Latest Videos

ಸಿಎಂ ಬದಲಾವಣೆ ಸದ್ಯಕ್ಕಿಲ್ಲ, ಹಾದಿ ಬೀದಿಲಿ ಮಾತಾಡುವುದು ಸರಿಯಲ್ಲ: ಶಾಸಕ ದೇಶಪಾಂಡೆ

By Kannadaprabha NewsFirst Published Jun 29, 2024, 8:47 PM IST
Highlights

ಸಿಎಂ, ಡಿಸಿಎಂ ಬದಲಾವಣೆ ಚರ್ಚೆ ಅನಗತ್ಯವಾಗಿದ್ದು, ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ. 

ಬೆಳಗಾವಿ (ಜೂ.29): ಸಿಎಂ, ಡಿಸಿಎಂ ಬದಲಾವಣೆ ಚರ್ಚೆ ಅನಗತ್ಯವಾಗಿದ್ದು, ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ. ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಎಂ ಹೆಚ್ಚುವರಿ ಹುದ್ದೆ ನೀಡುವಂತೆ ಅನಗತ್ಯ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವವರ ವಿರುದ್ಧ ಪಕ್ಷದ ಹೈಕಮಾಂಡ್ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸದ್ಯ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ. ನಾನೊಬ್ಬ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದೇನೆ. ಸಿಎಂ, ಡಿಸಿಎಂ ಬಗ್ಗೆ ಜವಾಬ್ದಾರಿಯಿಂದ ಮಾತನಾಡಬೇಕು. 

ಅನಗತ್ಯ ಚರ್ಚೆ ಮಾಡಬಾರದು. ಇದು ಪಕ್ಷದ ಆಂತರಿಕ ವಿಚಾರವಾಗಿರುವುದರಿಂದ ನಾಲ್ಕು ಗೋಡೆಗಳ ನಡುವೆ ಮಾತನಾಡಬೇಕೇ ಹೊರತು ಹಾದಿಬೀದಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು. ಸಿಎಂ ವಿರುದ್ಧ ಯಾರೂ ಮಾತನಾಡಬಾರದು. ಸಿಎಂ, ಡಿಸಿಎಂ ಬದಲಾವಣೆ ಕುರಿತು ಮಾತನಾಡುವುದು ಮಾರುಕಟ್ಟೆಯಲ್ಲಿನ ತರಕಾರಿಯಲ್ಲ. ಅನಗತ್ಯವಾಗಿ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿರುವವರ ವಿರುದ್ಧ ಪಕ್ಷವು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಿಎಂ, ಡಿಸಿಎಂ ಬಗ್ಗೆ ಅನಗತ್ಯ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದರೆ ಅದರಿಂದ ನಮ್ಮ ಪಕ್ಷದ ಮೇಲೆಯೇ ಪರಿಣಾಮ ಬೀರುತ್ತದೆ. ಮಾಧ್ಯಮದವರ ಎದುರು ವಿನಾಕಾರಣ ಹೇಳಿಕೆ ನೀಡುವುದು ಬೇಡ ಮನವಿ ಮಾಡಿದರು.

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಮುಖ್ಯಮಂತ್ರಿ ಬಳಿ ಚರ್ಚಿಸಿಲ್ಲ. ಸಚಿವ ಸ್ಥಾನದ ಬಗ್ಗೆ ನಾನೇನು ವಿಚಾರ ಮಾಡಿಲ್ಲ. ತಲೆ ಕೆಡಿಸಿಕೊಂಡಿಲ್ಲ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ‌. ದೇಶಪಾಂಡೆ ತಿಳಿಸಿದರು. ನಗರಕ್ಕೆ ಆಗಮಿಸಿದ್ದ ವೇಳೆ ರಾಜ್ಯ ಸಂಪುಟದಲ್ಲಿ ಖಾಲಿ ಇರುವ ಸಚಿವ ಸ್ಥಾನಕ್ಕೆ ದೇಶಪಾಂಡೆ ಪರಿಗಣನೆ ತೆಗೆದುಕೊಳ್ಳುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಸಚಿವ ಸ್ಥಾನ ಖಾಲಿ ಆಗುತ್ತಿರುತ್ತವೆ. ತುಂಬುತ್ತಿರುತ್ತವೆ. ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕೆ ತಮ್ಮ ಹೆಸರು ಚರ್ಚೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಅನಗತ್ಯ ಚರ್ಚೆಯನ್ನು ಕೈಬಿಡುವುದು ಒಳ್ಳೆಯದು.‌ 

ನಾನೇನು ತಪ್ಪು ಮಾಡಿಲ್ಲ, ಆದರೂ ಈ ಸ್ಥಿತಿಯಲ್ಲಿದ್ದೇನೆ ಎಂದು ಶಾಕ್ ಆಗಿದ್ದಾರಂತೆ ಪವಿತ್ರಾ ಗೌಡ: ವಕೀಲ ನಾರಾಯಣಸ್ವಾಮಿ

ಅವಕಾಶ ಸಿಕ್ಕರೆ ಯಾರು ತಾನೇ ಬೇಡ ಎನ್ನುತ್ತಾರೆ? ಹಿರಿತನ, ಬುದ್ಧಿಮತ್ತೆ, ಚಾರಿತ್ರ್ಯ ಪರಿಗಣಿಸುವುದಾದರೆ ಹಲವರು ಉನ್ನತ ಸ್ಥಾನದಲ್ಲಿರುತ್ತಿದ್ದರು. ಈ ಎಲ್ಲ ಅಂಶಗಳ ಪರಿಗಣನೆ ಈಗ ಉಳಿದಿಲ್ಲ ಎನ್ನುವ ಮೂಲಕ ಅರ್ಹರಿದ್ದರೂ ಸಚಿವ ಸ್ಥಾನ ಸಿಗದಿದ್ದಕ್ಕೆ ಪರೋಕ್ಷವಾಗಿ ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು. ಯಾವ ಸಮಯದಲ್ಲಿ ಏನಾಗಬೇಕೋ ಅದು ಆಗುತ್ತದೆ. ತಾಳ್ಮೆ ಇರಬೇಕು. ತಾಳ್ಮೆ ಇದ್ದವರು ಜೀವನದಲ್ಲಿ ಗೆಲ್ಲುತ್ತಾರೆ. ಮುಖ್ಯಮಂತ್ರಿಯಾದವರು ಬೇರೆ ಬೇರೆ ಪ್ರಯೋಗ ಮಾಡಿ ನೋಡುತ್ತಾರೆ. ದೇಶಪಾಂಡೆ ಸಚಿವರಿದ್ದಾಗ ಏನಾಯಿತು? ಈಗ ಮಂಕಾಳು ವೈದ್ಯ ಇದ್ದಾಗ ಏನಾಗುತ್ತಿದೆ ಎಂದು ನೋಡಬೇಕಲ್ಲವೇ ಎಂದರು.

click me!