ತೆಲಂಗಾಣದಲ್ಲಿ ರಾಜ್ಯ ಕಾಂಗ್ರೆಸಿಗರು ಕೆಲಸ ಮಾಡಿದ್ರಲ್ಲಿ ತಪ್ಪೇನು: ಸಚಿವ ದಿನೇಶ್‌ ಗುಂಡೂರಾವ್‌

By Kannadaprabha NewsFirst Published Dec 8, 2023, 4:00 AM IST
Highlights

ಕರ್ನಾಟಕ ಕಾಂಗ್ರೆಸ್‌ ನಾಯಕರು ತೆಲಂಗಾಣ ರಾಜ್ಯದ ಚುನಾವಣೆಯಲ್ಲಿ ಕೆಲಸ ಮಾಡಿದ್ದರಲ್ಲಿ ತಪ್ಪೇನಿದೆ. ದಕ್ಷಿಣ ಭಾರತದಲ್ಲಿ ಎರಡನೇ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದನ್ನು ಸಹಿಸಲಾಗದೆ ಬಿಜೆಪಿಯವರು ಅಸೂಯೆ ಪಟ್ಟುಕೊಂಡು ಅನಗತ್ಯ ಟೀಕೆ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು. 

ಬೆಳಗಾವಿ (ಡಿ.08): ಕರ್ನಾಟಕ ಕಾಂಗ್ರೆಸ್‌ ನಾಯಕರು ತೆಲಂಗಾಣ ರಾಜ್ಯದ ಚುನಾವಣೆಯಲ್ಲಿ ಕೆಲಸ ಮಾಡಿದ್ದರಲ್ಲಿ ತಪ್ಪೇನಿದೆ. ದಕ್ಷಿಣ ಭಾರತದಲ್ಲಿ ಎರಡನೇ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದನ್ನು ಸಹಿಸಲಾಗದೆ ಬಿಜೆಪಿಯವರು ಅಸೂಯೆ ಪಟ್ಟುಕೊಂಡು ಅನಗತ್ಯ ಟೀಕೆ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು. 

ಸುವರ್ಣಸೌಧದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಚಿವರಾಗಿ ನಮ್ಮ ಕರ್ತವ್ಯವನ್ನು ನಾವು ಅರಿತಿದ್ದೇವೆ. ಜೊತೆಗೆ ತೆಲಂಗಾಣದಲ್ಲಿ ಪಕ್ಷ ವಹಿಸಿದ ಜವಾಬ್ದಾರಿಯನ್ನೂ ನಾವು ಒಟ್ಟಾಗಿ ನಿಭಾಯಿದ್ದೇವೆ. ವಿಶೇಷವಾಗಿ ನನಗೆ ತೆಲಂಗಾಣದ ವಾರಂಗಲ್ ಜಿಲ್ಲೆಯ ಕ್ಷೇತ್ರಗಳ ಜವಾಬ್ದಾರಿ ನೀಡಲಾಗಿತ್ತು. ವಾರಂಗಲ್ ನ 11 ಕ್ಷೇತ್ರಗಳಲ್ಲಿ ನಾವು 10 ಕ್ಷೇತ್ರಗಳನ್ನು ಗೆದ್ದಿದ್ದೇವೆ. ಅದೇ ರೀತಿ ಇತರೆ ನಾಯಕರಿಗೆ ವಹಿಸಿದ್ದ ಕ್ಷೇತ್ರಗಳಲ್ಲೂ ಸಾಕಷ್ಟರಲ್ಲಿ ಗೆಲುವು ಸಾಧಿಸಿದ್ದೇವೆ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ತೆಲಂಗಾಣದಲ್ಲೇನು ಕೆಲಸ ಎಂಬ ಬಿಜೆಪಿ ಟೀಕೆ ಅರ್ಥಹೀನ ಎಂದರು.

Latest Videos

ಫಲಿತಾಂಶ ಪ್ರಕಟವಾದ ಎರಡೇ ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆ ಮಾಡಿ ಸುಲಲಿತವಾಗಿ ಸರ್ಕಾರ ರಚಿಸಲು ಅನುವು ಮಾಡಿಕೊಟ್ಟಿದೆ. ಆದರೆ ಉತ್ತರ ಭಾರತದ ಮೂರು ರಾಜ್ಯಗಳಲ್ಲಿ‌ ಗೆದ್ದಿರುವ ಬಿಜೆಪಿಗೆ ಇನ್ನೂ ಒಂದೂ ರಾಜ್ಯದ ಮುಖ್ಯಮಂತ್ರಿ ಆಯ್ಕೆ ಮಾಡಲು ಸಾಧ್ಯವಾಗಿಲ್ಲ.‌ ಬಿಜೆಪಿಯವರು ಕಾಂಗ್ರೆಸ್‌ ನಾಯಕರ ಬಗ್ಗೆ ಅನಗತ್ಯ ಟೀಕೆ ಮಾಡುವ ಬದಲು ಗೆದ್ದಿರುವ ರಾಜ್ಯಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಮುಸ್ಲಿಮರನ್ನು ಸಂತೈಸುತ್ತಿರುವ ಸಿಎಂ ಸಿದ್ದರಾಮಯ್ಯ: ಯಡಿಯೂರಪ್ಪ ಟೀಕೆ

ವಸತಿ ಶಾಲೆಗಳಲ್ಲಿ ತಾಲೂಕಿಗೆ ಮೀಸಲು ಶೇ.60ಕ್ಕೆ ಹೆಚ್ಚಳ: ವಸತಿ ಶಾಲೆಗಳಲ್ಲಿ ಆಯಾ ತಾಲೂಕಿನ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಇದ್ದ ಮೀಸಲಾತಿಯನ್ನು ಮುಂದಿನ ವರ್ಷದಿಂದ ಅನ್ವಯವಾಗುವಂತೆ ಶೇ.60ಕ್ಕೆ ಹೆಚ್ಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಕಾಂಗ್ರೆಸ್‌ ಸದಸ್ಯ ಶಿವಲಿಂಗೇಗೌಡ ಪ್ರಶ್ನೆಗೆ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಪರವಾಗಿ ಉತ್ತರಿಸಿದ ಅವರು, ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಸ್ಥಳೀಯ ಪ್ರದೇಶದಲ್ಲಿ ವಾಸಿಸುತ್ತಿರುವ, ಆಯಾ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಶೇ.60 ರಷ್ಟು ಸ್ಥಾನಗಳನ್ನು ಮೀಸಲಿರಿಸಲು ಸರ್ಕಾರ ಆದೇಶ ಹೊರಡಿಸಿದೆ. ವಸತಿ ಶಾಲೆಗಳ ಶೇ.60ರಷ್ಟು ಮೀಸಲಾತಿಯು 2024-25ನೇ ಸಾಲಿನಿಂದ ಅನುಷ್ಠಾನಕ್ಕೆ ಬರಲಿದೆ. ಉಳಿದ ಶೇ.40ರಷ್ಟು ಸ್ಥಾನಗಳನ್ನು ಅಂತರ್ ಜಿಲ್ಲೆ ಮೂಲಕ ಭರ್ತಿ ಮಾಡಲಾಗುವುದು ಎಂದರು.

click me!