ಮಾನ್ವಿಯಲ್ಲಿ ಕಾಂಗ್ರೆಸ್‌ನಿಂದ ವಿಪಕ್ಷ ವಿರುದ್ಧ ಸ್ವಾಭಿಮಾನಿ ಅಸ್ತ್ರ ಪ್ರಯೋಗಿಸಿದ ಸಿಎಂ ಸಿದ್ದರಾಮಯ್ಯ!

By Kannadaprabha NewsFirst Published Oct 6, 2024, 7:37 AM IST
Highlights

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ತಳ್ಳಿರುವ ಮೈತ್ರಿ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನವರು ಸಿಎಂ ವಿರುದ್ಧ ಹೂಡಿರುವ ರಾಜೀನಾಮೆ ಅಸ್ತ್ರಕ್ಕೆ ಆಡಳಿತರೂಢ ಕಾಂಗ್ರೆಸ್‌ ಪಕ್ಷವು ಸ್ವಾಭಿಮಾನದ ಶಕ್ತಿಪ್ರದರ್ಶನ ತೋರಿಸುವುದರ ಮುಖಾಂತರ ಪ್ರತ್ಯಸ್ತ್ರ ಪ್ರಯೋಗಿಸಿತು. 

ರಾಮಕೃಷ್ಣ ದಾಸರಿ

ಮಾನ್ವಿ (ರಾಯಚೂರು ಜಿಲ್ಲೆ) (ಅ.06): ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಜೆಡಿಎಸ್ ನಾಯಕ ಜಿ.ಟಿ. ದೇವೇಗೌಡ ಅವರು ತಮ್ಮ ಬೆಂಬಲಕ್ಕೆ ನಿಂತಿದ್ದನ್ನು ಬಳಸಿಕೊಂಡು ವಿಪಕ್ಷ ಬಿಜೆಪಿ-ಜೆಡಿಎಸ್‌ ಅನ್ನು ಹಿಗ್ಗಾಮುಗ್ಗಾ ಹಣಿದಿದ್ದ ಸಿಎಂ ಸಿದ್ದರಾಮಯ್ಯ ಶನಿವಾರ ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ನಡೆದ ಸ್ವಾಭಿಮಾನಿ ಸಮಾವೇಶದಲ್ಲಿ ಭರ್ಜರಿ ಜನಬೆಂಬಲ ಪ್ರದರ್ಶಿಸುವ ಮೂಲಕ ವಿಪಕ್ಷಗಳಿಗೆ ಮತ್ತೊಮ್ಮೆ ತಿರುಗೇಟು ನೀಡಿದರು. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ತಳ್ಳಿರುವ ಮೈತ್ರಿ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನವರು ಸಿಎಂ ವಿರುದ್ಧ ಹೂಡಿರುವ ರಾಜೀನಾಮೆ ಅಸ್ತ್ರಕ್ಕೆ ಆಡಳಿತರೂಢ ಕಾಂಗ್ರೆಸ್‌ ಪಕ್ಷವು ಸ್ವಾಭಿಮಾನದ ಶಕ್ತಿಪ್ರದರ್ಶನ ತೋರಿಸುವುದರ ಮುಖಾಂತರ ಪ್ರತ್ಯಸ್ತ್ರ ಪ್ರಯೋಗಿಸಿತು. 

Latest Videos

ಜಿಲ್ಲೆ ಮಾನ್ವಿ ಪಟ್ಟಣದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಹಮ್ಮಿಕೊಂಡಿದ್ದ ಶೋಷಿತ, ದಮನಿತ ಮತ್ತು ಶೂದ್ರ ಜನ ಸಮುದಾಯಗಳ ಸ್ವಾಭಿಮಾನಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನಸಾಗರ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ಜನರಿದ್ದಾರೆ ಎನ್ನುವ ಸಂದೇಶ ರವಾನಿಸಲಾಯಿತು. ಸ್ವಾಭಿಮಾನ ಸಮಾವೇಶದಲ್ಲಿ ಸುಮಾರು 55 ಸಾವಿರಕ್ಕು ಹೆಚ್ಚು ಜನರು ಭಾಗವಹಿಸಿದ್ದರು. ಮಾನ್ವಿ ಪಟ್ಟಣ ಸುತ್ತಲಿನ ಮೂರ್ನಾಲ್ಕು ಕಿಮೀ ರಸ್ತೆಯುದ್ದಕ್ಕು ಜನಸ್ತೋಮವಿತ್ತು. ಕಾರ್ಯಕ್ರಮದ ಆರಂಭದಲ್ಲಿ ಸಚಿವರು ಮಾತನಾಡಿದ ನಂತರ ಸಿಎಂ ಸಿದ್ದರಾಮಯ್ಯ ಭಾಷಣಕ್ಕಾಗಿ ಸಿದ್ಧಗೊಳ್ಳುತ್ತಿದ್ದಂತೆ ಕಿಕ್ಕಿರಿದ ಜನಗಳಿಂದ ತಮ್ಮ ಪರ ಮೊಳಗಿದ ಘೋಷಣೆಗಳನ್ನು ಕೇಳಿ ಸ್ವತಃ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು, ಪಕ್ಷದ ಮುಖಂಡರು ಮತ್ತಷ್ಟು ಹುರುಪು ಪಡೆದು ವಿಪಕ್ಷಗಳನ್ನು ಹಿಗ್ಗಾಮುಗ್ಗಾ ಟೀಕಿಸಿದರು. ನಮ್ಮ ಜನತೆ ಜನರಿದ್ದಾರೆ ಎಂಬ ಸಂದೇಶ ದಾಟಿಸಿದರು.

ಜಾತಿ ಗಣತಿ ವರದಿ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ: ಸಿಎಂ ಸಿದ್ದರಾಮಯ್ಯ

ಎರಡು ದಿನಗಳ ಕಾಲ ರಾಯಚೂರು ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಂಜೆ ಸಿಂಧನೂರಿನಲ್ಲಿ ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ಶನಿವಾರ ರಾಯಚೂರು ನಗರದ ಕೃಷಿ ವಿವಿ ಆವರಣದಲ್ಲಿ ಹಮ್ಮಿಕೊಂಡಿದ್ದ ಗೋಕಾಕ್‌ ಚಳವಳಿ ಹಿನ್ನೋಟ-ಮುನ್ನೋಟ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾನ್ವಿಗೆ ತೆರಳಿದರು, ದಾರಿಯುದ್ದಕ್ಕು ಸಿಎಂಗೆ ಪುಷ್ಪವೃಷ್ಟಿಗೈದು ಅದ್ದೂರಿ ಸ್ವಾಗತಿಸಿದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪ್ರೀತಿ ಮೆರೆದರು. ಮಾನ್ವಿ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಜೆಸಿಬಿ ಬಳಸಿ ಪುಷ್ಪವೃಷ್ಟಿ ಮಾಡಿ, ಪಟಾಕಿ ಸಿಡಿಸಿ ಸಿಎಂ ಬರಮಾಡಿಕೊಳ್ಳಲಾಯಿತು. 

ಬಳಿಕ ಸಿಎಂ ಸುಮಾರು 459 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಶೋಷಿತ-ದಮನಿತ-ಶೂದ್ರ ಜನ ಸಮುದಾಯಗಳ ಸ್ವಾಭಿಮಾನಿ ಸಮಾವೇಷವನ್ನು ಉದ್ಘಾಟಿಸಿ ಅಸಂಖ್ಯಾತ ಜನರನ್ನು ಕಂಡು ಭಾವನಾತ್ಮಕ ಭಾಷಣ ಮಾಡಿದರು. ಇಡೀ ತಮ್ಮ ಭಾಷಣದಲ್ಲಿ ನಾನು ಹಿಂದುಳಿದ ವರ್ಗದಿಂದ ಬಂದನವಾಗಿದ್ದು, ಕುರಿಕಾಯುವವನ ಮಗನಾಗಿದ್ದೇನೆ, ಎರಡು ಸಲ ಮುಖ್ಯಮಂತ್ರಿಯಾಗಿದ್ದು, ಬಡ-ದೀನದಲಿತರ ಸ್ವಾಭಿಮಾನ ಹಾಗೂ ಸ್ವಾವಲಂಬನೆ ಬದುಕಿಗಾಗಿ ಗ್ಯಾರಂಟಿ ಸೇರಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದೇನೆ. 

ಇದನ್ನೆಲ್ಲವನ್ನು ಸಹಿಸದ ವಿಪಕ್ಷ ನಾಯಕ ಆರ್‌.ಅಶೋಕ, ಬಿಎಸ್‌ವೈ, ಅವರ ಮಗ ವಿಜಯೇಂದ್ರ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಮೇಲೆ ಷಡ್ಯಂತ್ರ ರೂಪಿಸಿ ರಾಜೀನಾಮೆಯ ಒತ್ತಡ ಹೇರುತ್ತಿದ್ದು, ಇದರಿಂದ ನನಗೂ ಬೇಸರವಾಗಿದೆ. ಆದರೆ ನಿಮಗಾಗಿ ಹೋರಾಟ ಮುಂದುವರಿಸುತ್ತೇನೆ. ನಿಮ್ಮ ಆಶೀರ್ವಾದ ಇರಲಿ ರಾಜೀನಾಮೆ ಕೊಡಲ್ಲ, ರಾಜಕೀಯಕ್ಕೆ ಸಂಬಂಧವಿಲ್ಲದ ನನ್ನ ಪತ್ನಿಯನ್ನು ಬೀದಿಗೆ ಎಳೆದಿದ್ದಾರೆ. ಇವರಿಗೆ ನೀವೆ ತಕ್ಕ ಪಾಠ ಕಲಿಸಬೇಕು. ನನಗೆ ಎಷ್ಟು ಜನ ಬೆಂಬಲ ಕೊಡುತ್ತೀರಿ ಕೈ ಎತ್ತಿ. ಈ ಸ್ವಾಭಿಮಾನದ ಸಮಾವೇಶದ ಮುಖಾಂತರ ವಿಪಕ್ಷಗಳಿಗೆ ಉತ್ತರ ನೀಡಿ ಎಂದ ಸಿಎಂ ತಮ್ಮ ಭಾಷಣದುದ್ದಕ್ಕು ಹೀಗೆ ಭಾವನಾತ್ಮಕ ನುಡಿಗಳನ್ನಾಡಿದರು.

2 ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟ: ಹರ್‍ಯಾಣದಲ್ಲಿ ಕಾಂಗ್ರೆಸ್‌, ಕಾಶ್ಮೀರದಲ್ಲಿ ಅತಂತ್ರ?

ಸಿದ್ದು ಪರ ಸಚಿವರ ಬ್ಯಾಟಿಂಗ್: ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಚಿವರಾದ ಕೆ.ಎಚ್.ಮುನಿಯಪ್ಪ, ಎಚ್‌.ಸಿ. ಮಾಹದೇವಪ್ಪ, ಸತೀಶ ಜಾರಕಿಹೊಳಿ, ಶಿವರಾಜ ತಂಗಡಗಿ, ಎನ್‌.ಎಸ್‌. ಬೋಸರಾಜು, ಡಾ.ಶರಣಪ್ರಕಾಶ ಪಾಟೀಲ್ ಅವರು ತಮ್ಮ ಭಾಷಣದಲ್ಲಿ ಸಿಎಂ ಸಿದ್ದು ಪರ ಬ್ಯಾಟಿಂಗ್‌ ಮಾಡಿದರು. ಯಾವುದೇ ತಪ್ಪು ಮಾಡದ ಸಿಎಂ ವಿರುದ್ಧ ಬಿಜೆಪಿ-ಜೆಡಿಎಸ್‌ ನವರು ಇಲ್ಲ-ಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ಅವರ ಹೆಸರಿಗೆ ಮಸಿಬಳಿಯುವ ಹುನ್ನಾರ ನಡೆಸಿದ್ದು ರಾಜ್ಯ ಸರ್ಕಾರದ ಸಚಿವರು, ಶಾಸಕರು, ಪಕ್ಷದವರಷ್ಟೇ ಅಲ್ಲದೇ ಈ ಸ್ವಾಭಿಮಾನದ ಸಮಾವೇಶದಲ್ಲಿ ಪಾಲ್ಗೊಂಡ ಎಲ್ಲರೂ ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದೇವೆ ಎಂದು ಇಡೀ ರಾಜ್ಯಕ್ಕೆ ಸಂದೇಶ ಕಳುಹಿಸಬೇಕು ಎಂದರು.

click me!