ಆರ್‌ಎಸ್‌ಎಸ್‌ ಸಂಘಟನೆ ದೇಶ ಕಟ್ಟುವ, ಪಕ್ಷ ಬೆಳೆಸುವುದನ್ನು ಕಲಿಸಿದೆ: ಡಾ.ಧನಂಜಯ ಸರ್ಜಿ

By Kannadaprabha NewsFirst Published Jun 2, 2024, 4:53 PM IST
Highlights

ಆರ್‌.ಎಸ್‌.ಎಸ್‌.ಸಂಘಟನೆ ದೇಶ ಕಟ್ಟಲು, ಪಕ್ಷ ಬೆಳೆಸಲು ನಮಗೆ ಕಲಿಸಿಕೊಟ್ಟಿದೆ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ತಿಳಿಸಿದರು. 

ನರಸಿಂಹರಾಜಪುರ (ಜೂ.02): ಆರ್‌.ಎಸ್‌.ಎಸ್‌.ಸಂಘಟನೆ ದೇಶ ಕಟ್ಟಲು, ಪಕ್ಷ ಬೆಳೆಸಲು ನಮಗೆ ಕಲಿಸಿಕೊಟ್ಟಿದೆ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ತಿಳಿಸಿದರು. ಪಟ್ಟಣದ ವಾಸವಿ ಸಮುದಾಯ ಭವನದಲ್ಲಿ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ವೇಳೆ ಮಾತನಾಡಿ, ನಮಗೆ ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ ಎಂದು ಆರ್.ಎಸ್.ಎಸ್ ಕಲಿಸಿಕೊಟ್ಟಿದೆ. ನಮ್ಮ ಪಕ್ಷದಲ್ಲಿ ಎಂ.ಎಲ್ಸಿ ಚುನಾವಣೆ ಬಗ್ಗೆ ಯಾವುದೇ ಬಂಡಾಯವಿಲ್ಲ. ಸಂಘಟನೆ ಹಿರಿಯರು, ಬಹುದೊಡ್ಡ ಕಾರ್ಯಪಡೆಯೇ ನಮ್ಮ ಬೆನ್ನ ಹಿಂದಿದೆ. 

4800 ಘಟ ನಾಯಕರ ತಂಡ ಇದೆ. ಕಾರ್ಯಕರ್ತರು ನೀವೇ ಅಭ್ಯರ್ಥಿ ಎಂದುಕೊಂಡು ನನಗೆ ಹಾಗೂ ಬೋಜೇಗೌಡರಿಗೆ ಮತ ನೀಡಿ ಗೆದ್ದೇ ಗೆಲ್ಲಿಸುತ್ತೀರಿ ಎಂಬ ಆತ್ಮವಿಶ್ವಾಸ ನನಗೆ ಇದೆ ಎಂದು ನುಡಿದರು. ನಾನು ಶಿವಮೊಗ್ಗದಲ್ಲಿ ನಡೆಸುತ್ತಿರುವ ಸರ್ಜಿ ಆಸ್ಪತ್ರೆಯಲ್ಲಿ 100 ವೈದ್ಯರೂ ಸೇರಿ 1 ಸಾವಿರ ಸಿಬ್ಬಂದಿಯಿದ್ದಾರೆ. ನಾನು ವೃತ್ತಿಯಲ್ಲಿ ವೈದ್ಯನಾದರೂ ನಾನೊಬ್ಬ ಸ್ವಯಂ ಸೇವಕನಾಗಿದ್ದೇನೆ. ನನಗೆ ಪದವೀಧರರ ಸಮಸ್ಯೆ ಬಗ್ಗೆ ಅರಿವಿದೆ. ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಬೋಜೇಗೌಡ ಹಾಗೂ ಬಿಜೆಪಿ ಅಭ್ಯರ್ಥಿಯಾದ ನನ್ನನ್ನು ಚುನಾಯಿಸಬೇಕು. ನಾನೂ ಮತ್ತು ಎಸ್.ಎಲ್.ಬೋಜೇಗೌಡರು ಜೋಡೆತ್ತಿನಂತೆ ಕೆಲಸ ಮಾಡುತ್ತೇವೆ ಎಂಬ ಭರವಸೆ ನೀಡಿದರು.

Latest Videos

ಪಿಎಸ್‌ಐ ನೇಮಕಾತಿ ಗೊಂದಲ ಪರಿಹಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ

ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಜೂ.6 ರಂದು ಡಾ.ಧನಂಜಯಸರ್ಜಿ ಹಾಗೂ ಎಸ್.ಎಲ್. ಬೋಜೇಗೌಡರು ಎಂ.ಎಲ್ಸಿ ಆಗಿಯೇ ಆಗುತ್ತಾರೆ ಎಂದು ಭವಿಷ್ಯ ನುಡಿದರು. ಡಾ.ಧನಂಜಯಸರ್ಜಿ ಅವರು ಚಿಕ್ಕನಿಂದಲೂ ಆರ್.ಎಸ್.ಎಸ್‌ನಲ್ಲಿ ಸಕ್ರಿಯವಾಗಿದ್ದು, ಈಗಲೂ ಶಿವಮೊಗ್ಗದ ಆರ್.ಎಸ್.ಎಸ್. ನ ವಿಕಾಸ ಟ್ರಸ್ಟ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ನಮ್ಮೆಲ್ಲಾ ಕಾರ್ಯಕರ್ತರೂ ಕೂಡ ಬಿಜೆಪಿ ಹಾಗೂ ಜೆಡಿಎಸ್ ನ ಅಭ್ಯರ್ಥಿಗಳ ಪರವಾಗಿ ಹೃದಯದಿಂದ ಮತ ಕೇಳಬೇಕು ಎಂದು ಮನವಿ ಮಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್ ಮಾತನಾಡಿ, ನಾವೆಲ್ಲರೂ ಸಾರ್ವತ್ರಿಕ ಚುನಾವಣೆ ನಡೆಸಿದ್ದೇವೆ. ಈಗ ಕೇವಲ ಮತದಾರರಾಗಿ ನೋಂದಣಿ ಮಾಡಿಕೊಂಡ ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಸಬೇಕಾಗಿದೆ.

ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯಸರ್ಜಿ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸಾಧನೆ ಮಾಡಿ ಸೇವೆ ಸಲ್ಲಿಸಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಬಿಜೆಪಿ ಹಿರಿಯ ಮುಖಂಡರು ಅವರನ್ನು ಚುನಾವಣಾ ಅಖಾಡಕ್ಕಿಳಿಸಿದ್ದಾರೆ. ಒಟ್ಟು 85 ಸಾವಿರ ಪದವೀಧರ ಮತದಾರರಿದ್ದಾರೆ. 20 ಸಾವಿರಕ್ಕೂ ಹೆಚ್ಚು ಶಿಕ್ಷಕರ ಮತಗಳಿವೆ. ಆದ್ದರಿಂದ ನಮ್ಮ ತಾಲೂಕಿನ ಪದವೀಧರರು ಹಾಗೂ ಶಿಕ್ಷಕರು ನಮ್ಮ ಅಭ್ಯರ್ಥಿಗಳಿಗೇ ಮತ ಹಾಕುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಶಿವಮೊಗ್ಗ ರಾಜ್ಯ ಪ್ರಕೋಷ್ಟದ ಸಂಯೋಜಕ ದತ್ತಾತ್ರೇಯ ಮಾತನಾಡಿ, ನಾವು ಎಂಎಲ್ಎ ಹಾಗೂ ಎಂಪಿ ಚುನಾವಣೆ ಯಲ್ಲಿ ಎಲ್ಲರೂ ಮತದಾನ ಮಾಡುತ್ತೇವೆ. ಆದರೆ ಈ ಎಂ.ಎಲ್ಸಿ ಚುನಾವಣೆಯಲ್ಲಿ ಕೇವಲ ಮತದಾರರ ಪಟ್ಟಿಗೆ ಸೇರ್ಪಡೆ ಯಾದ ಪದವೀಧರರು ಹಾಗೂ ಶಿಕ್ಷಕರು ಮಾತ್ರ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ. ಪದವಿ ಮುಗಿದ 3 ವರ್ಷದ ನಂತರ ಹಾಗೂ ಶಿಕ್ಷಕರಾಗಿ ಸೇವೆ ಸಲ್ಲಿಸಿದ 3 ವರ್ಷದ ನಂತರವಷ್ಟೆ ಈ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶವಿರುತ್ತದೆ.1988ರಿಂದ ನಿರಂತರವಾಗಿ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿಕೊಂಡು ಬಂದಿದೆ. 

ಈ ಬಾರಿಯೂ ಕೂಡ ಗೆಲುವು ಸಾಧಿಸಲಿದೆ. ಡಿ.ಎಚ್.ಶಂಕರಮೂರ್ತಿಯವರು ಈ ಕ್ಷೇತ್ರದಿಂದ ಚುನಾಯಿತರಾಗಿ 250 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಮಂಜೂರು ಮಾಡಿಸಿದ್ದಾರೆ. 4 ಸಾವಿರ ಶಿಕ್ಷಕರಿಗೆ ಉದ್ಯೋಗ ಕಲ್ಪಿಸಿ ಕೊಟ್ಟಿದ್ದಾರೆ. ಬಿಜೆಪಿ ಅಧಿಕಾರದಲಿದ್ದಾಗಲೇ ಅತಿಥಿ ಶಿಕ್ಷಕರ ವೇತನ ಹೆಚ್ಚಿಸಲಾಗಿದೆ ಎಂದರು. ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಡಾ.ಧನಂಜಯಸರ್ಜಿ ಅವರು ಸೇವಾ ಮನೋಭಾವ ವುಳ್ಳವರು. ಅವರ ಸೇವೆ ಪದವೀಧರರಿಗೂ ದೊರಕಬೇಕು. ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಸ್.ಎಲ್.ಬೋಜೇಗೌಡ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂಧಿಸುವ ಸರಳ ಸಜ್ಜನ ವ್ಯಕ್ತಿ. ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ 100 ಪರ್ಸೆಂಟ್ ಭ್ರಷ್ಟಾಚಾರ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಸಭೆಯ ಅಧ್ಯಕ್ಷತೆಯನ್ನು ಮಂಡಲ ಬಿಜೆಪಿ ಅಧ್ಯಕ್ಷ ಅರುಣಕುಮಾರ್ ವಹಿಸಿದ್ದರು. ರಾಜ್ಯ ಕಾಫಿ ಮಂಡಳಿ ಸದಸ್ಯ ವೆನಿಲ್ಲಾ ಭಾಸ್ಕರ್, ಶಿವಮೊಗ್ಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಲತೇಶ್, ಎನ್.ಆರ್.ಪುರ ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿದಯಾನಂದ್, ಎಂ.ಎಲ್ಸಿ ಚುನಾವಣೆ ಸಂಯೋಜಕರಾದ ಎಸ್.ಎಸ್.ಸಂತೋಷ್‌ಕುಮಾರ್, ಭದ್ರೇಗೌಡ, ಕೆಸವೆ ಮಂಜುನಾಥ್ .ಎನ್‌.ಎಂ.ಕಾಂತರಾಜ್, ಬಿಜೆಪಿ ಹಾಗೂ ಜೆಡಿಎಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

click me!