
ವಿಧಾನಸಭೆ (ಡಿ.18): ಭೌಗೋಳಿಕವಾಗಿ ವಿಶಾಲವಾಗಿರುವ ಬೆಳಗಾವಿಯನ್ನು ಎರಡು ಜಿಲ್ಲೆಗಳಾಗಿ ವಿಭಜಿಸುವ ಕುರಿತ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ ಕೇಂದ್ರ ಸರ್ಕಾರ ಕಂದಾಯ ಗಡಿ ಬದಲಿಸದಂತೆ ನೀಡಿರುವ ಆದೇಶದಿಂದಾಗಿ ಸದ್ಯಕ್ಕೆ ಬೆಳಗಾವಿ ವಿಭಜನೆ ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಬಿಜೆಪಿಯ ಶಶಿಕಲಾ ಜೊಲ್ಲೆ ಅವರ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಬೈರೇಗೌಡ, ಬೆಳಗಾವಿಯಿಂದ ಚಿಕ್ಕೋಡಿ ವಿಭಜಿಸಿ ಪ್ರತ್ಯೇಕ ಜಿಲ್ಲೆ ಮಾಡುವ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಬೇಕಿದೆ. ಅಲ್ಲದೆ, ಸದ್ಯ ದೇಶದಲ್ಲಿ ಜನಗಣತಿ ಮಾಡಬೇಕಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಕಂದಾಯ ಗಡಿಯನ್ನು ಬದಲಿಸದಂತೆ ಸೂಚಿಸಿದೆ. ಹೀಗಾಗಿ ಪ್ರತ್ಯೇಕ ಜಿಲ್ಲೆ ರಚನೆ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
ಒಂದೇ ದಿನದಲ್ಲಿ 14 ಗಂಟೆ ಕಲಾಪ ನಡೆಸಿ ದಾಖಲೆ: ವಿಧಾನಸಭೆ ಕಲಾಪವನ್ನು ಒಂದು ದಿನದಲ್ಲಿ 14 ಗಂಟೆಗಳಿಗೂ ಹೆಚ್ಚು ಕಾಲ ಕಲಾಪ ನಡೆಸುವ ಮೂಲಕ ಸ್ಪೀಕರ್ ಯು.ಟಿ. ಖಾದರ್ ದಾಖಲೆ ಸೃಷ್ಟಿಸಿದ್ದಾರೆ. ಸೋಮವಾರ ಬೆಳಗ್ಗೆ 10.30ಕ್ಕೆ ಆರಂಭವಾದ ಕಲಾಪ ನಡುವೆ ಮಧ್ಯರಾತ್ರಿ 12.30ರವರೆಗೂ ನಡೆಯಿತು. ನಡುವೆ ಮಧ್ಯಾಹ್ನ ಒಂದು ಗಂಟೆ ಭೋಜನ ವಿರಾಮ. ಕೊನೆವರೆಗೆ ನಡೆದಿದ್ದು ಗಮನ ಸೆಳೆಯುವ ಸೂಚನೆಗಳ ಮೇಲಿನ ಪ್ರಸ್ತಾಪ. ಬೆಳಗಾವಿಯಲ್ಲಿ 10 ದಿನಗಳ ಕಾಲ ನಡೆಯಬೇಕಿದ್ದ ಅಧಿವೇಶನ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ 9 ದಿನಕ್ಕೆ ಮೊಟಕುಗೊಂಡಿದೆ.
ಕಾಮಾಕ್ಯ ಚಿತ್ರಮಂದಿರ ಕಟ್ಟಲು ಬಂದವನು, 3 ಥಿಯೇಟರ್ ಮಾಲೀಕನಾದೆ: ನರಸಿಂಹಲು ಎಂ
ಅದರ ಜತೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನದಿಂದಾಗಿ ಡಿ.10ರಂದು ಇಡೀ ದಿನ ಸಂತಾಪ ಸೂಚನೆಗೆ ಮಾತ್ರ ಸೀಮಿತವಾಗಿತ್ತು. ಅಲ್ಲದೆ ಬುಧವಾರ ಸರ್ಕಾರಿ ರಜೆ ಘೋಷಣೆಯಿಂದಾಗಿ ಕಲಾಪ ನಡೆಯಲಿಲ್ಲ. ಹೀಗಾಗಿ ಅಧಿವೇಶನ 8 ದಿನಕ್ಕೆ ಇಳಿಕೆಯಾಗಿತ್ತು. ಈ ಕಾರಣದಿಂದಾಗಿ ವಿಧಾನಸಭೆಯ ಕಾರ್ಯಕಲಾಪವನ್ನು ಪೂರ್ಣಗೊಳಿಸುವ ಉದ್ದೇಶದಿಂದಾಗಿ ಕಳೆದ ಗುರುವಾರರಂದು ರಾತ್ರಿ 10.15ರವರೆಗೆ ನಡೆಸಲಾಗಿತ್ತು. ಸೋಮವಾರ ಆ ಅವಧಿಯನ್ನೂ ಮೀರಿ ಬೆಳಗ್ಗೆ 10.30ಕ್ಕೆ ಆರಂಭವಾದ ಕಲಾಪ ಮಧ್ಯರಾತ್ರಿ 12.30 ಗಂಟೆವರೆಗೂ ನಡೆಸಲಾಯಿತು. ಮಧ್ಯಾಹ್ನ ಭೋಜನ ವಿರಾಮ ಮತ್ತು ಸಂಜೆ ಕಲಾಪದಲ್ಲಿ ನಡೆದ ಗದ್ದಲದಿಂದಾಗಿ 30 ನಿಮಿಷಗಳ ಕಾಲ ಕಲಾಪ ಮುಂದೂಡಿಕೆಯನ್ನು ಹೊರತುಪಡಿಸಿ ದಿನದಲ್ಲಿ ಒಟ್ಟು 12 ಗಂಟೆಯವರೆಗೆ ಕಲಾಪ ನಡೆಸಲಾಯಿತು.
ಸ್ಪೀಕರ್ ಅವರ ಕಾರ್ಯಕ್ಕೆ ಉಪ ಸ್ಪೀಕರ್ ರುದ್ರಪ್ಪ ಲಮಾಣಿ, ಸಚಿವರಾದ ಕೆ.ಎನ್.ರಾಜಣ್ಣ, ಕೃಷ್ಣ ಬೈರೇಗೌಡ, ಮಾಂಕಾಳ ವೈದ್ಯ, ಸತೀಶ್ ಜಾರಕಿಹೊಳಿ ಸೇರಿದಂತೆ ಇನ್ನಿತರೆ ಸಚಿವರು, ಶಾಸಕರಾದ ಶಾರದಾ ಪೂರ್ಯಾನಾಯಕ್, ಕರೆಮ್ಮ, ಎಚ್.ಡಿ.ರೇವಣ್ಣ, ಶರತ್ ಬಚ್ಚೇಗೌಡ, ಪ್ರಕಾಶ್ ಕೋಳಿವಾಡ, ಯಶವಂತರಾಯಗೌಡ ಪಾಟೀಲ್, ಕೋನರೆಡ್ಡಿ, ದರ್ಶನ್ ಪುಟ್ಟಣ್ಣಯ್ಯ, ಶರಣಗೌಡ ಕಂದಕೂರು ಸೇರಿದಂತೆ 50ಕ್ಕೂ ಹೆಚ್ಚಿನ ಶಾಸಕರು ಉಪಸ್ಥಿತರಿದ್ದು ತಮ್ಮ ಪ್ರಶ್ನೆಗಳಿಗೆ ಸಚಿವರಿಂದ ಉತ್ತರ ಪಡೆದರು.
ಸ್ಪೀಕರ್ ಕಾಲೆಳೆದ ಸಚಿವರು: ದಿನದ ಕಾರ್ಯಕಲಾಪ ಮುಗಿಸುವ ಉದ್ದೇಶದಿಂದಾಗಿ ಯು.ಟಿ.ಖಾದರ್ ಮಧ್ಯರಾತ್ರಿವರೆಗೆ ಕಲಾಪ ನಡೆಸಿದರು. ಆದರೆ, ಸ್ಪೀಕರ್ ಅವರ ಈ ಕೆಲಸದ ಬಗ್ಗೆ ಸಚಿವರು ಕಾಲೆಳೆದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮಂಗಳೂರು ಮೂಲದ ಕಾಂಗ್ರೆಸ್ ನಾಯಕರಾದ ಆಸ್ಕರ್ ಫರ್ನಾಂಡೀಸ್, ಜನಾರ್ಧನ ಪೂಜಾರಿ ಸೇರಿದಂತೆ ಇನ್ನಿತರರು ಮಧ್ಯರಾತ್ರಿವರೆಗೆ ಮಾತನಾಡುತ್ತಾ ಕೂರುತ್ತಿದ್ದರು. ಮಂಗಳೂರು ಭಾಗದವರೇ ಆದ ನೀವು (ಸ್ಪೀಕರ್) ನಮ್ಮನ್ನೂ ಅವರ ಸಾಲಿಗೆ ಸೇರಿಸಿದ್ದೀರಿ ಎಂದರು.
‘ಒಂದು ರಾಷ್ಟ್ರ, ಒಂದು ಚುನಾವಣೆ’.. ಪ್ರಜಾಪ್ರಭುತ್ವವನ್ನು ಬಲಪಡಿಸುವ ದಾರಿ: ರವಿಶಂಕರ್ ಗುರೂಜಿ
ಸಹಕಾರ ಸಚಿವ ಕೆ.ಎನ್.ರಾಜಣ್ಣ, ಸ್ಪೀಕರ್ ಅವರು ಇತಿಹಾಸ ಸೃಷ್ಟಿಸಲು ಮುಂದಾಗಿದ್ದಾರೆ. ಒಳ್ಳೆಯದಾಗಲಿ ಎಂದರು. ಕೆಲ ಶಾಸಕರು, ಸೋಮವಾರ ಪ್ರಶ್ನೆ ಕೇಳಿ, ಮಂಗಳವಾರ ಉತ್ತರ ಪಡೆಯುತ್ತಿದ್ದೇವೆ ಎಂದು ಸ್ಪೀಕರ್ ಅವರನ್ನು ಕಿಚಾಯಿಸಿದರು. ಅಲ್ಲದೆ, ಸಮಾವೇಶದಲ್ಲಿ ಭಾಷಣ ಕೇಳಲಾಗದೆ ಜನರು ಹೋಗುತ್ತಿದ್ದರೆ, ಸಭಿಕರು ಬಂದು ಕುಳಿತುಕೊಳ್ಳಬೇಕು ಎಂದು ಆಯೋಜಕರು ಕರೆಯುವ ರೀತಿಯಲ್ಲಿ ಸ್ಪೀಕರ್, ಸಚಿವರಿಂದ ತಾವು ಉತ್ತರ ಪಡೆದ ನಂತರ ಕಲಾಪದಿಂದ ಹೊರಗೆ ಹೋಗಲು ಮುಂದಾದಾಗ ‘ಇನ್ನು ಅರ್ಧಗಂಟೆಯಲ್ಲಿ ಮುಗಿಯುತ್ತದೆ. ಬಂದು ಕುಳಿತುಕೊಳ್ಳಿ’ ಎಂದು ಕರೆದು ಕೂರಿಸುತ್ತಿದ್ದರು. ಸಮಯವಾಯಿತು ಎನ್ನುತ್ತಿದ್ದ ಶಾಸಕರಿಗೆ, ‘ಕ್ರಿಕೆಟ್ ಆದರೆ, ಮಧ್ಯರಾತ್ರಿ 3 ಗಂಟೆವರೆಗೆ ನೋಡುತ್ತಿದ್ದೀರಲ್ವಾ? ಅದೇ ರೀತಿ ಈಗಲೂ ಕುಳಿತುಕೊಳ್ಳಿ’ ಎಂದೂ ಸ್ಪೀಕರ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.