
ಉಡುಪಿ (ಮೇ.15): ಹಿಂದೆ ಎರಡು ಬಾರಿ ವಿಧಾನ ಪರಿಷತ್ ಸದಸ್ಯನಾಗಿ ಕಾರ್ಮಿಕರ, ಸರ್ಕಾರಿ ನೌಕರರ, ಪೊಲೀಸ್ ಸಿಬ್ಬಂದಿ, ಕಾಲೇಜು ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಯಶಸ್ವಿಯಾಗಿದ್ದೇನೆ. ಆದ್ದರಿಂದ ಮತ್ತೆ ಅವರ ಪರವಾಗಿ ಧ್ವನಿ ಎತ್ತಲು ಅವರೆಲ್ಲರೂ ತಮಗೆ ಮತ ನೀಡಲಿದ್ದು, ತನ್ನ ಗೆಲವು ಸುಲಭವಾಗಿದೆ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯನಾಗಿದ್ದಾಗ, ಸಿಎಂ ಆಗಿದ್ದ ಬೊಮ್ಮಾಯಿ ಅವರು ಯಾವುದೋ ಉದ್ಯಮಪತಿಗಳಿಗೆ ಮಣಿದು ಕೆಲಸದ ವೇಳೆಯನ್ನು 8ರಿಂದ 11 ಗಂಟೆಗೇರಿಸಿದ್ದರು, ಆಗ ತಾನು ಸರ್ಕಾರದ ವಿರುದ್ಧವೇ ಮಾತನಾಡಿದ್ದೆ. ಉಪನ್ಯಾಸಕ ಸಮಸ್ಯೆಯ ಬಗ್ಗೆ ತಮ್ಮದೇ ಸರ್ಕಾರವನ್ನು ಎದುರು ಹಾಕಿಕೊಂಡು ನ್ಯಾಯ ಒದಗಿಸಿದ್ದೆ ಎಂದರು. ತಾವು ಬೇರೆ ಅಭ್ಯರ್ಥಿಗಳಿಗಿಂತ ಹೆಚ್ಚು ವರ್ಷ ಕಾರ್ಮಿಕಪರ ಕೆಲಸ ಮಾಡಿದ್ದೇನೆ, ಅದಕ್ಕಾಗಿ 30-35 ಮೊಕದ್ದಮೆಗಳನ್ನೂ ಎದುರಿಸಿದ್ದೇನೆ, ಮುಂದೆ ಕಾನೂನು ಹೋರಾಟಕ್ಕೂ ಸಿದ್ಧನಿದ್ದೇನೆ ಎಂದರು.
ಜಾತಿ, ಹಣ ಎಲ್ಲ ಪಕ್ಷದಲ್ಲೂ ಇದೆ: ಎಲ್ಲಾ ಪಕ್ಷಗಳಲ್ಲಿಯೂ ನ್ಯೂನತೆ, ದೋಷ ಇದೆ. ಜಾತಿ ಬಲ, ಹಣಬಲ ಎಲ್ಲ ಪಕ್ಷಗಳಲ್ಲಿಯೂ ಪ್ರಭಾವ ಬೀರುತ್ತದೆ. ಆದರೆ ಪರಿಷತ್ ಚುನಾವಣೆಯಲ್ಲಿ ನೌಕರರು, ಕಾರ್ಮಿಕರು ಜಾತಿಗಿಂತ ತಮ್ಮ ಸಮಸ್ಯೆ ಪರಿಹಾರ ಮಾಡುವವರಿಗೆ ಜಾತಿ ನೋಡದೆ ಮತ ಹಾಕುತ್ತಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಫೂರ್, ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮುಂತಾದವರಿದ್ದರು.
ಬಹಿರಂಗ ಸವಾಲಿಗೆ ಸೂಕ್ತ ಪ್ರತ್ಯುತ್ತರ ನೀಡಿ: ಸಂಸದ ಬಿ.ವೈ.ರಾಘವೇಂದ್ರ
ಭಟ್ ಸ್ಪರ್ಧೆ ಬಿಜೆಪಿ ಆಂತರಿಕ ಸಮಸ್ಯೆ: ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಬಂಡಾಯವಾಗಿ ಪದವೀಧರರ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿರುವುದು ಅವರ ಪಕ್ಷದ ಆಂತರಿಕ ಸಮಸ್ಯೆ. ಅವರು ನನ್ನ ಆತ್ಮೀಯರು, ಶಾಸಕರಾಗಿ ನನ್ನ ಪಕ್ಕದ ಕೊಠಡಿಯಲ್ಲಿದ್ದರು. ಅವರಂತೆ ಕಾಂಗ್ರೆಸ್ನಿಂದಲೂ ದಿನೇಶ್ ಅವರು ಬಂಡಾಯವಾಗಿ ಸ್ಪರ್ಧಿಸುತ್ತಿದ್ದಾರೆ, ಅವರ ಸ್ಪರ್ಧೆಯಿಂದ ತಮಗೆ ಸಮಸ್ಯೆ ಇಲ್ಲ ಎಂದು ಮಂಜುನಾಥ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.