಎಂದು ಪದೇ ಪದೇ ಚುಚ್ಚುತ್ತಿದೆ. ಇದರಿಂದ ಹೊರಬರಲು ಹಾಗೂ ಪಕ್ಷದೊಳಗಿನ ಬಂಡಾಯ ಶಮನಗೊಳಿಸಲು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಕಾಂಗ್ರೆಸ್ ನಿರ್ಧರಿಸಿತ್ತು. ಇದೀಗ ದಿಗ್ವಿಜಯ್ ನೀಡಿರುವ ಹೇಳಿಕೆ ಸದ್ಯ ನಡೆಯುತ್ತಿರುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಹಾಗೂ ಆಯ್ಕೆಯಾಗುವ ಅಧ್ಯಕ್ಷ ಕೇವಲ ಹೆಸರಿಗೆ ಮಾತ್ರ, ಅಧಿಕಾರ ಗಾಂಧಿ ಕುಟುಂಬದಲ್ಲೇ ಇರಲಿದೆ ಅನ್ನೋ ಆರೋಪಗಳಿಗೆ ಪುಷ್ಠಿ ನೀಡುತ್ತಿದೆ.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಭಾರಿ ಬಿರುಗಾಳಿಯನ್ನೇ ಎಬ್ಬಿಸಿದೆ. ಸ್ವಂತ ಬಲದಲ್ಲಿ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ ಅಧ್ಯಕ್ಷ ಚುನಾವಣೆ ತಂದಿರುವ ತಲೆನೋವು ಇನ್ನೂ ಇಳಿದಿಲ್ಲ. ಇದರ ಬೆನ್ನಲ್ಲೇ ದಿಗ್ವಿಜಯ್ ಸಿಂಗ್ ನೀಡಿರುವ ಹೇಳಿಕೆ ಕಾಂಗ್ರೆಸ್ ತೀವ್ರ ಇರಿಸುಮುರಿಸು ತಂದಿದೆ. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಹೈಡ್ರಾಮ, ಸಚಿನ್ ಪೈಲೆಟ್ ಆಕ್ರೋಶ ಶಮನಗೊಳಿಸಲು ಕಾಂಗ್ರೆಸ್ ಹರಸಾಹಸ ಪಡುತ್ತಿದೆ. ಇದೀಗ ದಿಗ್ವಿಜಯ್ ಸಿಂಗ್, ಗಾಂಧಿ ಹಾಗೂ ನೆಹರೂ ಕುಟಂಬದ ನಾಯಕತ್ವವೇ ಅಂತಿಮ ಎಂಬ ಹೇಳಿಕೆ ತೀವ್ರ ಹಿನ್ನಡೆ ಕಾರಣವಾಗಿದೆ
ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಬಿಜೆಪಿ ಮಾಜಿ ನಾಯಕ ಸ್ಪರ್ಧೆ, ಗೆಹ್ಲೋಟ್ ಪ್ಲಾನ್ ಸಕ್ಸಸ್!
ನಾನು ನಾಮಪತ್ರ ಸಲ್ಲಿಸಲು ದೆಹಲಿಗೆ ಆಗಮಿಸಿದ್ದೇನೆ. ನಾಮಪತ್ರ ಸಲ್ಲಿಸಿ ಬಳಿಕ ನಾನು ಭಾರತ್ ಜೋಡೋ ಯಾತ್ರೆಗೆ ಮರಳುತ್ತೇನೆ. ಹಿರಿಯ ನಾಯಕರಾದ ಎಕೆ ಆ್ಯಂಟಿನಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕೆಲವರ ಜೊತೆ ಚರ್ಚಿಸಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಕಾಂಗ್ರೆಸ್ ಪಕ್ಷ ದೇಶವನ್ನು ವಿಭಜಿಸುವುದಿಲ್ಲ. ಸಂವಿಧಾನವನ್ನು ದುರ್ಬಲಗೊಳಿಸುವುದಿಲ್ಲ. ಸದ್ಯದ ಪರಿಸ್ಥಿತಿಯಿಂದ ದೇಶವನ್ನು ಕಾಪಾಡುವುದು ಹೇಗೆ ಎಂಬುದರ ಕುರಿತು ಯೋಜನೆ ರೂಪಿಸುತ್ತೇವೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬ ಆಪ್ತರಾಗಿರುವ ಮತ್ತಷ್ಟುನಾಯಕರ ಹೆಸರು ಕೇಳಿಬಂದಿದೆ. ಈ ಪೈಕಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಾಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ವೇಣುಗೋಪಾಲ್ ಅವರನ್ನು ಗಾಂಧಿ ಕುಟುಂಬ ಕಣಕ್ಕಿಳಿಸುವ ಸಾಧ್ಯತೆ ಇದೇ. ಮುಕುಲ್ ವಾಸ್ನಿಕ್ ಕೂಡಾ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ. ನಾಳೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಅಚ್ಚರಿ ಅಭ್ಯರ್ಥಿಗಳು ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಕಾಂಗ್ರೆಸ್ನಲ್ಲಿ ಮತ್ತೊಂದು ಗುದ್ದಾಟಕ್ಕೆ ವೇದಿಕೆ ರೆಡಿ, ಸೋನಿಯಾ ಗಾಂಧಿ ಭೇಟಿಯಾದ ಸಚಿನ್ ಪೈಲೆಟ್!
ಅ.17ಕ್ಕೆ ಚುನಾವಣೆ, 19ಕ್ಕೆ ಫಲಿತಾಂಶ
ನಾಮಪತ್ರ ಹಿಂಪಡೆಯಲು ಅ.8 ಕೊನೆಯ ದಿನವಾಗಿದೆ. ಅ.17 ರಂದು ಎಲ್ಲ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಕಚೇರಿಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದೆ. ಅ.19ರಂದು ಫಲಿತಾಂಶ ಪ್ರಕಟವಾಗಲಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.