ಸಚಿವ ಈಶ್ವರ ಖಂಡ್ರೆ ಜನಸ್ಪಂದನ ನೆಪ ಮಾತ್ರ: ಕೇಂದ್ರ ಸಚಿವ ಭಗವಂತ ಖೂಬಾ

By Kannadaprabha NewsFirst Published Aug 30, 2023, 11:59 PM IST
Highlights

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ನಡೆಸಿದ ಜನಸ್ಪಂದನ ಕಾರ್ಯಕ್ರಮ ಕೇವಲ ಔಪಚಾರಿಕವಾಗಿತ್ತು. ಜನರಿಗೆ ಎರಡ್ಮೂರು ಗಂಟೆಗಳ ಕಾಲ ಕಾಯಿಸಿ, ನೆಪ ಮಾತ್ರಕ್ಕೆ ಜನಸ್ಪಂದನೆ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಟೀಕಿಸಿದ್ದಾರೆ.

ಬೀದರ್ (ಆ.30): ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ನಡೆಸಿದ ಜನಸ್ಪಂದನ ಕಾರ್ಯಕ್ರಮ ಕೇವಲ ಔಪಚಾರಿಕವಾಗಿತ್ತು. ಜನರಿಗೆ ಎರಡ್ಮೂರು ಗಂಟೆಗಳ ಕಾಲ ಕಾಯಿಸಿ, ನೆಪ ಮಾತ್ರಕ್ಕೆ ಜನಸ್ಪಂದನೆ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಟೀಕಿಸಿದ್ದಾರೆ. ಈ ಕುರಿತಂತೆ ಅವರು ಪ್ರಕಟಣೆ ಹೊರಡಿಸಿದ್ದು, ಜನಸ್ಪಂದನೆ ವಿಫಲರಾಗಿರುವುದನ್ನು ಸಮರ್ಥಿಸಿಕೊಳ್ಳಲು ನಮ್ಮ ಜಿಲ್ಲೆಯಲ್ಲಿ ಸಮಸ್ಯೆಗಳು ಕಡಿಮೆ ಇವೆ ಎಂದು ಹೇಳುತ್ತಿರುವದನ್ನು ನೋಡಿದರೆ, ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ಗಾದೆ ಮಾತು ನೆನಪಿಗೆ ಬರುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಈಗಾಗಲೆ ಭಾಲ್ಕಿಯಲ್ಲಿ ಪ್ರತಿ ಯೋಜನೆಯಡಿಯ ಫಲಾನುಭವಿಗಳನ್ನು ಉಸ್ತುವಾರಿ ಸಚಿವರು ತಾಲೂಕಿನ ವಯೋವೃದ್ದ ತಾಯಂದಿರು, ವಿಧವೆಯರು, ಅಂಗವಿಕಲರು, ರೈತರಿಗೆ ತನ್ನ ಮನೆಗೆ ಕರೆಯಿಸಿ, ಗಂಟೆಗಟ್ಟಲೆ ಕಾಯಿಸಿ, ಅವರಿಗೆ ಹಕ್ಕುಪತ್ರ ಹಾಗೂ ಮತ್ತಿತರ ಸೌಕರ್ಯಗಳ ಪತ್ರ ನೀಡುವುದು ಮಾಡಿದ್ದಾರೆ ಇದು ಖಂಡನೀಯ.

ಸತತ 2 ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದಲ್ಲಿ ಸಕಲ ಸೌಲಭ್ಯ ಕಲ್ಪಿಸುವೆ: ಪ್ರದೀಪ್‌ ಈಶ್ವರ್‌

ಜನಸ್ಪಂದನಕ್ಕೆ ಕಮ್ಮಿ ಜನ, ಆಡಳಿತದ ಮೇಲೆ ವಿಶ್ವಾಸವಿಲ್ಲ ಎಂಬುವದು ಸಾಬೀತು: ಉಸ್ತುವಾರಿ ಸಚಿವರು ಜನಸ್ಪಂದನೆ ಹೆಸರಿನಲ್ಲಿ ಹೊಸ ನಾಟಕ ಪ್ರಾರಂಭ ಮಾಡಿದ್ದಾರೆ ಜನತೆಯ ಉಪಯೋಗಕ್ಕಿಂತ ಅವರ ಪ್ರಚಾರಕ್ಕೆ ಸೀಮಿತವಾಗಿದೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಜನಸಂಖ್ಯೆ ಕಡಿಮೆ ಇದ್ದಿದ್ದು ನೋಡಿದರೆ, ಜನರು ಇವರ ಆಡಳಿತದ ಮೇಲೆ ವಿಶ್ವಾಸವಿಟ್ಟಿಲ್ಲ ಎಂಬುವದು ಸಾಬೀತಾಗುತ್ತಿದೆ ಎಂದು ತಿಳಿಸಿದ್ದಾರೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಅಭಿವೃದ್ದಿಗೆ ಅಡ್ಡಗಾಲು ಹಾಕುವ ಬಗ್ಗೆ ಮಾತನಾಡಿರುವ ಉಸ್ತುವಾರಿ ಸಚಿವರು, ನಾವ್ಯಾರೂ ಇವರ ಅಭಿವೃದ್ಧಿ ಕೆಲಸಗಳಿಗೆ ಅಡ್ಡಗಾಲು ಹಾಕುವದಿಲ್ಲ, ಇವರು ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದಾಗ ನಿಲ್ಲಿಸಿದ್ದ ಬೀದರ್ ಔಟರ್ ರಿಂಗ್ ರೋಡ್ ಕಾಮಗಾರಿ ಪುನರ್ ಪ್ರಾರಂಭ ಮಾಡಿಸಿದ್ದು ನಾನು ಎಂದಿದ್ದಾರೆ.

ಜಿಲ್ಲೆಗೆ ಅನುದಾನ, ಸಚಿವ ಖಂಡ್ರೆ ಜನಪ್ರತಿನಿಧಿಗಳ ನಿಯೋಗ ಕೊಂಡೊಯ್ಯಲಿ: ಕೇಂದ್ರ ಸರ್ಕಾರದಿಂದ ಹಾಗೂ ಹಿಂದಿನ ನಮ್ಮ ರಾಜ್ಯ ಸರ್ಕಾರದಲ್ಲಿ ಮಂಜೂರಿಯಾದ ಅದೇಷ್ಟೋ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ, ಈ ನಿಟ್ಟಿನಲ್ಲಿ ಉಸ್ತುವಾರಿ ಸಚಿವರು ನಮ್ಮೆಲ್ಲ ಜನಪ್ರತಿನಿಧಿಗಳ ಸಭೆ ತೆಗೆದುಕೊಂಡು, ಅಗತ್ಯ ಅನುದಾನ ಮತ್ತು ಮಂಜೂರಾತಿಗಾಗಿ ರಾಜ್ಯಕ್ಕೆ ನಿಯೋಗ ತೆಗೆದುಕೊಂಡು ಹೊಗಬೇಕೆಂದು ಸಚಿವ ಖಂಡ್ರೆಗೆ ಖೂಬಾ ಆಗ್ರಹಿಸಿದ್ದಾರೆ. ಸಚಿವ ಖಂಡ್ರೆ ನನ್ನ ಪ್ರಶ್ನೆಗಳಿಗೆ ಉತ್ತರಿಸದೇ ಜವಾಬ್ದಾರಿಯಿಂದ ಜಾರಿಕೊಂಡಿದ್ದಾರೆ. ಜನ ನಿಮಗೆ ಅಧಿಕಾರ ನೀಡಿದ್ದಾರೆ, ನೀವು ದಾರಿ ತಪ್ಪುತ್ತಿದ್ದರೆ, ನಿಮ್ಮನ್ನು ವಿರೋಧಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಖೂಬಾ ತಿಳಿಸಿದ್ದಾರೆ.

ಜನಸ್ಪಂದನದಲ್ಲಿ ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಹೇಳಿರುವ ಉಸ್ತುವಾರಿ ಸಚಿವರು, ತಮ್ಮ ಪರಿವಾರದವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಮಹಾತ್ಮಾ ಗಾಂಧಿ ಸಕ್ಕರೆ ಕಾರ್ಖಾನೆಯ ಮೇಲೆ ನೂರಾರು ಕೋಟಿ ರುಪಾಯಿ ಸಾಲವಾಗಿದೆ, ಭ್ರಷ್ಟಾಚಾರ ನಡೆದಿದೆ, ಕಾರ್ಖಾನೆ ಎನ್‌ಪಿಎ ಆಗಿದೆ, ಇದರ ಕುರಿತು ತನಿಖೆ ಕೂಡಲೆ ಮಾಡಿಸಿ, ಆಗಿರುವ ಭ್ರಷ್ಟಾಚಾರವನ್ನು ಹೊರತಂದು, ಅವರ ಸಹೊದರನ ವಿರುದ್ಧ ಕ್ರಮ ಕೈಗೊಂಡು, ಹಣವನ್ನು ವಸೂಲಿ ಮಾಡಬೇಕು, ರೈತರ ಕಾರ್ಖಾನೆಯನ್ನು ಉಳಿಸಬೇಕೆಂದು ಈಶ್ವರ ಖಂಡ್ರೆಯವರಿಗೆ ಒತ್ತಾಯಿಸಿದ್ದಾರೆ.

ಎಂಜಿಎಸ್‌ಎಸ್‌ಕೆಯಿಂದ ಖಂಡ್ರೆ ಸಹೋದರ ಪದತ್ಯಾಗವೋ, ಪದಚ್ಯುತವೋ: ನಿಮ್ಮ ಸಹೋದರ, ಕಾರ್ಖಾನೆಯನ್ನು ಎನ್‌ಪಿಎ ಮಾಡಿ, ಮುಚ್ಚುವ ಹಂತಕ್ಕೆ ತಳ್ಳಿ ಪದತ್ಯಾಗ ಮಾಡಿದ್ದಾರಾ ಅಥವಾ ಅವರನ್ನು ಪದಚ್ಯುತಿಗೊಳಿಸಲಾಗಿದೆಯಾ ಎಂಬುವದನ್ನು ತಿಳಿಸಬೇಕು? ಜೊತೆಗೆ ಕಾರ್ಖಾನೆಯನ್ನು ಇಂತಹ ದುಸ್ಥಿತಿಗೆ ತಂದು ತನ್ನ ಹೇಡಿತನವನ್ನ ಪ್ರದರ್ಶಿಸಿದ್ದಾರೆ, ಇಲ್ಲಿ ಭ್ರಷ್ಟಾಚಾರ ನಡೆದಿರುವದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಇದರ ಕುರಿತು ನೀವು ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಯಾವುದೇ ವಿಚಾರಣೆಗೂ ಹೆದರುವುದಿಲ್ಲ: ಕಾಂಗ್ರೆಸ್‌ ವಿರುದ್ಧ ಸುಧಾಕರ್‌ ವಾಗ್ದಾಳಿ

ಇಲ್ಲಿಯವರೆಗೆ ವೈಜಿನಾಥ ಪಾಟೀಲ್ ಎಂಜಿಎಸ್‌ಎಸ್‌ಕೆ ಅಧ್ಯಕ್ಷ ಎಂಬುವದು ಯಾರಿಗೂ ಗೊತ್ತೇಯಿಲ್ಲ, ಸ್ವತಃ ಅವರೇ ಅಧ್ಯಕ್ಷ ಇದ್ದಾರೆ ಎಂದು ಹೇಳಿಕೊಳ್ಳುವ ಪರಿಸ್ಥಿತಿ ಯಾಕೆ ಬಂತು? ಹಾಗಾದರೆ ಅವರ ಸ್ಥಿತಿ 20 ಸಾವಿರ ಶೇರುದಾರರನ್ನ ಮೋಸ ಮಾಡಿದ ಹಾಗಲ್ಲವೇ? 20 ಸಾವಿರ ಶೇರುದಾರರಿಗೆ ಈ ವಿಷಯ ತಿಳಿಸಿದ್ದೀರಾ? ಎಂದು ಸಚಿವರು ಕಾರ್ಖಾನೆ ಅಧ್ಯಕ್ಷ ವೈಜಿನಾಥ ಪಾಟೀಲ್ ರವರ ಅಸಹಾಯಕತೆಯನ್ನು ಸಹ ಪ್ರಶ್ನಿಸಿದ್ದಾರೆ.

click me!