
ವಿಧಾನಸಭೆ (ಮಾ.25): ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸುದೀರ್ಘ ಉತ್ತರ ನೀಡಲು ಆರಂಭಿಸಿದರು. ಈ ಬಾರಿ ಬಜೆಟ್ ಮೇಲಿನ ಚರ್ಚೆಯಲ್ಲಿ ಒಟ್ಟು 50 ಸದಸ್ಯರು ಭಾಗವಹಿಸಿದ್ದು ವಿಶೇಷ. ಒಟ್ಟಾರೆ 24 ಗಂಟೆ 45 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆದಿದೆ. 'ನಾನು 17 ಬಾರಿ ಬಜೆಟ್ ಮಂಡಿಸಿ ಉತ್ತರ ಕೊಟ್ಟಿದ್ದೇನೆ, ಆದರೆ ಇಷ್ಟು ದೊಡ್ಡ ಮಟ್ಟದ ಚರ್ಚೆ ನಡೆದಿರುವುದು ಇದೇ ಮೊದಲು' ಎಂದು ಸಿಎಂ ತಿಳಿಸಿ, ಚರ್ಚೆಗೆ ಅವಕಾಶ ಮಾಡಿಕೊಟ್ಟ ಸಭಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
ಚರ್ಚೆಯಲ್ಲಿ ಪಾಲ್ಗೊಂಡವರ ವಿವರ ನೀಡಿದ ಸಿಎಂ, ವಿರೋಧ ಪಕ್ಷದ 21 ನಾಯಕರು ಒಟ್ಟು 12 ಗಂಟೆ 49 ನಿಮಿಷ ಮಾತನಾಡಿದ್ದಾರೆ ಎಂದು ತಿಳಿಸಿದರು. ಆಡಳಿತ ಪಕ್ಷದ ಸದಸ್ಯರು 8 ಗಂಟೆ 43 ನಿಮಿಷ ಹಾಗೂ ಜೆಡಿಎಸ್ ಸದಸ್ಯರು 2 ಗಂಟೆ 55 ನಿಮಿಷಗಳ ಕಾಲ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಿಶೇಷವಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಒಬ್ಬರೇ 3 ಗಂಟೆ 6 ನಿಮಿಷಗಳ ಕಾಲ ಸುದೀರ್ಘವಾಗಿ ಮಾತನಾಡಿದ್ದಾರೆ ಎಂದು ಸಿಎಂ ಅಂಕಿ-ಅಂಶ ನೀಡಿದರು.
ವಿರೋಧ ಪಕ್ಷದ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, 'ವಿರೋಧ ಪಕ್ಷದ ನಾಯಕರು ಆಳವಾದ ಅಧ್ಯಯನ ಮಾಡಿಲ್ಲ. ಬದಲಾಗಿ ಮಾಧ್ಯಮಗಳು ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಆಕರ್ಷಕ ಹೆಡ್ಲೈನ್ ಬರಲಿ ಎಂಬ ಉದ್ದೇಶದಿಂದ ಪದಪುಂಜಗಳನ್ನು ಬಳಸಿದ್ದಾರೆ. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಬಂದಿದ್ದರು ಅನಿಸತ್ತೆ' ಎಂದು ವ್ಯಂಗ್ಯವಾಡಿದರು. ಟೀಕೆ ಮಾಡಿದ ಆಡಳಿತ, ವಿಪಕ್ಷ, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರಾದ ಸೋಮಶೇಖರ್ ಮತ್ತು ದರ್ಶನ್ ಪುಟ್ಟಣ್ಣಯ್ಯ ಅವರಿಗೂ ಸಿಎಂ ಅಭಿನಂದನೆ ತಿಳಿಸಿದರು.
'ಯಾರು ಎಷ್ಟೇ ಟೀಕೆ ಮಾಡಿದರೂ ಮಾವಿನ ಹಣ್ಣು ಬೇವಿನ ಹಣ್ಣಾಗಲು ಸಾಧ್ಯವಿಲ್ಲ. ರಾಜ್ಯದ ಜನ ಬಹಳ ಬುದ್ಧಿವಂತರಿದ್ದಾರೆ, ಅವರು ಮಾವಿನ ಹಣ್ಣನ್ನು ಮಾವಿನ ಹಣ್ಣು ಎಂದೇ ಕರೆಯುತ್ತಾರೆ' ಎನ್ನುವ ಮೂಲಕ ತಮ್ಮ ಬಜೆಟ್ ಜನಪರವಾಗಿದೆ ಎಂದು ಸಿಎಂ ಸಮರ್ಥಿಸಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಆರ್. ಅಶೋಕ್, 'ನಾನು ಮಾವಿನ ಹಣ್ಣು ಎಂದೇ ಹೇಳಿದ್ದೇನೆ, ಆದರೆ ಅದು ಯಾಕೋ ಹುಳಿ ಬಂದಿದೆ ಅಂದಿದ್ದೇನಷ್ಟೇ' ಎಂದು ಟಾಂಗ್ ನೀಡಿದರು.
ವಿಪಕ್ಷಗಳು ಬಜೆಟ್ ಅನ್ನು 'ಕ್ರೆಡಿಟ್ ಕಾರ್ಡ್ ಬಜೆಟ್' ಮತ್ತು 'ಖಾಲಿ ಚೊಂಬು' ಎಂದು ಟೀಕಿಸಿದ್ದಕ್ಕೆ ಸಿಎಂ ತೀಕ್ಷ್ಣವಾಗಿ ಉತ್ತರಿಸಿದರು. 'ನೀವು ಹೇಳಿದಂತೆ ಇದು ಖಾಲಿ ಚೊಂಬು ಅಲ್ಲ, ಬದಲಾಗಿ ಇದು ಭರ್ತಿ ಚೊಂಬು. ನಮ್ಮ ಬಜೆಟ್ ತುಂಬಿದ ಕೊಡವಿದ್ದಂತೆ, ಅದು ಎಂದಿಗೂ ಖಾಲಿಯಾಗಲು ಸಾಧ್ಯವಿಲ್ಲ' ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.