ಅಡಿಕೆ ಬೆಳೆಗಾರರ ಪರ ಧ್ವನಿ ಎತ್ತಿದ ಸಂಸದ ಬಿ.ವೈ. ರಾಘವೇಂದ್ರ

By Sathish Kumar KHFirst Published Dec 15, 2022, 9:10 PM IST
Highlights

ಅಡಿಕೆ ಬೆಲೆ ಕುಸಿತದಿಂದ ಅಡಿಕೆ ಬೆಳೆಗರಾರು ಕಂಗಾಲಾಗಿದ್ದಾರೆ.
ವಿದೇಶದಿಂದ ಅಡಿಕೆ ಆಮದು ಸ್ಥಳೀಯ ರೈತರಿಗೆ ಪೆಟ್ಟು ನೀಡುತ್ತಿದೆ.
ಅಡಿಕೆಗೆ ಆಮದು ಸುಂಕ ಹೆಚ್ಚಳ ಮಾಡಬೇಕು.

ನವದೆಹಲಿ (ಡಿ.15): ಆಮದು ಅಡಿಕೆಗೆ ಹೆಚ್ಚಿನ ಸುಂಕ ವಿಧಿಸುವಂತೆ ಹಾಗೂ ಎಲೆ ಚುಕ್ಕೆ ರೋಗಕ್ಕೆ ವೈಜ್ಞಾನಿಕ ಔಷಧಿ ಪರಿಚಯಿಸಿ ರೈತರ ಹಿತ ಕಾಪಾಡಬೇಕು ಶಿವಮೊಗ್ಗದ ಸಂಸದ ಶ್ರೀ ಬಿ. ವೈ. ರಾಘವೇಂದ್ರ ಲೋಕಸಭೆಯಲ್ಲಿ ಒತ್ತಾಯಿಸಿದ್ದಾರೆ. 

ಲೋಕಸಭಾ ಅಧಿವೇಶನದಲ್ಲಿ ಇಂದು ಶೂನ್ಯ ವೇಳೆಯಲ್ಲಿ ಅಡಿಕೆ ರೈತರ ಸಮಸ್ಯೆಗಳ ಕುರಿತು ಮಹತ್ವದ ವಿಷಯವನ್ನು ಪ್ರಸ್ತಾಪಿಸಿ, ಸದನದ ಗಮನ ಸೆಳೆದರು. ಕರ್ನಾಟಕವೂ ಸೇರಿದಂತೆ ದೇಶದ 10 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಕರ್ನಾಟಕದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಿವಮೊಗ್ಗ ಸೇರಿದಂತೆ 16 ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ಸುಮಾರು 10 ಲಕ್ಷ ಕುಟುಂಬಗಳು ಅಡಿಕೆ ಕೃಷಿಯನ್ನು ಅವಲಂಬಿಸಿವೆ ಎಂದರು.

ಅಡಿಕೆಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗದ ನಿಯಂತ್ರಣಕ್ಕಾಗಿ ಜಗದ್ಗುರುಗಳ ಮೊರೆಹೋದ ಕೃಷಿಕರು

ದೇಶದ ಅಡಿಕೆ ಉತ್ಪಾದನೆಯಲ್ಲಿ ಸಿಂಹಪಾಲು: ದೇಶದ ಒಟ್ಟು ಅಡಿಕೆ ಉತ್ಪಾದನೆ ಪ್ರಮಾಣವಾಗಿರುವ 16.50 ಲಕ್ಷ ಮೆಟ್ರಿಕ್‌ ಟನ್‌ಗಳಲ್ಲಿ, ಕರ್ನಾಟಕ ರಾಜ್ಯವು ಸುಮಾರು ಶೇಕಡಾ 69ರಷ್ಟು ಅಡಿಕೆಯನ್ನು ಉತ್ಪಾದಿಸುತ್ತದೆ. ಇದರ ಒಟ್ಟು ಮೌಲ್ಯ ಸುಮಾರು 8,250 ಕೋಟಿ ರೂಪಾಯಿ ಆಗಿದೆ. ಇದು ಜಿಎಸ್‌ಟಿ ಮತ್ತು ವಿವಿಧ ಉತ್ಪನ್ನಗಳ ಮೇಲೆ ಸೆಸ್‌ ರೂಪದಲ್ಲಿ ಬೊಕ್ಕಸಕ್ಕೆ 24,750 ಕೋಟಿ ರೂಪಾಯಿಗಳ ಬೃಹತ್ ಆದಾಯವನ್ನು ನೀಡುತ್ತಿದೆ. ಹೀಗಾಗಿ, ವಿದೇಶದಿಂದ ಅಕ್ರಮವಾಗಿ ಅಡಿಕೆ ವ್ಯಾಪಾರ ನಡೆಯುವುದನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದರು.

ಒಂದೇ ವರ್ಷದಲ್ಲಿ ಶೇ.50 ಬೆಲೆ ಕುಸಿತ:  ಆದರೆ, ಅಡಿಕೆ ಬೆಳೆಗಾರರು ನಿಜವಾಗಿಯೂ ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದು, ಅಡಿಕೆಗೆ ಬಂದಿರುವ ಎಲೆ ಚುಕ್ಕೆ ರೋಗದಿಂದ ತತ್ತರಿಸುತ್ತಿದ್ದಾರೆ. ಹಾಗಾಗಿ ಇಳುವರಿಯಲ್ಲಿ ಭಾರಿ ಕುಸಿತ ಉಂಟಾಗಿ ಶೇ.40ರಿಂದ 50ಕ್ಕಿಂತ ಕಡಿಮೆಯಾಗಿದೆ. ಬೆಲೆ ಕುಸಿತದಿಂದ ಬೆಳೆಗಾರರಿಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಹೀಗಾಗಿ ರೈತರು ಅಸಹಾಯಕ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಈ ವರ್ಷ ಸೆಪ್ಟೆಂಬರ್ ಮೊದಲ ವಾರದಲ್ಲಿ ಅಡಿಕೆ ಬೆಲೆ ಕ್ವಿಂಟಾಲ್‌ಗೆ 58,000 ರೂ. ಇದ್ದುದ್ದು ಡಿಸೆಂಬರ್ ಎರಡನೇ ವಾರದಲ್ಲಿ 30 ಸಾವಿರಕ್ಕೆ ಇಳಿದಿದೆ. ಇದಲ್ಲದೆ ಎಲೆ ಚುಕ್ಕೆ ರೋಗದಿಂದ ಅಡಿಕೆ ಇಳುವರಿ ಕುಸಿತದ ಜತೆಗೆ ಬೆಲೆ ಕುಸಿದಿರುವುದು ರೈತರ ಮನದಾಳದಲ್ಲಿ ಆತಂಕ ಮೂಡಿಸಿದೆ ಎಂದು ಸಭೆಗೆ ಮನದಟಟು ಮಾಡಿದರು.

Chikkamagaluru: ಅಡಕೆಗೆ ಎಲೆಚುಕ್ಕಿರೋಗ, ಹಳದಿ ರೋಗ ಸಾಲಬಾಧೆಯಿಂದ ರೈತ ಆತ್ಮಹತ್ಯೆ

ವಿದೇಶಿ ಅಡಿಕೆಗೆ ಆಮದು ಸುಂಕ ಹೆಚ್ಚಿಸಿ: ಆದುದರಿಂದ ಆಮದು ಮಾಡಿಕೊಳ್ಳುವ ಅಡಿಕೆಗೆ ಹೆಚ್ಚಿನ ಆಮದು ಸುಂಕ ವಿಧಿಸಬೇಕು. ಜೊತೆಗೆ, ದೇಶದಲ್ಲಿ ಬೆಳೆಯುತ್ತಿರುವ ಅಡಿಕೆ ಮರಗಳಿಗೆ ಬಂದಿರುವ ಎಲ್ ಚುಕ್ಕೆ ರೋಗ ಸೇರಿ ಇತರೆ ರೋಗಗಳಿಗೆ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ ಔಷಧವನ್ನು ಪರಿಚಯಿಸಬೇಕು. ಕರ್ನಾಟಕದ ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡಲು ಹಾಗೂ ಅಕ್ರಮ ಅಡಿಕೆ ವ್ಯಾಪಾರವನ್ನು ತಡೆಯಲು ಕಟ್ಟುನಿಟ್ಟಿನ ಕಾರ್ಯವಿಧಾನವನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

click me!