ಚುನಾವಣೆ ವೇಳೆ ಒಕ್ಕಲಿಗರ ಟ್ರಂಪ್ ಕಾರ್ಡ್ ಪ್ಲೇ ಆಗುತ್ತಿದೆ: ಕೃಷಿ ಸಚಿವ ಚಲುವರಾಯಸ್ವಾಮಿ

By Kannadaprabha NewsFirst Published Mar 28, 2024, 7:03 AM IST
Highlights

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಹಾಗೂ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಟ್ರಂಪ್ ಕಾರ್ಡ್ ಪ್ಲೇ ಆಗುತ್ತಿದೆ. ಮತದಾರರು ಮರುಳಾಗದೇ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡರಿಗೆ ಮತ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು. 
 

ಕೆ.ಆರ್.ಪೇಟೆ (ಮಾ.28): ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಹಾಗೂ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಟ್ರಂಪ್ ಕಾರ್ಡ್ ಪ್ಲೇ ಆಗುತ್ತಿದೆ. ಮತದಾರರು ಮರುಳಾಗದೇ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡರಿಗೆ ಮತ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು. ಪಟ್ಟಣದ ಎಂ.ಕೆ.ಬೊಮ್ಮೇಗೌಡ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಯಾವ ಕಾರಣಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತಹಾಕಬೇಕು. ಅವರೊಬ್ಬರೆ ಒಕ್ಕಲಿಗ ನಾಯಕರಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ನಾವು ಒಕ್ಕಲಿಗರಲ್ಲವೇ ಎಂದು ಪ್ರಶ್ನಿಸಿದರು.

ಜೆಡಿಎಸ್‌ನವರು ಮಂಡ್ಯದಲ್ಲಿ ಮಾತ್ರ ಒಕ್ಕಲಿಗ ಮಂತ್ರ ಜಪಿಸುತ್ತಾರೆ. ಬೇರೆ ಕಡೆ ಏಕಿಲ್ಲಾ?. ನಿಮ್ಮ ಹುಸಿ ಪ್ರೀತಿ ಜನರಿಗೆ ಗೊತ್ತಾಗಿದೆ ಎಂದು ಕಿಡಿಕಾರಿದರು. ಮಾಜಿ ಪ್ರಧಾನಿ ದೇವೇಗೌಡರು ಮೇಕೆದಾಟು ಯೋಜನೆ ಬಗೆಗೆ ಮಾತನಾಡಿದಾಗ ಅವರ ಮುತ್ಸದ್ದಿತನವನ್ನು ನಾವೆಲ್ಲಾ ಕೊಂಡಾಡಿದ್ದೋ. ಆದರೆ, ಈಗ ಚುನಾವಣೆಯಲ್ಲಿ ಹೇಳ್ತಾರೆ. ಎನ್‌ಡಿಎ ಗೆಲ್ಲಿಸಿದ್ರೆ ಮೇಕೆದಾಟು ಮಾಡಿಸ್ತೀವಿ ಅಂತಾ. ಇದು ಸರಿಯೆ ಎಂದು ಪ್ರಶ್ನಿಸಿದರು. ಕೆ.ಆರ್.ಪೇಟೆ ತಾಲೂಕಿನ ಜನರು ಸ್ಟಾರ್ ಚಂದ್ರುಗೆ ಅತ್ಯಧಿಕ ಲೀಡ್‌ಕೊಡಿಸಿದರೆ ಮುಂದಿನ 2024ಕ್ಕೆ ಕಾಂಗ್ರೆಸ್ ಶಾಸಕನನ್ನು ಗೆಲ್ಲಿಸಿ ಕೊಡುತ್ತೇವೆ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮತನಾಡಿ, ಮಂಡ್ಯ ಜಿಲ್ಲೆಯಲ್ಲಿ ಒಕ್ಕಲಿಗರ ನಾಯಕತ್ವ ಬೆಳೆಯದಂತೆ ಮಾಡಿದವರು ದೇವೇಗೌಡರ ಕುಟುಂಬ. ಕೆ.ಆರ್.ಪೇಟೆ ಕೃಷ್ಣ, ಮಂಡ್ಯ ಎಸ್.ಡಿ.ಜಯರಾಂ, ಮದ್ದೂರಿನ ಸಿದ್ದರಾಜು, ಮಳವಳ್ಳಿ ನಾಗೇಗೌಡರ ಕುಟುಂಬವನ್ನು ರಾಜಕೀಯವಾಗಿ ಬೆಳೆಯದಂತೆ ತುಳಿದರು ಎಂದು ಕಿಡಿಕಾರಿದರು. ಲೋಕಸಭಾ ಚುನಾವಣಾ ಅಭ್ಯರ್ಥಿ ಸ್ಟಾರ್ ಚಂದ್ರು( ವೆಂಕಟರಮಣೇಗೌಡ) ಮಾತನಾಡಿ, ನಾನು ಹಣ ಮಡಲು ರಾಜಕಾರಣಕ್ಕೆ ಬಂದಿಲ್ಲ. ಜಿಲ್ಲೆಯ ಜನರ ಸೇವೆ ಮಡಲು ಬಂದಿದ್ದೇನೆ. ನನ್ನನ್ನು ಗೆಲ್ಲಿಸಿ. ನಾನು ನಿಮ್ಮ ಋಣ ತೀರಿಸುತ್ತೇನೆ ಎಂದು ಕೋರಿದರು.

ಪುಟ್ಟರಾಜುಗೆ ನೋಡಿದ ಹುಡ್ಗೀನಾ ಎಚ್‌ಡಿಕೆ ಮದುವೆಯಾಗೋದು ಸರಿನಾ?: ಸಚಿವ ಎನ್.ಚಲುವರಾಯಸ್ವಾಮಿ

ವೇದಿಕೆಯಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಚಿತ್ರನಟ ಸಾಧುಕೋಕಿಲಾ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ರಾಜ್ಯ ಕೆಯುಐಡಿಎಫ್‌ಸಿ ಮಾಜಿ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ, ಮುಖಂಡರಾದ ಬಿ.ಎಲ್.ದೇವರಾಜು, ಬೂಕನಕೆರೆ ವಿಜಯರಾಮೇಗೌಡ, ಕೋಡಿಮಾರನಹಳ್ಳಿ ದೇವರಾಜು, ಬೂಕನಕೆರೆ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಳಹಳ್ಳಿ ವಿಶ್ವನಾಥ್, ಐಪನಹಳ್ಳಿ ನಾಗೇಂದ್ರಕುಮಾರ್, ತಾಲೂಕು ಉಸ್ತುವಾರಿ ಚಿನಕುರಳಿ ರಮೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಅಹಿಂದ ಮುಖಂಡ ಮಳವಳ್ಳಿ ಶಿವಣ್ಣ, ಚಿದಂಬರ್ ಸೇರಿದಂತೆ ಹಲವು ಮುಖಂಡರು ಇದ್ದರು.

click me!