
ಚಿಕ್ಕಮಗಳೂರು (ಅ.02): ಸ್ವಚ್ಛ ಭಾರತ ಅಭಿಯಾನದ ಮೂಲಕ ದೇಶದ ಜನತೆಗೆ ಸ್ವಚ್ಛತೆ ಬಗ್ಗೆ ಮತ್ತೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಿವಿಧ ಇಲಾಖೆಗಳಿಂದ ಭಾನುವಾರ ಸ್ವಚ್ಛ ಚಿಕ್ಕಮಗಳೂರು – 2023, ಸ್ವಚ್ಛತಾ ಅಂದೋಲನಕ್ಕೆ ನಗರದ ಡಿಎಸಿಜಿ ಪಾಲಿಟೆಕ್ನಿಕ್ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸ್ವಚ್ಛತಾ ಅಭಿಯಾನಕ್ಕೆ ಮೂಲ ಪ್ರೇರಣೆ, ಅವರ ಪ್ರೇರಣೆಯಿಂದ ದೇಶ ಸ್ವಚ್ಛ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ.
ನಮ್ಮ ಮನೆ, ಪರಿಸರ, ಊರು ಚರಂಡಿ ಸ್ವಚ್ಛವಾಗಬೇಕು ಹಾಗಾಗಿ ಪ್ರಧಾನಿ ಯವರು ಸ್ವತಹ ಕಸಗುಡಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಪ್ರಧಾನಿಯವರು ಕೇವಲ ಕಸಗುಡಿಸಿ ಸುಮ್ಮನಾಗದೆ ಮನೆ ಮನೆಗಳಿಗೆ ಶೌಚಾಲಯ ನೀಡಿದ್ದಾರೆ. ಪ. ಜಾತಿ/ ವರ್ಗದವರಿಗೆ ಶೌಚಾಲಯ ನಿರ್ಮಾಣಕ್ಕೆ ತಲಾ15,000 ಉಳಿದ ಸಮುದಾಯಗಳಿಗೆ 12,000 ರು. ಹಣ ಕೊಟ್ಟು ದೇಶದ 12 ಕೋಟಿಗೂ ಹೆಚ್ಚು ಮನೆಗಳಲ್ಲಿ ಕೇಂದ್ರ ಸರ್ಕಾರ ಶೌಚಾಲಯ ನಿರ್ಮಿಸಿದೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಕಸ ವಿಲೆವಾರಿಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ಕೇಂದ್ರ ಸರ್ಕಾರ ಹಣ ನೀಡುತ್ತಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ: ಅಸಮಾಧಾನ ಹೋಗಲಾಡಿಸಲು ಶಾಸಕರು, ಎಂಎಲ್ಸಿಗಳ ಸಭೆ ನಡೆಸಿದ ದೇವೇಗೌಡರು!
ರಾಜ್ಯ ಸರ್ಕಾರಗಳು ಅವುಗಳನ್ನು ಕಾರ್ಯಗತಗೊಳಿಸುತ್ತಿವೆ ಎಂದು ಹೇಳಿದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೇಳಿರುವಂತೆ ಸ್ವಚ್ಛತೆ ನಮ್ಮ ಜೀವನದ ಪ್ರಮುಖ ಅಂಶವಾಗಬೇಕು. ಪ್ರಧಾನಿ ಮೋದಿ ಕರೆಕೊಟ್ಟ ಮೇಲೆ ನಮ್ಮ ಕೈಯಲ್ಲಿನ ಕಸ ಕೆಳಗೆ ಹಾಕಲು ಯೋಚಿಸುತ್ತೇವೆ,ಹಾಗಾಗಿ ರೈಲು, ಬಸ್ , ವಿಮಾನ ನಿಲ್ದಾಣ ಸೇರಿದಂತೆ ಎಲ್ಲವೂ ಇಂದು ಸ್ವಚ್ಛವಾಗಿವೆ ಎಂದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ವದೇಶಿ ಮತ್ತು ಖಾದಿ ಚಿಂತನೆಯೂ ನನಸಾಗಲಿದೆ.
ಪ್ರಧಾನಿ ಕರೆಯಂತೆ ಪ್ರತಿಯೊಬ್ಬರೂ ನಾಳೆ ಖಾದಿ ಭಂಡಾರದಲ್ಲಿ ಬಟ್ಟೆ ಖರೀದಿಸಬೇಕು, ಪ್ರತಿ ಭಾರತೀಯ ವರ್ಷಕ್ಕೆ ಒಂದು ಜೊತೆ ಖಾದಿ ಬಟ್ಟೆ ಖರೀದಿಸಿದರೆ 140 ಕೋಟಿ ಬಟ್ಟೆಯಾಗುತ್ತದೆ ಹಾಗಾದಾಗ ಖಾದಿ ತಯಾರಿಕಾ ಕೇಂದ್ರಗಳಲ್ಲಿ ಜನರಿಗೆ ಉದ್ಯೋಗ ದೊರೆಯುತ್ತದೆ. ನಾವು ಖಾದಿ ಖರೀದಿಸಿದರೆ ನಮ್ಮ ನೇಕಾರರು ಸ್ವಾವಲಂಬಿಗಳಾಗುತ್ತಾರೆ ಎಂದು ಅಭಿಪ್ರಾಯ ಪಟ್ಟರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಸ್ವಚ್ಛತೆಯ ಸೇವೆ ಕಾರ್ಯಕ್ರಮದಡಿ ಜಿಲ್ಲಾ ಪಂಚಾಯಿತಿ ಕಳೆದ 15 ದಿನಗಳಿಂದ ವಿವಿಧ ಕಾರ್ಯಕ್ರಮ ನಡೆಸಿದೆ.
ಕಾವೇರಿ ನೀರಿನ ಸಮಸ್ಯೆಗೆ ಮೇಕೆದಾಟು ಪರಿಹಾರ: ಸಂಸದ ಡಿ.ಕೆ.ಸುರೇಶ್
ಚಿಕ್ಕಮಗಳೂರು ಜಿಲ್ಲೆ ಸ್ವಚ್ಛತೆಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲು ನೀವೆಲ್ಲರೂ ಕಾರಣ. ಸ್ವಚ್ಛತಾ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಆ ಮೂಲಕ ದೇವರ ನಾಡು ಎಂಬ ಜಿಲ್ಲೆಯ ಹೆಗ್ಗಳಿಕೆ ಉಳಿಸಬೇಕು ಎಂದು ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್ ಡಿ ತಮ್ಮಯ್ಯ, ಮಹಾತ್ಮ ಗಾಂಧೀಜಿ ಸಂದೇಶದಂತೆ ಚಿಕ್ಕಮಗಳೂರಿನಲ್ಲಿ ಬಹಳ ಹಿಂದಿನಿಂದಲೇ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ ಗಾಡಿಯಲ್ಲಿ ಕಸ ಸಂಗ್ರಹ ಮಾಡುವ ಕಾರ್ಯ 2001 ರಿಂದಲೇ ನಗರದಲ್ಲಿ ಮಾಡಲಾಗುತ್ತಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.