
ಬೆಂಗಳೂರು (ಜು.19) ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(DK Shivakumar) ಅವರ ಎರಡನೇ ಹಂತದ ಸಚಿವ ಸಂಪುಟವೆಂಬ ಖಾದ್ಯ ಸಿದ್ಧಪಡಿಸಲು ಹಲವು ಬಾಣಸಿಗರು ಅತ್ಯುತ್ಸಾಹ ತೋರುತ್ತಿರುವ ಪರಿಣಾಮ ಇಡೀ ಪ್ರಕ್ರಿಯೆಗೆ ಸೋಮವಾರದಿಂದ ಮತ್ತೊಂದು ಹಂತದ ಚಾಲನೆ ನೀಡಬೇಕಾದ ಪರಿಸ್ಥಿತಿ ಕಾಂಗ್ರೆಸ್ನಲ್ಲಿ ಉಂಟಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Former CM Siddaramaiah) ಅವರ ಅವಧಿಯಲ್ಲಿ ಸಂಪುಟ ರಚನೆಯಂಥ ಸಂದರ್ಭದಲ್ಲಿ ರಾಜ್ಯದಿಂದ ಎರಡು ಪಟ್ಟಿ ಮಾತ್ರ ಸಲ್ಲಿಕೆಯಾಗುತ್ತಿದ್ದು, ಇದಕ್ಕೆ ಹೈಕಮಾಂಡ್ ನಾಯಕರ ಕೆಲ ಹೆಸರು ಸೇರ್ಪಡೆ ಮಾಡುವ ಮೂಲಕ ಪ್ರಕ್ರಿಯೆ ಪೂರ್ಣಗೊಳ್ಳುತ್ತಿತ್ತು. ಆದರೆ, ಈ ಬಾರಿ ರಾಜ್ಯದಿಂದಲೇ ಮೂರು ಪ್ರತ್ಯೇಕ ಪಟ್ಟಿ ಹಾಗೂ ಹೈಕಮಾಂಡ್ ವಲಯದಿಂದಲೂ ಎರಡಕ್ಕೂ ಹೆಚ್ಚು ಪಟ್ಟಿ ರೂಪುಗೊಂಡಿರುವುದು ಇಡೀ ಪ್ರಕ್ರಿಯೆ ವಿಳಂಬವಾಗಲು ಕಾರಣವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಎರಡನೇ ಹಂತದ ಸಂಪುಟ ಸೇರ್ಪಡೆಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ತಮ್ಮ ಬೆಂಬಲಿಗರ ಪ್ರತ್ಯೇಕ ಪಟ್ಟಿಯನ್ನು ದೆಹಲಿಗೆ ಒಯ್ದಿದ್ದರೆ, ಹೈಕಮಾಂಡ್ನ ಪ್ರಭಾವಿಗಳಾದ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಹಾಗೂ ಕೆ.ಸಿ.ವೇಣುಗೋಪಾಲ್ ಅವರು ಸಹ ಕೆಲ ಹೆಸರುಗಳೊಂದಿಗೆ ಸಜ್ಜಾಗಿದ್ದರು ಎನ್ನುತ್ತವೆ ಮೂಲಗಳು.
ದೆಹಲಿಯಲ್ಲಿ ನಡೆದ ಎರಡು ದಿನಗಳ ಚರ್ಚೆ ವೇಳೆ ಈ ಹಲವು ಪಟ್ಟಿಗಳು ತಾಳಮೇಳ ಸೇರುತ್ತಿಲ್ಲ. ಕೆಲ ಹೆಸರುಗಳ ಬಗ್ಗೆ ನಾಯಕರಲ್ಲೇ ಒಮ್ಮತ ಮೂಡಿ ಬಂದಿಲ್ಲ. ರಾಜ್ಯ ನಾಯಕರು ಸೂಚಿಸಿದ ಕೆಲ ಹೆಸರುಗಳು ಹೈಕಮಾಂಡ್ಗೆ ಒಪ್ಪಿಗೆಯಾಗುತ್ತಿಲ್ಲ. ಹೀಗಾಗಿ ಕೆಲ ಸೂಚನೆಗಳನ್ನು ನೀಡಿ ಅದಕ್ಕೆ ಅನುಗುಣವಾಗಿ ಹೆಸರುಗಳನ್ನು ಶಿಫಾರಸು ಮಾಡುವಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಂಪುಟದಲ್ಲಿ ಶೇ.75ರಷ್ಟು ಸ್ಥಾನ ತುಂಬುವ ಅವಕಾಶ ಮುಖ್ಯಮಂತ್ರಿಗೆ ಇರುತ್ತಿತ್ತು. ಉಳಿದ ನಾಯಕರು ಹಾಗೂ ಹೈಕಮಾಂಡ್ ಉಳಿದ ಸ್ಥಾನಗಳಿಗೆ ಶಿಫಾರಸು ಮಾಡುತ್ತಿದ್ದರು. ಆದರೆ, ಈ ಬಾರಿ ಆ ನಿಯಮದಲ್ಲಿ ಬದಲಾವಣೆ ಏಕೆ ಆಗುತ್ತಿದೆ ಎಂಬ ಪ್ರಶ್ನೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ರಾಹುಲ್ ಗಾಂಧಿ ಅವರ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರಿಗೆ ಸಂಪುಟದಲ್ಲಿ ಸ್ಥಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲ ನಿರ್ದಿಷ್ಟ ಹೆಸರುಗಳ ಸೇರ್ಪಡೆಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಇದರ ನಡುವೆ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರು ಕೂಡ ತಮ್ಮ ಆಯ್ಕೆಯ ಕೆಲ ಹೆಸರುಗಳನ್ನು ಹೈಕಮಾಂಡ್ ಮುಂದೆ ಪ್ರಸ್ತಾವನೆ ಮಾಡಿದ್ದರೆ, ಸುರ್ಜೇವಾಲಾ ಹಾಗೂ ವೇಣುಗೋಪಾಲ್ ಅವರ ಆಯ್ಕೆಯ ಕೆಲ ಹೆಸರಗಳು ಕೂಡ ಚರ್ಚೆಗೆ ಬಂದಿದೆ ಎನ್ನಲಾಗಿದೆ.
ಈ ಎಲ್ಲ ಕಾರಣದಿಂದ ಪಟ್ಟಿ ಅಂತಿಮಗೊಂಡಿಲ್ಲ. ಹೀಗಾಗಿಯೇ ಪರಿಷ್ಕೃತ ಪಟ್ಟಿ ನೀಡುವಂತೆ ರಾಜ್ಯ ನಾಯಕತ್ವಕ್ಕೆ ಹೈಕಮಾಂಡ್ ಸೂಚಿಸಿದೆ. ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ಹಿಂತಿರುಗಿದ್ದು, ಸೋಮವಾರದ ವೇಳೆಗೆ ರಾಜ್ಯ ನಾಯಕರ ಶಿಫಾರಸು ಕೂಡ ಬಂದರೆ ನಂತರ ಅಂತಿಮ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ಹೇಳಿವೆ.
ಶನಿವಾರ ನಗರದ ಸದಾಶಿವನಗರದ ನಿವಾಸದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಪಟ್ಟಿ ಪರಿಷ್ಕರಣೆ ಕುರಿತು ಚರ್ಚೆ ನಡೆಸಿದರು. ಈ ವೇಳೆ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೂಡ ಜೊತೆಗಿದ್ದರು.
ಶನಿವಾರ ದೆಹಲಿಗೆ ತೆರಳಬೇಕಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಬೆಳಗ್ಗೆ ಸದಾಶಿವನಗರದ ತಮ್ಮ ಹಳೆಯ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ, ಅವರ ಜೊತೆಯಲ್ಲೇ ಕಾರಿನಲ್ಲಿ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಲ ಕಾಲ ಚರ್ಚೆ ನಡೆಸಿದರು. ಬಳಿಕ ವಿಮಾನ ನಿಲ್ದಾಣದವರೆಗೂ ಜೊತೆಯಲ್ಲೇ ತೆರಳಿದರು. ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಇದ್ದರು. ಪ್ರಯಾಣದ ವೇಳೆಯೂ ಸಂಪುಟ ವಿಸ್ತರಣೆಗೆ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಯಾವೆಲ್ಲಾ ಬದಲಾವಣೆ ಆಗಬೇಕೆಂಬ ಬಗ್ಗೆ ಚರ್ಚೆ ನಡೆಸಿದ್ದು, ಅವರ ಸೂಚನೆಯಂತೆ ಒಂದೆರಡು ದಿನದಲ್ಲಿ ಪರಿಷ್ಕೃತ ಪಟ್ಟಿಯನ್ನು ದೆಹಲಿಗೆ ಕಳುಹಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಖರ್ಗೆ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ಸಂಪುಟ ವಿಸ್ತರಣೆ ವಿಚಾರದಲ್ಲೇ ಕಾಂಗ್ರೆಸ್ ಕಾಲ ಕಳೆಯುತ್ತಿದೆ ಎಂಬ ವಿಪಕ್ಷಗಳ ಆರೋಪ ಕುರಿತ ಪ್ರಶ್ನೆಗೆ, ಒಂದು ಕಡೆ ಸಂಪುಟ ವಿಸ್ತರಣೆ ಆಗಿಲ್ಲ, 15 ಜನ ಸಚಿವರನ್ನು ಇಟ್ಟುಕೊಂಡು ಏನು ಮಾಡುತ್ತಾರೆ ಅಂತ ಅವರೇ ಸುದ್ದಿ ಮಾಡುತ್ತಾರೆ. ಮತ್ತೊಂದು ಕಡೆ ಸಂಪುಟ ವಿಸ್ತರಿಸದೆ ಅಧಿವೇಶನ ಹೇಗೆ ನಡೆಸುತ್ತೀರಿ ಎಂದು ಕೇಳುತ್ತಾರೆ. ನಾವು ಜವಾಬ್ದಾರಿ ಇಟ್ಟುಕೊಂಡು ಕೆಲಸ ಮಾಡುತ್ತೇವೆ. ಹೈಕಮಾಂಡ್ ನಮ್ಮ ಪಟ್ಟಿಗೆ ಒಪ್ಪಿಗೆ ನೀಡಿದ ಬಳಿಕ ಶೀಘ್ರ ಸಂಪುಟ ವಿಸ್ತರಣೆ ಆಗಲಿದೆ ಎಂದರು.
ಈ ಮಧ್ಯೆ, ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಸೇರಿ ಕೆಲ ಸಚಿವಾಕಾಂಕ್ಷಿಗಳು ಶನಿವಾರ ನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.