
ಯಲ್ಲಾಪುರ (ಮೇ.19): ಕ್ಷೇತ್ರದ ಅಭಿವೃದ್ಧಿ ಆರಂಭಿಸಿದ್ದೇನೆ. ಈ ಸಲದ ಚುನಾವಣೆ ಪ್ರಜಾಪ್ರಭುತ್ವದ ರೀತಿಯಲ್ಲಿ ಯಾವುದೇ ತೊಂದರೆಯಿಲ್ಲದೆ ನಡೆದಿರುವುದು ಎಲ್ಲ ಪಕ್ಷಗಳಿಗೆ ಗೌರವ ತಂದಿದೆ. ಸರ್ಕಾರದ ಆಡಳಿತ ವಿರೋಧಿ ಅಲೆ ಸಹಜ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಚುನಾವಣೆಯಲ್ಲಿ ನಮ್ಮ ಗೆಲುವಿಗೆ ಶ್ರಮಿಸುವ ದೇವ, ದೈವ, ದೂರ್ಲಭ ಕಾರ್ಯರ್ತರಿಗೆ ಮತ್ತು ಮತದಾರರಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಈ ಸಲ ಶೇ.80.23ರಷ್ಟು ಮತದಾನವಾಗಿದೆ. ಹಿಂದಿನ ಚುನಾವಣೆಗೆ ಹೋಲಿಸಿದರೆ ಉತ್ತಮ ಬೆಳವಣಿಗೆಯಾಗಿದೆ.
ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ, ಕಾಂಗ್ರೆಸ್ ಗಾಳಿ, ಅದರಲ್ಲೂ ಗ್ಯಾರಂಟಿ ಕಾರ್ಡ್ ಸೇರಿದಂತೆ ಹಲವು ವಿಚಾರಗಳು ಮತದಾರರನ್ನು ಕಾಂಗ್ರೆಸ್ ಸೆಳೆಯುವಲ್ಲಿ ಸಫಲತೆ ಕಂಡಿದೆ. ಅದರಿಂದ ಕಾಂಗ್ರೆಸ್ ಸರ್ಕಾರ ಬಂದಿದೆ ಎಂದರು. ನಾನು ವ್ಯಕ್ತಿಗತವಾಗಿ ಯಾರ ತೇಜೋವಧೆಯಾಗಲಿ, ನಿಂದನೆಯಾಗಲಿ ಮಾಡಲಾರೆ. ನಾನು ಏನು ಮಾಡಿದ್ದೇನೆ, ಏನು ಮಾಡುತ್ತೇನೆ ಎಂಬ ದಾರಿಯಲ್ಲಿ ಸಾಗಿ ಆದರ್ಶ ಕ್ಷೇತ್ರ ಮಾಡುವ ಏಕಮೇವ ಗುರಿಯಾಗಿದೆ. ಈ ಸಲ ವಿಪಕ್ಷದಲ್ಲಿರುವ ಹೊಸ ಅನುಭವ. ಯಾವುದೇ ಸರ್ಕಾರವಿದ್ದರೂ ಅಭಿವೃದ್ಧಿಗೆ ತೊಡಕಾಗದು. ನಾನು ಮೋದಿ ಪಕ್ಷದಲ್ಲಿದ್ದೇನೆ ಅಂತ ಭಯ ಬೇಡ. ಸರ್ಕಾರದ ಜೊತೆ ಬಾಂಧವ್ಯ ಉತ್ತಮ ಸಂಬಂಧ ಬೆಳೆಸಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದರು.
ಗ್ಯಾಸ್ ದರ ಹೆಚ್ಚಳದಿಂದ ಹಲವು ನಾಯಕರ ಸೋಲು: ಶಾಸಕ ಶಿವರಾಮ ಹೆಬ್ಬಾರ್
ನಿಮಗೆ ಕಾಂಗ್ರೆಸ್ಸಿನವರು ಅನುದಾನ ಕೊಡುತ್ತಾರೆಯೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ನಾನು ಸಚಿವನಾಗಿದ್ದಾಗ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿನವರು ಅಭಿವೃದ್ಧಿಯ ಬೇಡಿಕೆಯ ಕುರಿತು ನನ್ನ ಜೊತೆ ಕೇಳಿದ್ದಿದೆ. ನಾವು ಸಹಕಾರ ಕೊಟ್ಟಿದ್ದೇವೆ. ಹಾಗೆಯೇ ಈಗಲೂ ಅಭಿವೃದ್ಧಿಗೆ ಹಣ ಕೇಳುವುದಕ್ಕೆ ಯಾವ ಆತಂಕವಿಲ್ಲ. ವಿಪಕ್ಷದಲ್ಲಿದ್ದು ದಕ್ಷತೆಯಿಂದ ಕೆಲಸ ಮಾಡುತ್ತೇವೆ. ಎಚ್ಚರಿಕೆಯಿಂದ ಹೆಜ್ಜೆಯಿಡುತ್ತೇವೆ ಎಂದರು. ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡ್ ಕುರಿತು ಕೇಳಿದ ಪ್ರಶ್ನೆಗೆ, ಸರ್ಕಾರ ಅದನ್ನು ಜಾರಿಗೆ ತರಲೇಬೇಕಾಗುತ್ತದೆ. ಮುಂದೆ ಲೋಕಸಭೆ, ತಾಪಂ, ಜಿಪಂ ಚುನಾವಣೆ ಬರುತ್ತಿದೆ ಎಂದರು.
ಇನ್ನೊಂದು ಪ್ರಶ್ನೆಗೆ ಉತ್ತರಿಸಿ ಯಾವುದೇ ರಾಜಕೀಯ ಪಕ್ಷಕ್ಕೆ ಶಿಸ್ತು ಇರಬೇಕು. ಪಕ್ಷದೊಳಗೇ ಇದ್ದುಕೊಂಡು ಪಕ್ಷ ವಿರೋಧಿ ಕ್ರಮ ಸರಿಯಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಹೆಸರನ್ನು ಎಲ್ಲಿ ಕೊಡಬೇಕೋ ಅಲ್ಲಿಗೆ ಕಳುಹಿಸಿದ್ದೇನೆ. ಆದರೆ ಅದು ಪಕ್ಷದ ಆಂತರಿಕ ವಿಚಾರವಾಗಿತ್ತು. ಅದು ಮಾಧ್ಯಮ ಸೇರಿದಂತೆ ಜಾಲತಾಣದ ಮೂಲಕ ಹರಿದಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಆದರೂ ಪಕ್ಷದ ಕಾರ್ಯಕರ್ತರ ರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂದರು. ನಾನು ಬಹಳ ವರ್ಷದಿಂದ ಪಕ್ಷದಲ್ಲಿದ್ದೇನೆಂದು ಪಕ್ಷ ವಿರೋಧಿ ಚಟುವಟಿಕೆ ಸರಿಯಲ್ಲ.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ಗೆ ಅದಿಲ್ವಾ?: ಅಸ್ನೋಟಿಕರ್ ಅಸಂಬದ್ಧ ಪ್ರಶ್ನೆ
ಇನ್ನೊಂದು ಪ್ರಶ್ನೆಗೆ ಉತ್ತರಿಸಿ, ಪಕ್ಷದ ಸೋಲಿನ ಕುರಿತು ಪಕ್ಷದ ವೇದಿಕೆಯಲ್ಲಿ ನಮ್ಮ ಹಿರಿಯರು ಪರಾಮರ್ಶೆ ಮಾಡುತ್ತಿದ್ದಾರೆ. ಸೋಲಿಗೆ ಒಂದೇ ಕಾರಣವಲ್ಲ. ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟುಬಲಗೊಳಿಸುವಲ್ಲಿ ಪ್ರಯತ್ನ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಭಾಗ್ವತ, ತಾಲೂಕಾ ಉಪಾಧ್ಯಕ್ಷ ಶಿರೀಷ ಪ್ರಭು, ಖಜಾಂಚಿ ಮುರಳಿ ಹೆಗಡೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಮು ನಾಯ್ಕ, ಪಪಂ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.