ಬೈ ಎಲೆಕ್ಷನ್ ಗೆಲುವು, ಮುಂದಿನ ವಿಘ್ನ ನಿವಾರಣೆಗೆ ಬಿಎಸ್‌ವೈ ಸುದರ್ಶನ ಹೋಮ!

By Kannadaprabha NewsFirst Published Dec 16, 2019, 7:56 AM IST
Highlights

ಬಿಎಸ್‌ವೈ ಸುದರ್ಶನ ಹೋಮ| ಉಪ ಚುನಾವಣೆ ಗೆಲುವು, ಮುಂದಿನ ವಿಘ್ನ ನಿವಾರಣೆಗಾಗಿ ಪೂಜೆ

ಬೆಂಗಳೂರು[ಡಿ.16]: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಧವಳಗಿರಿ ಮನೆಯಲ್ಲಿ ಭಾನುವಾರ ಹೋಮ- ಹವನ ಹಮ್ಮಿಕೊಳ್ಳುವ ಮೂಲಕ ವಿಶೇಷ ಪೂಜೆ ನೆರವೇರಿಸಲಾಯಿತು.

ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಆಡಳಿತದಲ್ಲಿ ಯಾವುದೇ ರೀತಿಯ ತೊಂದರೆಗಳು ಎದುರಾಗದಿರಲಿ ಎಂದು ಯಡಿಯೂರಪ್ಪ ವಿಶೇಷ ಪೂಜೆ ಹಮ್ಮಿಕೊಂಡಿದ್ದರು.

ಭಾನುವಾರ ಬೆಳಗ್ಗೆ ನಗರದ ಧವಳಗಿರಿ ನಿವಾಸದಲ್ಲಿ ಸತತ ಮೂರು ಗಂಟೆಗಳ ಕಾಲ ನಡೆದ ಸುದರ್ಶನ ಹೋಮದಲ್ಲಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಮತ್ತು ದಂಪತಿಗಳು ಭಾಗಿಯಾಗಿದ್ದರು.

ರಾಜಕೀಯ ವಿರೋಧಿಗಳಿಂದ ಎದುರಾಗುವ ಕಂಟಕಗಳ ನಿವಾರಣೆ, ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್‌ ಭದ್ರ ಕೋಟೆಯನ್ನು ಅಲುಗಾಡಿಸಿ ಬಿಜೆಪಿಯನ್ನು ಗೆಲ್ಲಿಸಿದ ತಮ್ಮ ಕಿರಿಯ ಪುತ್ರ ವಿಜಯೇಂದ್ರನಿಗೂ ಯಾವುದೇ ರಾಜಕೀಯ ವಿರೋಧಗಳು ಎದುರಾಗದಂತೆ ಸುದರ್ಶನ ನರಸಿಂಹ ಹೋಮ ನಡೆಸಲಾಗಿದೆ.

ಸುದರ್ಶನ ಹೋಮ ನಡೆಯುವ ಸಂದರ್ಭದಲ್ಲಿ ಧವಳಗಿರಿ ನಿವಾಸಕ್ಕೆ ಯಾವುದೇ ಸಚಿವರು, ಪಕ್ಷದ ಮುಖಂಡರು, ಸಾರ್ವಜನಿಕರು ಹಾಗೂ ಆಪ್ತ ಸಹಾಯಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.

click me!