ಬಸವನ ಬಾಗೇವಾಡಿ ಮತಕ್ಷೇತ್ರದ ಸಮಸ್ಯೆ ಪರಿಹರಿಸಲು ಸಿಎಂ ಬೊಮ್ಮಾಯಿಗೆ ಬೆಳ್ಳುಬ್ಬಿ ಮನವಿ

By Kannadaprabha NewsFirst Published Nov 25, 2022, 11:30 AM IST
Highlights

ಈ ಎಲ್ಲ ವಿಷಯಗಳ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿ ಸಂಬಂಧಪಟ್ಟವರಿಗೆ ಪರಿಹರಿಸಲು ಸೂಚಿಸಿದ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಜಲ ಸಂಪನ್ಮೂಲ ಸಚಿವರು 

ಕೊಲ್ಹಾರ(ನ.25):  ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿಯವರು ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕಂದಾಯ ಮಂತ್ರಿ ಆರ್‌.ಅಶೋಕರವರನ್ನು ಹಾಗೂ ನೀರಾವರಿ ಮಂತ್ರಿ ಗೋವಿಂದ ಕಾರಜೋಳರವರನ್ನು ಭೇಟಿ ಮಾಡಿ ಬಸವನ ಬಾಗೇವಾಡಿ ಮತಕ್ಷೇತ್ರದ ಹಲವಾರು ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿ, ಪರಿಹರಿಸಲು ವಿನಂತಿಸಿದರು.

ಕನ್ಹೇರಿ ಸಿದ್ದಗಿರಿ ಮಠದ ಶಾಖಾ ಮಠ ನಿರ್ಮಾಣ ಮಾಡಲು ಬಸವನ ಬಾಗೇವಾಡಿ ತಾಲೂಕಿನ ಮಣ್ಣೂರ ಹಾಗೂ ನಾಗವಾಡ ಗ್ರಾಮಕ್ಕೆ ಹೊಂದಿಕೊಂಡಿರುವ ಸರ್ಕಾರಿ ಭೂಮಿ ಮಂಜೂರು ಮಾಡುವುದು. ಬಸವನ ಬಾಗೇವಾಡಿ ಪಟ್ಟಣದಲ್ಲಿ ಕಂದಾಯ ಉಪ ವಿಭಾಗಾಧಿಕಾರಿ ಕಚೇರಿ ಮಂಜೂರು ಮಾಡುವುದು. ಬಸವ ಜನ್ಮಭೂಮಿ ಬಸವನ ಬಾಗೇವಾಡಿಯನ್ನು ಪ್ರತ್ಯೇಕ ಪ್ರಾಧಿಕಾರ ಮಾಡುವುದು. ಆಲಮಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಲಮಟ್ಟಿಆರ್‌.ಎಸ್‌.ನ ಅನಧಿಕೃತ ಕಟ್ಟಡಗಳನ್ನು (ಮನೆಗಳು) ಸಕ್ರಮಗೊಳಿಸುವುದು, ತಳೇವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲಗುರ್ಕಿದೊಡ್ಡಿ (ಕಿಲಾರಹಟ್ಟಿ)ಯ ಅನಧಿಕೃತ ಕಟ್ಟಡಗಳನ್ನು (ಮನೆಗಳು) ಸಕ್ರಮಗೊಳಿಸುವುದು, ಆಲಮಟ್ಟಿ ಜಲಾಶಯದ 524.256 ಮೀಟರ್‌ ಎತ್ತರದಿಂದ ಸ್ವಾಧೀನಪಡಿಸಿಕೊಳ್ಳಲಾಗುವ ಜಮೀನಿನ ಪಕ್ಕ ಉಳಿದು ಹೋಗುವ ಜಮೀನು ಮಾಲೀಕರ ಒಂದು ಗುಂಟಾದಿಂದ ಹಿಡಿದು ಒಂದು ಎಕರೆವರೆಗೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವದು, ಮರಾಠಾ ಸಮುದಾಯವನ್ನು 2ಎ ಮೀಸಲಾತಿಗೆ ಒಳಪಡಿಸುವ ಕುರಿತು ಮನವಿ ಸಲ್ಲಿಸಿದರು.

Karnataka Politics: 2023ರಲ್ಲಿ ಬಿಜೆಪಿಗೆ 130 ಸ್ಥಾನ, ಮತ್ತೆ ಅಧಿಕಾರಕ್ಕೆ: ಬಸನಗೌಡ ಪಾಟೀಲ್ ಯತ್ನಾಳ್ ವಿಶ್ವಾಸ

ಈ ಎಲ್ಲ ವಿಷಯಗಳ ಕುರಿತು ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಜಲ ಸಂಪನ್ಮೂಲ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಸಂಬಂಧಪಟ್ಟವರಿಗೆ ಪರಿಹರಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಸಂತೋಷ ನಾಯಕ, ಕಾಡಸಿದ್ದೇಶ್ವರ ಬಿರಾದಾರ ಕೊಲ್ಹಾಪುರ, ಬಸವರಾಜ ಗಚ್ಚಿನವರ ಹಾಗೂ ಬಸವರಾಜ ನಾಯ್ಕೋಡಿ ಉಪಸ್ಥಿತರಿದ್ದರು.
 

click me!