
ಕುರುಕ್ಷೇತ್ರ(ಸೆ.15): ಹರ್ಯಾಣ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡು ಕರ್ನಾಟಕದಲ್ಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ.
'ತುಷ್ಟಿಕರಣದ ಭರದಲ್ಲಿ ಕರ್ನಾಟಕದಲ್ಲಿ ಗಣೇಶೋತ್ಸವ ಆಚರಣೆಗೂ ಅಡ್ಡಿಪಡಿಸಲಾಗುತ್ತಿದೆ' ಎಂದು ಇತ್ತೀಚಿನ ನಾಗಮಂಗಲ ಹಿಂಸೆ ಹಾಗೂ ಬೆಂಗಳೂರಿನ ಪ್ರತಿಭಟನೆ ಘಟನೆಗಳನ್ನು ಉದಾಹರಿಸಿದ್ದಾರೆ. ಇದೇ ವೇಳೆ, 'ಭ್ರಷ್ಟಾಚಾರ ಎಸಗುತ್ತಿರುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕರ್ನಾಟಕ ಹಾಗೂ ತೆಲಂಗಾಣ ಮತದಾರರು ಪಶ್ಚಾತ್ತಾಪ ಪಡುತ್ತಿದ್ದಾರೆ' ಎಂದ ಅವರು, 'ಹರ್ಯಾಣದಲ್ಲಿ ಬೆಂಬಲ ಬೆಲೆ ಕಾಯ್ದೆಗೆ ಆಗ್ರಹಿಸುವ ಕಾಂಗ್ರೆಸ್ ಕರ್ನಾಟಕದಲ್ಲಿ ಎಷ್ಟು ಬೆಳೆಗಳಿಗೆ ಬೆಂಬಲ ಬೆಲೆ ನೀಡಿದೆ?' ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ಸನ್ನು ಜನ ತಿರಸ್ಕರಿಸಬೇಕು ಎಂದು ಹರ್ಯಾಣದ ಜನರಿಗೆ ಕೋರಿರುವ ಅವರು, ರಾಜ್ಯದಲ್ಲಿ ಬಿಜೆಪಿ ಹ್ಯಾಟ್ರಿಕ್ ಜಯ ಸಾಧಿಸುವುದು ನಿಶ್ಚಿತ ಎಂದಿದ್ದಾರೆ.
ಇಫ್ತಾರ್ಗೆ ಹೋದರೆ ವಿರೋಧವಿಲ್ಲ, ಪ್ರಧಾನಿ ಗಣಪತಿ ಪೂಜೆಗೆ ಹೋದರೆ ತಕರಾರೇಕೆ?: ಪ್ರಹ್ಲಾದ ಜೋಶಿ
ಗಣೇಶೋತ್ಸವಕ್ಕೂ ಅಡ್ಡಿ:
ಕುರುಕ್ಷೇತ್ರದಲ್ಲಿ ಶನಿವಾರ ಸಂಜೆ ನಡೆದ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕರ್ನಾಟಕದಲ್ಲಿ ಗಣೇಶೋತ್ಸವದ ಮೆರವಣಿಗೆ ವೇಳೆ ನಡೆದ ಗಲಭೆಗಳ ಬಗ್ಗೆ ಉಲ್ಲೇಖಿಸಿದರು. 'ತುಷ್ಟಿಕರಣವೇ (ಒಂದು ಕೋಮಿನ ಓಲೈಕೆ ರಾಜಕಾರಣವೇ) ಕಾಂಗ್ರೆಸ್ನ ಆದ್ಯತೆ ಆಗಿದೆ. ಅಲ್ಲಿ ಗಣೇಶನನ್ನೂ ಪೊಲೀಸ್ ಗಾಡಿ ಒಳಗೆ ಕೂಡಿ ಹಾಕಿ ಕೊಂಡೊಯ್ಯಲಾಗುತ್ತಿದೆ ಎಂದರು.
ಈ ಮೂಲಕ ನಾಗಮಂಗಲದಲ್ಲಿ ಗಣೇಶೋತ್ಸವ ವೇಳೆ ನಡೆದ ಗಲಭೆ ಹಾಗೂ ಇದನ್ನು ಖಂಡಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ, ಪ್ರತಿಭಟನಾಕಾರರು ತಂದಿದ್ದ ಗಣೇಶನ ಮೂರ್ತಿಯನ್ನು ಪೊಲೀಸರು ತಮ್ಮ ವ್ಯಾನ್ ನಲ್ಲಿ ಹಾಕಿಕೊಂಡು ಹೋಗಿ ದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿದರು.
ಕರ್ನಾಟಕ ಜನತೆಗೆ ಪಶ್ಚಾತಾಪ:
ಕರ್ನಾಟಕ ಸೇರಿ ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಜನ ಅವರನ್ನು ಚುನಾಯಿಸಿ ದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದ ಮೋದಿ, 'ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಹಣದುಬ್ಬರ ಹಾಗೂ ಭ್ರಷ್ಟಾಚಾರ ಉತ್ತುಂಗದಲ್ಲಿದೆ' ಎಂದು ಕಿಡಿಕಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.