
ಬೆಂಗಳೂರು (ಜ.18): ನನ್ನ ವಿರುದ್ಧ ದುರುದ್ದೇಶಪೂರ್ವಕವಾಗಿ ಷಡ್ಯಂತ್ರ ಮಾಡಲಾಗುತ್ತಿದ್ದು, ಕೆಲವರು ತಮ್ಮ ಮಾನ ಉಳಿಸಿಕೊಳ್ಳಲು ವಾಮಮಾರ್ಗ ಹಿಡಿದಿದ್ದಾರೆ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಮಾಧ್ಯಮದಲ್ಲಿ ಬಂದಿರುವುದೆಲ್ಲ ಅಂತೆ-ಕಂತೆಗಳು. ಅದು ನೆಗೆಟಿವ್ ನೆರೇಟಿವ್ ಸೃಷ್ಟಿಸಲು ಮಾಡಿರುವ ಒಂದು ಷಡ್ಯಂತ್ರದ ಭಾಗ. ಎಫ್ಎಸ್ಎಲ್ಗೆ ವಿಡಿಯೋ ಕಳುಹಿಸಿಲ್ಲ. ತನಿಖೆಯೇ ಆಗಿಲ್ಲ. ಡಿ.19ರ ರಾತ್ರಿ ಖಾನಾಪುರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ಅದರಲ್ಲಿ ನನ್ನ ಮೇಲೆ ಹಲ್ಲೆ ಮಾಡಿದವರ ವಿವರ ನೀಡಿದ್ದೇನೆ.
ಹಲ್ಲೆಗೆ ಕುಮ್ಮಕ್ಕು ಕೊಟ್ಟವರ ಮಾಹಿತಿಯನ್ನೂ ಕೊಟ್ಟಿದ್ದೇನೆ. ಈವರೆಗೆ ಎಫ್ಐಆರ್ ಮಾಡಿಲ್ಲ. ದೇಶದಲ್ಲಿ ನನಗೊಂದು, ಬೇರೆಯವರಿಗೆ ಒಂದು ಸಂವಿಧಾನ ಮತ್ತು ಕಾನೂನಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನನ್ನ ವಿರುದ್ಧ ಕೊಟ್ಟ ದೂರು ಕ್ಷಣ ಮಾತ್ರದಲ್ಲಿ ಎಫ್ಐಆರ್ ಆಗುತ್ತದೆ. ನಾನು ಕೊಟ್ಟ ದೂರು ಎಫ್ಐಆರ್ ಆಗುವುದಿಲ್ಲ ಎಂದಾದರೆ ಪೊಲೀಸರು ನಿಷ್ಪಕ್ಷಪಾತವಾಗಿ ವರ್ತಿಸುತ್ತಿಲ್ಲ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಡ ಎಂದರು. ಇವರು ನಡೆಸುವ ತನಿಖೆ ಪ್ರಾಮಾಣಿಕವಾಗಿರಲಿದೆ ಎಂಬುದಾಗಿ ಹೇಗೆ ಭಾವಿಸಲಾಗುತ್ತದೆ? ಮುಖಭಂಗವಾಗುವುದನ್ನು ತಪ್ಪಿಸಲು ಸರ್ಕಾರದಲ್ಲಿರುವ ಕೆಲವರು ಅಡ್ಡದಾರಿ ಹಿಡಿದಿದ್ದಾರೆ.
ಅನುಮತಿ ನೀಡದ ಸಭಾಪತಿ: ಮಹಜರೇ ಇಲ್ಲದೆ ಸಿ.ಟಿ.ರವಿ ಕೇಸ್ ತನಿಖೆ!
ತನಿಖೆಯ ಹಂತದಲ್ಲಿ ಎಲ್ಲವನ್ನೂ ವಿವರವಾಗಿ ಹೇಳಲಾಗುವುದಿಲ್ಲ. ನಾನೇನು ಹೇಳಬೇಕೋ ಅದನ್ನು ಸಭಾಪತಿಯವರಿಗೆ ಹೇಳಿದ್ದೇನೆ. ಸಭಾಪತಿಗಳು ದಾಖಲೆಗಳನ್ನು ಪರಿಶೀಲಿಸಿಯೇ ರೂಲಿಂಗ್ ಕೊಟ್ಟಿದ್ದಾರೆ. ಆ ರೂಲಿಂಗ್ ಪ್ರಶ್ನಿಸಿದರೆ ಅದು ಸಂವಿಧಾನವನ್ನು ಪ್ರಶ್ನಿಸಿದಂತೆ ಎಂದು ಹೇಳಿದರು. ಪೊಲೀಸರು ಒತ್ತಡಕ್ಕೊಳಗಾಗಿದ್ದು, ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ಡಿಜಿಪಿ- ಐಜಿಪಿಗೆ ದೂರು ಕೊಟ್ಟಿದ್ದೇನೆ. 20 ವರ್ಷ ಶಾಸಕನಾಗಿ, 2 ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಈಗಲೂ ವಿಧಾನಪರಿಷತ್ ಸದಸ್ಯನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ದೂರಿಗೆ ಈ ರೀತಿಯಾದರೆ, ಜನಸಾಮಾನ್ಯರ ದೂರಿನ ಪರಿಸ್ಥಿತಿ ಏನು ಎಂದು ಬೇಸರ ವ್ಯಕ್ತಪಡಿಸಿದರು.
ಸಂಸ್ಕೃತಿಯ ಬೇರು ಗಟ್ಟಿಗೊಳಿಸಬೇಕು: ವ್ಯಕ್ತಿಗತ ಲಾಭ ನಷ್ಟದ ಲೆಕ್ಕಚಾರದಲ್ಲಿ ಸಮಾಜ ಜೀವನ ದುರ್ಬಲಗೊಳ್ಳುತ್ತಿದೆ. ಸಂಸ್ಕೃತಿ ಬೇರುಗಳನ್ನು ಗಟ್ಟಿಗೊಳಿಸುವ ಕಾರ್ಯ ವ್ಯಾಪಕಗೊಳ್ಳಬೇಕೆಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ. ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಜಂಗಮ ಬಳಗ ಮತ್ತು ಶ್ರೀ ಪಾರ್ವತಿ ಮಹಿಳಾ ಮಂಡಳಿ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಶ್ರೀ ಸುವರ್ಣಾದೇವಿ ಸಂಸ್ಮರಣಾ ಹಿನ್ನಲೆಯಲ್ಲಿ ಸಂಸ್ಕೃತಿ ರಕ್ಷಣೆಯಲ್ಲಿ ತೊಡಗಿರುವ ಸಾಧಕ ಮಹಿಳೆ ಯರಿಗೆ ನೀಡುವ ಮಹಿಳಾ ರತ್ನ ಪ್ರಶಸ್ತಿಯನ್ನು ಶ್ರೀದೇವಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಜಿ.ಸುಧಾ ಚಂದ್ರಮೌಳಿ ಮತ್ತು ಅಕ್ಕನ ಬಳಗದ ಕಾರ್ಯದರ್ಶಿ ಆಶಾ ಹೇಮಂತಕುಮಾರ್ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
ಬೆದರಿಕೆ ಪತ್ರ ಸಿ.ಟಿ.ರವಿ ಅವರೇ ಸೃಷ್ಟಿಸಿದ್ದು: ಸಚಿವ ಎಂ.ಬಿ.ಪಾಟೀಲ್ ಆರೋಪ
ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ತರುವ ಕೆಲಸ ವೈಯಕ್ತಿಕ ನೆಲೆಯಲ್ಲಿ ಸಣ್ಣ ಪ್ರಮಾಣದಲ್ಲಾದರೂ ಆಗಬೇಕು. ಸತ್ಯ ಮತ್ತು ಸೇವೆ ತಳಹದಿಯ ಜೀವನ ಪದ್ಧತಿ ನಮ್ಮದು. ಧರ್ಮಿಷ್ಠರಾದವರು ಜಗತ್ತಿಗೆ ಒಳಿತನ್ನೆ ಮಾಡುತ್ತಾರೆ. ಪಾಶ್ಚಾತ್ಯರು ಮಾತ್ರ ಮತಾಂಧರಾಗಲು ಸಾಧ್ಯ. ಒಳಿತನ್ನು ಗುರುತಿಸಿ, ಪ್ರೇರೇಪಿಸುವ ಕಾರ್ಯ ಮಹಾ ತಾಯಿ ಹೆಸರಿನಲ್ಲಿ ನಿರಂತರವಾಗಿ ನಡೆಯುತ್ತಿರುವುದು ಮಾದರಿ ಎಂದರು. ಅಂಧ ಅನುಕರಣೆ, ಬೇಡದ ಆಚರಣೆ ಇಂದು ನಮ್ಮನ್ನು ಹೆಚ್ಚಾಗಿ ಆಕರ್ಷಿಸುತ್ತಿರುವುದು ಆತಂಕದಾಯಕ. ವ್ಯಕ್ತಿಗತ ಲಾಭ ನಷ್ಟವೇ ಹೆಚ್ಚಾಗಿ ಸಮಾಜ ಹಿತ ಗಮನಿಸದಿರುವ ಸಂಗತಿ ಸುತ್ತಲೂ ಕಾಣುತ್ತಿದ್ದೇವೆ. ಶುಭಾಶಯಗಳನ್ನು ಕೋರುವುದು ತಪ್ಪಲ್ಲ. ಆದರೆ ದೀಪ ಆರಿಸುವುದು ಅಮಂಗಳಕರ. ತಂದೆ ತಾಯಿಯರಿಗೆ, ಗುರು ಹಿರಿಯರಿಗೆ ನಮಸ್ಕರಿಸುವುದು ನಮ್ಮ ಸಂಪ್ರದಾಯ. ಇದರಲ್ಲಿ ನಮ್ಮ ಅಹಂಕಾರ ಕಳೆದುಕೊಳ್ಳುವ ಜೊತೆಗೆ ಆಶೀರ್ವಾದ ಪಡೆದಂತಾಗುತ್ತದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.