
ಮದ್ದೂರು (ಡಿ.17): ಮುಂದಿನ ದಿನಗಳಲ್ಲಿ ಜೆಡಿಎಸ್ಗೆ ಒಳ್ಳೆಯ ಕಾಲ ಬರುತ್ತದೆ. ಅಲ್ಲಿಯವರೆಗೆ ಕಾರ್ಯಕರ್ತರು ಎದೆಗುಂದಬಾರದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಮನ್ಮುಲ್ ಮಾಜಿ ನಿರ್ದೇಶಕಿ ರೂಪ ಕುಮಾರಸ್ವಾಮಿ ಅವರಿಗೆ ಬೆಲ್ಲದಾರತಿ ಬೆಳಗಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ನಂತರ ಜೆಡಿಎಸ್ ಕಾರ್ಯಕರ್ತರಿಗೆ ಅಭಯ ನೀಡಿದ ಕುಮಾರಸ್ವಾಮಿ, ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಫಲ ಸಿಗುತ್ತದೆ. ಕಾರ್ಯಕರ್ತರು ಸಂಘಟನೆಯಲ್ಲಿ ತೊಡಗಬೇಕು ಒಂದು ಸಲಹೆ ನೀಡಿದರು.
ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಆಕಾಂಕ್ಷಿತ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಿ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಕಾರ್ಯಕರ್ತರು ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಪಕ್ಷ ಸಂಘಟನೆಯಲ್ಲಿ ತೊಡಗಿ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಬಿಜೆಪಿ ಮುಖಂಡರಾದ ಎಂ.ಎಸ್ .ಜಗನ್ನಾಥ್, ವೀರಭದ್ರ ಸ್ವಾಮಿ, ಗುರು ಮಲ್ಲೇಶ, ಧನಂಜಯ, ಶಿವರಾಜು, ಅಭಿಷೇಕ್ ಮತ್ತಿತರರಿದ್ದರು.
ಎಚ್ಡಿಕೆ ಮತ್ತೆ ರಾಜ್ಯದ ಸಿಎಂ ಆಗುವ ಯೋಗ: ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ 66ನೇ ಜನ್ಮದಿನದ ಅಂಗವಾಗಿ ಪಟ್ಟಣದ ವಿವಿಧ ದೇವಾಲಯಗಳ ಅರ್ಚಕರು ಮಂಗಳವಾರ ಮಂತ್ರಾಕ್ಷತೆ ಮತ್ತು ಫಲ ತಾಂಬೂಲ ನೀಡಿ ಆಶೀರ್ವದಿಸಿದರು. ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಸಚಿವ ಕುಮಾರಸ್ವಾಮಿ ಅವರಿಗೆ ಪುರಾಣ ಪ್ರಸಿದ್ಧ ಹೊಳೆ ಆಂಜನೇಯ ಸ್ವಾಮಿ ದೇಗುಲದ ಪ್ರಧಾನ ಅರ್ಚಕ ಪ್ರದೀಪ ಆಚಾರ್ಯ, ಸಹ ಅರ್ಚಕ ಸುರೇಶ ಆಚಾರ್ಯ, ಶ್ರೀಉಗ್ರ ನರಸಿಂಹ ಸ್ವಾಮಿ ದೇಗುಲದ ಅರ್ಚಕ ಬಾಲಾಜಿ, ಕಾಶಿ ವಿಶ್ವನಾಥ ಸ್ವಾಮಿ ದೇಗುಲದ ಅರ್ಚಕ ರಾಘವೇಂದ್ರ ಅವರ ತಂಡ ಕುಮಾರಸ್ವಾಮಿ ಅವರಿಗೆ ಶೇಷ ವಸ್ತ್ರ ಪ್ರಧಾನ ಮಾಡಿ ಆಶೀರ್ವದಿಸಿದರು. ಇದೇ ವೇಳೆ ಸಚಿವ ಎಚ್.ಡಿ.ಕುಮಾರಸ್ವಾಮಿ ಜನ್ಮ ದಿನಾಂಕದ ಯೋಗದ ಫಲವಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದು ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಹಾರೈಸಿದರು.
ಮಂಡ್ಯ ಜಿಲ್ಲೆ ಹಾಗೂ ರಾಜ್ಯದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಉತ್ಸುಕನಾಗಿದ್ದೇನೆ. ಇದಕ್ಕೆ ರಾಜ್ಯ ಸರ್ಕಾರದ ಸಹಕಾರ ಬಹಳ ಮುಖ್ಯವಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಹುಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದ ಬೆಂಗಳೂರು- ಮೈಸೂರು ಹೆದ್ದಾರಿ ಬಳಿಯ ಕುವೆಂಪು ವೃತ್ತದಲ್ಲಿ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಮುಖಂಡರ ಸಮ್ಮುಖದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಶ್ರೀಚಾಮುಂಡೇಶ್ವರಿ ದೇವಾಲಯಕ್ಕೆ ತೆರಳುವ ಮುನ್ನ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಮಂಡ್ಯ ಜಿಲ್ಲೆಯ ಜನತೆ ಬಗ್ಗೆ ನನಗೆ ಅಪಾರ ಅಭಿಮಾನವಿದೆ. ಜಿಲ್ಲೆಯ ಜನರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಇದಕ್ಕಾಗಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಎರಡು ದೊಡ್ಡ ಸಚಿವ ಸ್ಥಾನ ದೊರೆತಿದೆ. ರಾಜ್ಯದಲ್ಲಿ ನಿರುದ್ಯೋಗ ನಿವಾರಣೆಗೆ ಬೃಹತ್ ಕೈಗಾರಿಕೆ ಸ್ಥಾಪಿಸಲು ಉತ್ಸುಕನಾಗಿದ್ದೇನೆ. ರಾಜ್ಯ ಸರ್ಕಾರ ಅಗತ್ಯ ಜಾಗ ನೀಡಲು ಸಹಕಾರ ನೀಡಬೇಕು ಎಂದರು. ಕೈಗಾರಿಕೆ ಸ್ಥಾಪನೆಗೆ ಅಗತ್ಯ ಜಾಗ, ನೀರು, ವಿದ್ಯುತ್ ಸೇರಿದಂತೆ ಮೌಲ ಸೌಕರ್ಯಗಳನ್ನು ರಾಜ್ಯ ಸರ್ಕಾರದ ಕೆಲವು ಒಪ್ಪಿಗೆ ಬೇಕಿದೆ. ಬಂಡವಾಳ ಹೂಡುವವರನ್ನು ಕರೆ ತರುವುದು ಮುಖ್ಯವಲ್ಲ. ಸರ್ಕಾರವೂ ಸಹ ಕೈ ಜೋಡಿಸಿದರೆ ಮಾತ್ರ ಬೃಹತ್ ಕೈಗಾರಿಕೆ ಸ್ಥಾಪಿಸುವುದು ಖಚಿತ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.