ಬಿಜೆಪಿಯಲ್ಲಿ ಆರ್‌ಆರ್‌ ನಗರ ಅಭ್ಯರ್ಥಿ ಆಯ್ಕೆ ಗೊಂದಲ : ಯಾರು ಫೈನಲ್

By Kannadaprabha NewsFirst Published Oct 12, 2020, 7:04 AM IST
Highlights

ರಾಜ್ಯದ ಎರಡು ಕ್ಷೇತ್ರಗಳ ಚುನಾವಣೆಗೆ ಇನ್ನೆರಡು ದಿನವಷ್ಟೇ ಬಾಕಿ ಉಳಿದಿದೆ. ಇದೇ ವೇಳೆ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಗೊಂದಲ ಮಾತ್ರ ಇನ್ನೂ ಮುಂದುವರಿದಿದೆ

ಬೆಂಗಳೂರು (ಅ.12):  ಸಾಮಾನ್ಯವಾಗಿ ಇತರ ರಾಜಕೀಯ ಪಕ್ಷಗಳಿಗಿಂತ ತನ್ನ ಅಭ್ಯರ್ಥಿಗಳನ್ನು ಮೊದಲು ಘೋಷಿಸುವ ಬಿಜೆಪಿಯು ಪ್ರಸಕ್ತ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ವಿಳಂಬ ತಂತ್ರ ಅನುಸರಿಸುತ್ತಿದೆ.

"

ಈ ವಿಳಂಬಕ್ಕೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಗೊಂದಲವೇ ಮುಖ್ಯ ಕಾರಣ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸುವ ಅವಧಿ ಇದೇ ಶುಕ್ರವಾರ ಅಂತ್ಯಗೊಳ್ಳಲಿದೆ. ಶಿರಾ ಕ್ಷೇತ್ರದಿಂದ ರಾಜೇಶ್‌ಗೌಡ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಹೆಚ್ಚಾಗಿದ್ದು, ರಾಜರಾಜೇಶ್ವರಿನಗರ ಕ್ಷೇತ್ರದ ಕಾರಣಕ್ಕಾಗಿ ಇದನ್ನೂ ಪ್ರಕಟಿಸುವ ಗೋಜಿಗೆ ಬಿಜೆಪಿ ವರಿಷ್ಠರು ಮುಂದಾಗಿಲ್ಲ.

ಕಾಂಗ್ರೆಸ್‌ ತೊರೆದು ಬಂದ ಮುನಿರತ್ನ ಅವರಿಗೆ ಟಿಕೆಟ್‌ ನೀಡುವುದರ ಬಗ್ಗೆ ಪಕ್ಷದಲ್ಲಿ ಭಿನ್ನ ಅಭಿಪ್ರಾಯಗಳು ಕೇಳಿಬಂದಿರುವುದರಿಂದ ಈವರೆಗೆ ಸ್ಪಷ್ಟನಿಲುವು ಕೈಗೊಳ್ಳಲು ಸಾಧ್ಯವಾಗಿಲ್ಲ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಂಡಿದ್ದ ಪಕ್ಷದ ರಾಜ್ಯ ಕಾರ್ಯದರ್ಶಿ ಪಿ.ಮುನಿರಾಜುಗೌಡ ಅವರ ಪರವಾಗಿ ಪಕ್ಷದಲ್ಲಿ ಬಲವಾದ ಕೂಗು ಕೇಳಿಬಂದಿದೆ. ಮುನಿರತ್ನ ವಿರುದ್ಧ ಹಲವು ಆರೋಪಗಳು ಇರುವುದರಿಂದ ಮುನಿರಾಜುಗೌಡ ಅವರಿಗೇ ಟಿಕೆಟ್‌ ನೀಡಬೇಕು ಎಂದು ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.

 ಆದರೆ, ನೀಡಿದ ಮಾತಿನಂತೆ ಮುನಿರತ್ನ ಅವರಿಗೆ ಟಿಕೆಟ್‌ ನೀಡದಿದ್ದರೆ ವಚನಭ್ರಷ್ಟತೆಯ ಕಳಂಕ ಅಂಟಿಕೊಳ್ಳಬಹುದು ಎಂಬ ಆತಂಕವೂ ಇದೆ. ಹೀಗಾಗಿ, ವರಿಷ್ಠರಿಗೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸೋಮವಾರ ಅಥವಾ ಮಂಗಳವಾರದ ಹೊತ್ತಿಗೆ ಟಿಕೆಟ್‌ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

click me!