
ಬೀದರ್ (ಫೆ.17): ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗಿದೆ. ಅದರಲ್ಲಿಯೂ ಬೀದರ್ ಜಿಲ್ಲೆಗೆ ತೀವ್ರ ನಿರಾಸೆ ಮೂಡಿಸಿದೆ, ನಮ್ಮ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಅನುದಾನ ನೀಡದೆ, ರೈತರನ್ನ ಕಡೆಗಣಿಸಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ದೂರಿದ್ದಾರೆ. ಬಸವಕಲ್ಯಾಣದ ಅನುಭವ ಮಂಟಪಕ್ಕೆ ಕನಿಷ್ಠ 200 ಕೋಟಿ ಅನುದಾನ ನೀಡಬೇಕಿತ್ತು. ಸಿಪೇಟ್ ಕಾಲೇಜು ನಿರ್ಮಾಣಕ್ಕೆ ರಾಜ್ಯದ ಪಾಲು, ಬೀದರ್ ನಾಂದೇಡ್ ರೈಲ್ವೆ ಲೈನ್ಗೆ ರಾಜ್ಯದ ಪಾಲು ಮುಂತಾದ ಯೋಜನೆಗಳಿಗೆ ಅನುದಾನ ನೀಡದೆ, ಕೇವಲ ಜನರ ಮೂಗಿಗೆ ತುಪ್ಪ ಸವರುವ ಬಜೆಟ್ ನೀಡಿದ್ದಾರೆ.
ಜಿಲ್ಲೆಯ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆಡಳಿತ ವೈಫಲ್ಯ ಹಾಗೂ ಕಾರ್ಯವೈಖರಿಗೆ ಸಿಕ್ಕ ನಿರಾಶದಾಯಕ ಬಜೆಟ್ ಇದಾಗಿದೆ. ಉಸ್ತುವಾರಿ ಸಚಿವರಾಗಿ ನಮ್ಮ ಜಿಲ್ಲೆಯ ಅವಶ್ಯಕತೆಗಳು ಸರ್ಕಾರದ ಗಮನಕ್ಕೆ ತರುವುದು ಅವಶ್ಯಕವಾಗಿತ್ತು. ಆದರೆ ಅದರಲ್ಲಿ ಖಂಡ್ರೆ ವಿಫಲರಾಗಿದ್ದಾರೆ. ಕೇವಲ ಗ್ಯಾರಂಟಿ ಯೋಜನೆಗಳು ಪೂರೈಸಲು ಒಂದು ಕಡೆ ಹೆಣ್ಣು ಮಕ್ಕಳಿಗೆ ದುಡ್ಡು ಕೊಟ್ಟು, ಬೇರೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿ, ದುಡ್ಡು ಕಸಿದುಕೊಳ್ಳುವ ಕೆಲಸ ಮಾಡಿದ್ದಾರೆ. ಸರ್ಕಾರ ಬಂದು 8 ತಿಂಗಳಾದರು ಜಿಲ್ಲೆ ಹಾಗೂ ರಾಜ್ಯದಲ್ಲಿ ಎಲ್ಲಿಯೂ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಿಲ್ಲ.
ಸಿದ್ದರಾಮಯ್ಯರಿಂದ 1 ಟ್ರಿಲಿಯನ್ ಆರ್ಥಿಕ ರಾಜ್ಯ ಮಾಡುವ ಪ್ರಯತ್ನ: ಸಚಿವ ಈಶ್ವರ ಖಂಡ್ರೆ
ಇವರಿಗೆ ಇವರ ಸರ್ಕಾರ 5 ವರ್ಷ ನಡೆಯುತ್ತೆ ಅನ್ನೋದೆ ಖಾತ್ರಿಯಿಲ್ಲ ಎಂಬುದು ಬಜೆಟ್ ಅಂಶಗಳಿಂದ ಗೊತ್ತಾಗುತ್ತಿದೆ ಎಂದು ಸಚಿವ ಖೂಬಾ ತಿಳಿಸಿದ್ದಾರೆ. ಜಿಲ್ಲಾ ಸಂಕೀರ್ಣಕ್ಕೆ ಅನುದಾನವನ್ನು ಮತ್ತೆ ಘೋಷಣೆ ಮಾಡಿದ್ದಾರೆ. ಆದ್ದರಿಂದ ಇದು ಕೂಡ ನಂಬಿಕೆಗೆ ಅರ್ಹವಾದ ವಿಷಯವಲ್ಲ. ಒಟ್ಟಿನಲ್ಲಿ ಬಜೆಟ್ನಿಂದ ಯಾವ ವರ್ಗಕ್ಕೂ ಸಂತೋಷವಿಲ್ಲ. ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ದಾರಿ ತಪ್ಪಿಸುವ ಚುನಾವಣಾ ಘೋಷಣಾ ಪತ್ರ ಓದುತ್ತಿರುವಂತೆ ಕಾಣುತ್ತಿತ್ತು ಎಂದು ಸಚಿವ ಹಾಗೂ ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.
ಎರಡ್ಮೂರು ವರ್ಷಗಳಲ್ಲಿ ಸೈನಿಕ ಶಾಲೆ ಕಟ್ಟಡ ಪೂರ್ಣ: ಕೇಂದ್ರ ಸರ್ಕಾರದಿಂದ ಮಂಜೂರಾದ ಸೈನಿಕ ಶಾಲೆಯು ಕೇವಲ ಮಂಜೂರಾತಿ, ಶಿಲಾನ್ಯಾಸಕ್ಕೆ ಸೀಮಿತವಾಗದೇ ಎರಡ್ಮೂರು ವರ್ಷದಲ್ಲಿ ಭವ್ಯವಾದ ಕಟ್ಟಡ ನಿರ್ಮಾಣವಾಗುವ ಭರವಸೆ ಇದೆಯಲ್ಲದೇ, ಇಲ್ಲಿನ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿವಿಬಿ ಕಾಲೇಜು ಮೈದಾನದಲ್ಲಿ ಸ್ಥಾಪನೆಯಾಗಲಿರುವ ಸೈನಿಕ ಶಾಲೆಯು ಜಿಲ್ಲೆಯ ಗೌರವವನ್ನು ಎತ್ತಿ ಹಿಡಿಯುತ್ತದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು. ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಬಿವಿಬಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಸೈನಿಕ ಶಾಲೆ ಕಟ್ಟಡ ನಿರ್ಮಾಣ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ದೇಶದಲ್ಲಿ ಪ್ರಸಕ್ತ ಸಾಲಿನಲ್ಲಿ ಮಂಜೂರಾದ 23 ಸೈನಿಕ ಶಾಲೆಗಳ ಪೈಕಿ ಬೀದರ್ ಕೂಡ ಒಂದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ರಕ್ಷಣಾ ಸಚಿವರ ಸಹಕಾರದಿಂದ ಸಾಕಷ್ಟು ಪ್ರಯತ್ನದ ನಂತರ ಮಂಜೂರಾಗಿದೆ ಎಂದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲ: ಶೋಭಾ ಕರಂದ್ಲಾಜೆ
ಇನ್ನು ಜಿಲ್ಲೆಯ ಅನೇಕ ಯೋಜನೆಗಳು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತಿಬಿಂಬಿಸುವಂತಾಗಿವೆ. ಒಂದೇ ಜಿಲ್ಲೆಯಲ್ಲಿ 12 ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಆಗಿದ್ದು, ರಾಷ್ಟ್ರದಲ್ಲಿಯೇ ಮಾದರಿ. ನದಿಗೆ ಬಾಂದಾರ ಸೇತುವೆ ಕಟ್ಟಿರುವ ಉದಾಹರಣೆಯೇ ಇಲ್ಲ. ಆದರೆ ಕೌಠಾ (ಬಿ) ಗ್ರಾಮದ ಬಳಿ ಮಾಂಜ್ರಾ ನದಿಗೆ ಬಾಂದಾರ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ರಾಸಾಯನಿಕ ಹಾಗೂ ಪ್ಲಾಸ್ಟಿಕ್ ಕೈಗಾರಿಕೋದ್ಯಮದಲ್ಲಿ ಮಾನವ ಸಂಪನ್ಮೂಲದ ಬೇಡಿಕೆ ಪೂರೈಸುವ ಸಿಪೆಟ್ ಕಾಲೇಜು ಬೀದರ್ನಲ್ಲಿ ಆರಂಭಿಸಿದ್ದು, ಇಲ್ಲಿನವರಿಗೆ ಸಾಕಷ್ಟು ಉದ್ಯೋಗ ಒದಗಿಸಿ ನಿರುದ್ಯೋಗ ಸಮಸ್ಯೆ ದೂರ ಮಾಡಲಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.