
ಪುಣೆ (ಆ.02): ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಸ್ಕೀಂಗಳ ಬಗ್ಗೆ ಪರೋಕ್ಷವಾಗಿ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ, ‘ಸ್ವಹಿತಾಸಕ್ತಿಗಾಗಿ ಯಾವುದೇ ಪಕ್ಷವು ರಾಜ್ಯದ ಬೊಕ್ಕಸವನ್ನು ಬರಿದು ಮಾಡಿದರೆ ಅದರ ಪರಿಣಾಮ ಅಭಿವೃದ್ಧಿ ಯೋಜನೆಗಳ ಮೇಲೆ ಆಗುತ್ತದೆ ಎಂಬುದು ಅಲ್ಪಾವಧಿಯಲ್ಲೇ ಕರ್ನಾಟಕದಲ್ಲಿ ಸಾಬೀತಾಗಿದೆ’ ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಆಡಳಿತದ ಇನ್ನೊಂದು ರಾಜ್ಯವಾದ ರಾಜಸ್ಥಾನ ಕೂಡಾ ಭಾರೀ ಸಾಲದ ಸುಳಿಗೆ ಸಿಕ್ಕಿರುವುದನ್ನು ಮೋದಿ ಎತ್ತಿ ತೋರಿಸಿದ್ದಾರೆ. ಮಂಗಳವಾರ ಇಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಮಾತನಾಡಿದ ಪ್ರಧಾನಿ ಮೋದಿ ‘ಬೆಂಗಳೂರು ಇಡೀ ವಿಶ್ವದಲ್ಲಿ ಹೂಡಿಕೆದಾರರ ಕೇಂದ್ರ ಸ್ಥಾನ ಮತ್ತು ಮಾಹಿತಿ ತಂತ್ರಜ್ಞಾನ ವಲಯದ ಕೇಂದ್ರ ಸ್ಥಾನ. ಆದರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಕೆಲ ಯೋಜನೆಗಳ ಅಡ್ಡ ಪರಿಣಾಮಗಳು ಅಲ್ಪಾವಧಿಯಲ್ಲೇ ರಾಜ್ಯದಲ್ಲಿ ಕಾಣಿಸಿಕೊಂಡಿದೆ.
ಬಿಜೆಪಿ ಲೀಡರ್ಲೆಸ್ ಪಾರ್ಟಿ: ಜಗದೀಶ್ ಶೆಟ್ಟರ್
ಸ್ವತಃ ಕರ್ನಾಟಕ ಸರ್ಕಾರವೇ ಬೆಂಗಳೂರು ಅಭಿವೃದ್ಧಿಗೆ ಹಣವಿಲ್ಲ ಎಂದು ಒಪ್ಪಿಕೊಂಡಿದೆ. ಯಾವುದೇ ಒಂದು ಪಕ್ಷದ ತನ್ನ ಸ್ವಹಿತಾಸಕ್ತಿಗಾಗಿ ರಾಜ್ಯದ ಬೊಕ್ಕಸವನ್ನು ಬರಿದು ಮಾಡಿದರೆ ಅದರ ಪರಿಣಾಮವನ್ನು ರಾಜ್ಯದ ಜನತೆ ಭರಿಸಬೇಕಾಗುತ್ತದೆ’ ಎಂದರು. ಇದೇ ಪರಿಸ್ಥಿತಿ ರಾಜಸ್ಥಾನದಲ್ಲೂ ಇದೆ. ಅಲ್ಲೂ ಅಭಿವೃದ್ಧಿ ಚಟುವಟಿಕೆಗಳು ಪೂರ್ಣ ಸ್ಥಗಿತಗೊಂಡಿವೆ ಎಂದು ಮೋದಿ ಕಿಡಿಕಾರಿದರು.
ನಾಳೆ ಮೋದಿ ಭೇಟಿ ಮಾಡಲಿರುವ ಸಿಎಂ ಸಿದ್ದು: ಮುಖ್ಯಮಂತ್ರಿ ಆದ ಬಳಿಕ ಈ ಅವಧಿಯಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತಿದ್ದು, ಆ.3ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ದೆಹಲಿಯಲ್ಲಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ಭೇಟಿ ನಿಗದಿಯಾಗಿದೆ. ಬುಧವಾರ ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳೆಸಲಿರುವ ಸಿದ್ದರಾಮಯ್ಯ, ಬುಧವಾರ ಹಾಗೂ ಗುರುವಾರ ಎರಡು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಲವು ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದಾರೆ.
ಆ.3 ರಂದು ಪ್ರಧಾನಮಂತ್ರಿಗಳ ಭೇಟಿ ವೇಳೆ ಸಿದ್ದರಾಮಯ್ಯ ಅವರು ಕೇಂದ್ರ ಸಹಯೋಗದ ರಾಜ್ಯ ಯೋಜನೆಗಳು ಹಾಗೂ ಅನುದಾನ ಬಿಡುಗಡೆ ಸಂಬಂಧ ಬೇಡಿಕೆ ಇಡುವ ಸಾಧ್ಯತೆಯಿದೆ. ರಾಜ್ಯ ಸರ್ಕಾರ ಪ್ರಮುಖ ಯೋಜನೆ ಅನ್ನಭಾಗ್ಯಕ್ಕೆ ಅಕ್ಕಿ ಪೂರೈಕೆ ಸಂಬಂಧ ಮನವಿ ಮಾಡಲಿದ್ದಾರೆ. ಕೇಂದ್ರದ ಅನುದಾನ ಹೆಚ್ಚಿಸುವಂತೆ ಮನವಿ ಮಾಡುವುದರ ಜೊತೆಗೆ ನೀರಾವರಿ ಯೋಜನೆಗಳಿಗೆ ಅನುದಾನ, ಜಲಜೀವನ್ ಮಿಷನ್, ನರೇಗಾಗೆ ಹೆಚ್ಚಿನ ಹಣಕಾಸು ನೆರವು ನೀಡುವಂತೆ ಸಿದ್ದರಾಮಯ್ಯ ಕೋರಬಹುದು.
ಹೆಂಡತಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತಿ
ಇನ್ನು 15ನೇ ಹಣಕಾಸು ಆಯೋಗದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಪ್ರಸ್ತಾಪಿಸಬಹುದು. ಆದರೆ, ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಒತ್ತಾಯ ರೂಪದಲ್ಲಿ ಲಿಖಿತ ಮನವಿ ಸಲ್ಲಿಸಬಹುದು ಎಂದು ಹೇಳಲಾಗಿದೆ. ಹಣಕಾಸು ಸಚಿವರ ಭೇಟಿ ವೇಳೆ, 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ 5,495 ಕೋಟಿ ರು.ಗಳ ಮಧ್ಯಂತರ ಪರಿಹಾರದ ವಿಶೇಷ ಅನುದಾನ ನೀಡುವಂತೆ ಕೋರುವ ಸಾಧ್ಯತೆ ಇದೆ. ಜತೆಗೆ ಬರ ಮಾನದಂಡವನ್ನು ಪರಿಷ್ಕರಿಸಿ ರಾಜ್ಯಕ್ಕೆ ಬರ ಪರಿಹಾರ ನೀಡುವಂತೆಯೂ ಮನವಿ ಮಾಡುವ ಸಾಧ್ಯತೆ ಇದೆ. ಜಿಎಸ್ಟಿಯಲ್ಲೂ ರಾಜ್ಯದ ಪಾಲು ಸಮರ್ಪಕವಾಗಿ ಸಿಗುತ್ತಿಲ್ಲ ಎಂಬುದನ್ನು ಗಮನಕ್ಕೆ ತರಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.