
ದಾವಣಗೆರೆ (ಜು.23): ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಇಬ್ಬರೂ ಒಂದಾಗಲಿ ಎಂದು ಪೀಠಿಕೆ ಹಾಕಿದ್ದೇ ನಾನು. ಇವಾಗ ಇಬ್ಬರೂ ಸೇರಿಕೊಂಡು, ನನಗೆ ಒಳ್ಳೆಯ ಗಿಫ್ಟ್ ಕೊಟ್ಟಿದ್ದಾರೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಇತ್ತೀಚಿಗಿನ ಬಿಜೆಪಿ ಕಾರ್ಯಕ್ರಮದಲ್ಲಿ ಆಡಿದ ಮಾತುಗಳಿಗೆ ಪ್ರತಿಕ್ರಿಯಿಸಿ, ನನಗೆ ಇಬ್ಬರೂ ಒಳ್ಳೆಯ ಗಿಫ್ಟ್ ನೀ ಡಿದ್ದಾರೆ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ನಮ್ಮಲ್ಲಿ ಯಾವುದೇ ಟೀಂ ಅಂತಾ ಇಲ್ಲ. ನಮ್ಮದು ಒಂದೇ ಹೈಕಮಾಂಡ್, ಒಬ್ಬರೇ ನಾಯಕರು. ರಾಜ್ಯಾಧ್ಯಕ್ಷರ ಬದಲಾವಣೆ ಎಂಬುದು ಹರಿಹರ ಶಾಸಕ ಬಿ.ಪಿ.ಹರೀಶ್ ಅವರ ಅಭಿಪ್ರಾಯ. ಬದಲಾವಣೆ ವಿಚಾರ ನನಗಂತೂ ಗೊತ್ತಿಲ್ಲ. ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪಕ್ಷಕ್ಕೆ ವಾಪಸ್ ಬರುವ ವಿಚಾರವೂ ನನಗೆ ಗೊತ್ತಿಲ್ಲ ಎಂದು ಹೇಳಿದರು.
ರೆಡ್ಡಿ-ರಾಮುಲುರನ್ನು ಒಂದಾಗಿಸಿದ ಬಿವೈವಿ: ಹಲವು ತಿಂಗಳಿಂದ ಮುನಿಸಿಕೊಂಡಿದ್ದ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತು, ಪರಸ್ಪರ ಕೈ ಕುಲುಕಿ ಒಗ್ಗಟ್ಟು ಪ್ರದರ್ಶಿಸಿದ್ದು, ಅಚ್ಚರಿಗೆ ಕಾರಣವಾಯಿತು. ತಾಲೂಕಿನ ಮರಳಿ ಗ್ರಾಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಳ್ಳಾರಿ ವಿಭಾಗ ಮಟ್ಟದ ಬಿಜೆಪಿ ಸಂಘಟನಾ ಸಭೆ ನಡೆಯಿತು. ಸಭೆ ಆರಂಭಕ್ಕೂ ಪೂರ್ವದಲ್ಲಿ ವೇದಿಕೆಯಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಇಬ್ಬರು ನಾಯಕರ ಕೈಗಳನ್ನು ಮೇಲಕ್ಕೆ ಎತ್ತಿ ಒಗ್ಗಟ್ಟು ಪ್ರದರ್ಶಿಸಿದ್ದಲ್ಲದೇ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಇಬ್ಬರು ಒಂದೇ ಎಂದು ಸಾರಿದರು.
ಯತ್ನಾಳ್, ಲಿಂಬಾವಳಿ ಒಂದಾಗಲಿ: ಈ ಮಧ್ಯೆ, ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರಾಮುಲು, ಕೇವಲ ನಾವು ಒಂದಾದರೆ ಕರ್ನಾಟಕದಲ್ಲಿ ಎಲ್ಲರೂ ಒಂದಾದಂತೆ ಅಲ್ಲ, ಮೊದಲು ಯತ್ನಾಳ, ಅರವಿಂದ ಲಿಂಬಾವಳಿ ಸೇರಿದಂತೆ ಹಲವರ ಮಧ್ಯೆ ಬಿರುಕುಗಳಿವೆ. ಅದೆಲ್ಲ ಸರಿಯಾಗಿ, ಅವರೆಲ್ಲ ಒಂದಾಗಬೇಕು. ರಾಜ್ಯದ 224 ಮತಕ್ಷೇತ್ರಗಳಲ್ಲಿ ಸಂಚಾರ ಮಾಡಿ, ಒಡೆದ ಮನಸ್ಸುಗಳನ್ನು ಒಂದು ಮಾಡುವ ಕೆಲಸ ಮಾಡುತ್ತಿದ್ದೇವೆ. 2028ರಲ್ಲಿ ಬಿಜೆಪಿ ಪಕ್ಷದ ನಾಯಕರು ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.
ಒಂದು ದಿನದ ಸ್ನೇಹವಲ್ಲ: ನಮ್ಮಿಬ್ಬರದು ಒಂದು ದಿನದ ಸ್ನೇಹ ಅಲ್ಲ. ನಮ್ಮಿಬ್ಬರ ಸ್ನೇಹದ ಬಗ್ಗೆ ಹೇಳಲು ಹೋದರೆ ಸಾವಿರಾರು ಎಪಿಸೋಡ್ ಆಗುತ್ತೆ. ಒಬ್ಬರಿಗೊಬ್ಬರು ನೋಡಿದ ತಕ್ಷಣ ಎಲ್ಲವನ್ನೂ ಮರೆಯುವಂತೆ ಆಗುತ್ತದೆ. ವೈಯಕ್ತಿಕ ಕಾರಣಗಳಿಂದ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಬರಲು ಸಾಧ್ಯವಿಲ್ಲ. ನಮ್ಮ ಮುನಿಸು ಕ್ಷಣಿಕ ನಾವಿಬ್ಬರು ಬಾಲ್ಯಸ್ನೇಹಿತರು, ಮುನಿಸು ಬಂದರೂ ಅದು ಕ್ಷಣಿಕ. ಇಂದು ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಒಂದಾದಂತೆ ಕರ್ನಾಟಕದ ಎಲ್ಲಾ ಮನಸ್ಸುಗಳು ಒಂದಾಗಬೇಕು. ಬಿಜೆಪಿಯಿಂದ ಉಚ್ಛಾಟಿತರಾಗಿರುವ ಶಾಸಕ ಬಸವರಾಜ ಪಾಟೀಲ್ ಯತ್ನಾಳ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರೂ ಒಂದಾಗಲಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.