ಬೆಂಗಳೂರು (ಆ.14): ಇತಿಹಾಸದ ಬಗ್ಗೆ ಕನಿಷ್ಠ ಜ್ಞಾನವೂ ಬಿಜೆಪಿ ನಾಯಕರಿಗೆ ಇಲ್ಲ. ಇದ್ದಿದ್ದರೆ ದೇಶಕ್ಕಾಗಿ ಪ್ರಾಣ ತೆತ್ತವರ ಬಗ್ಗೆ ಹಗುರವಾಗಿ ಮಾತನಾಡುತ್ತಿರಲಿಲ್ಲ. ಈ ಬಿಜೆಪಿಯವರು ಇತಿಹಾಸ ತಿರುಚುವುದರಲ್ಲಿ, ಸುಳ್ಳು ಹೇಳಿ ಸಮಾಜದ ದಾರಿ ತಪ್ಪಿಸುವುದರಲ್ಲಿ ಪ್ರವೀಣರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಇಂದಿರಾ ಗಾಂಧಿ ಕುರಿತ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿಕೆಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ರವಿಗೆ ಇತಿಹಾಸದ ಜ್ಞಾನ ಇಲ್ಲ. ಸಚಿವ ಕೆ.ಎಸ್.ಈಶ್ವರಪ್ಪ ಬಾಯಿ ತೆಗೆದರೆ ಹೊಲಸು ಮಾತನಾಡುತ್ತಾರೆ. ಇದೇನಾ ಬಿಜೆಪಿಯವರ ಸಂಸ್ಕಾರ, ಸಂಸ್ಕೃತಿ? ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ, ಬಲಿದಾನಗೈದ ಇತಿಹಾಸ ಇರುವುದು ಕೇವಲ ಕಾಂಗ್ರೆಸ್ಗೆ ಮಾತ್ರ. ಈ ಆರ್ಎಸ್ಎಸ್ ಹಾಗೂ ಬಿಜೆಪಿಯ ಹಿಂದಿನ ತಲೆಮಾರಿನವರು ಮೊಘಲರು ಹಾಗೂ ಬ್ರಿಟಿಷರ ಆಸ್ಥಾನದಲ್ಲಿ ಪ್ರಮುಖ ಹುದ್ದೆಯಲ್ಲಿದ್ದವರು ಎಂದು ವ್ಯಂಗ್ಯವಾಡಿದರು.
ಈ ಆರ್ಎಸ್ಎಸ್ನವರು ಟಿಪ್ಪು ಸುಲ್ತಾನನನ್ನು ದ್ವೇಷಿಸುತ್ತಾರೆ. ಆದರೆ, ಟಿಪ್ಪುವಿನ ಆಸ್ಥಾನದಲ್ಲಿ ದಿವಾನರಾಗಿದ್ದವರು ಪೂರ್ಣಯ್ಯ, ಹಣಕಾಸು ಸಚಿವ ಕೃಷ್ಣಸ್ವಾಮಿಯವರು. ಇವರನ್ನು ಏಕೆ ಏಕೆ ವಿರೋಧ ಮಾಡುವುದಿಲ್ಲ ಎಂದು ಪ್ರಶ್ನಿಸಿದರು.
ರಾಜಕೀಯ ವೈಷಮ್ಯ ಮರೆತು ಸಿದ್ದರಾಮಯ್ಯ -ಎಂಟಿಬಿ ನಾಗರಾಜ್ ಭೇಟಿ
ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಪದಗ್ರಹಣ
ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾಗಿರುವ ರಕ್ಷಾ ರಾಮಯ್ಯ ಅವರು ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದ ಪಕ್ಷದ ಧ್ವಜ ಸ್ವೀಕರಿಸುವ ಮೂಲಕ ಪದಗ್ರಹಣ ಮಾಡಿದರು. ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಎಐಸಿಸಿ ವೀಕ್ಷಕ ಮಧು ಯಾಕ್ಷಿಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಧ್ರುವನಾರಾಯಣ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪಕ್ಷದ ಧ್ವಜ ಸ್ವೀಕರಿಸುವ ಮೂಲಕ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಅಧಿಕಾರ ಸ್ವೀಕರಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ಪಕೋಡಾ ಮಾರುವುದು ಹೇಗೆ: ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಮಾಡುವ ಭರವಸೆ ನೀಡಿದ್ದರು. 7 ವರ್ಷದಲ್ಲಿ 14 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ 12 ಕೋಟಿ ಉದ್ಯೋಗ ನಷ್ಟವಾಗಿದೆ. ಕೆಲಸ ಕೇಳಿದವರಿಗೆ ಪಕೋಡಾ ಮಾರಿ ಎಂದರು. ಈಗ ಅಡುಗೆ ಎಣ್ಣೆ ಬೆಲೆ ಲೀಟರ್ಗೆ ಇನ್ನೂರು ರುಪಾಯಿ ಆಗಿದೆ. ಉದ್ಯೋಗವಿಲ್ಲದವರು ಪಕೋಡಾ ಮಾರುವುದಾದರೂ ಹೇಗೆ ಎಂದು ವ್ಯಂಗ್ಯವಾಡಿದರು.
ಮೋದಿ ಹೇಳುತ್ತಿದ್ದ ಅಚ್ಛೇ ದಿನ್ ಕತೆ ಏನಾಯಿತು? ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಮೋದಿ ಮೋದಿ ಎಂದು ಕುಣಿಯುತ್ತಿದ್ದ ಯುವಜನತೆ ಇಂದು ಮೋದಿಯವರ ಆಡಳಿತದಿಂದ ಭ್ರಮನಿರಸನರಾಗಿದ್ದಾರೆ. ಹಿಂದೆ ನಾವು ಹೋದ ಕಡೆ ಕೆಲವರು ಮೋದಿ ಮೋದಿ ಎಂದು ಕೂಗುತ್ತಿದ್ದರು, ಈಗ ಅವರೆಲ್ಲಾ ಎಲ್ಲಿ ಹೋದರು, ಏನಾಯ್ತು ಅವರ ಕತೆ ಎಂದು ಪ್ರಶ್ನಿಸಿದರು.
ಒಂದೇ ಸಲ ವಿಧಾನಸೌಧ ನೋಡಬೇಡಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಮಹಿಳೆಯರು ಮತ್ತು ಯುವಕರಿಂದ ಮಾತ್ರ ದೇಶದಲ್ಲಿ ಬದಲಾವಣೆ ತರಲು ಸಾಧ್ಯ. ಇವರಿಗಾಗಿ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಯುವಕರು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು. ನಿನ್ನೆ ಕಳೆದು ಹೋಗಿದೆ, ನಾಳೆ ಎಂಬುದು ಭವಿಷ್ಯ. ಆದ್ದರಿಂದ ಇಂದಿನ ದಿನವನ್ನು ಕಾಂಗ್ರೆಸ್ಗೆ ಮೀಸಲಿಡಬೇಕು. ಒಮ್ಮೆಲೇ ವಿಧಾನಸೌಧ ನೋಡಬೇಡಿ. ಕೆಳ ಹಂತದಿಂದ ಒಂದೊಂದೇ ಹೆಜ್ಜೆ ಇಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ನಾವೆಲ್ಲಾ ಚೇರ್ಗಾಗಿ ಬಡಿದಾಡುತ್ತಿದ್ದೇವೆ!
ನಾವೆಲ್ಲಾ ಚೇರ್ಗಾಗಿ ಬಡಿದಾಡುತ್ತಿದ್ದೇವೆ. ಆದರೆ ನೀವು ಕುರ್ಚಿ ಬಿಟ್ಟು ನಿಂತಿದ್ದೀರಲ್ಲಾ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಅವರಿಗೆ ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಭೆಯಲ್ಲಿ ನಗೆಯ ಅಲೆಗಳೇಳುವಂತೆ ಮಾಡಿದರು.
ಕಾರ್ಯಕ್ರಮದ ವೇಳೆ ರಕ್ಷಾ ರಾಮಯ್ಯ ವೇದಿಕೆಯ ಪಕ್ಕದಲ್ಲಿ ನಿಂತಿದ್ದನ್ನು ಗಮನಿಸಿದ ಶಿವಕುಮಾರ್, ನಿಮಗೆ ಇನ್ನೂ ಕುರ್ಚಿ ಬೆಲೆ ಗೊತ್ತಿಲ್ಲ. ಹೋಗಿ ಚೇರ್ನಲ್ಲಿ ಕುಳಿತುಕೊಳ್ಳಿ. ನೀವು ನಿಂತೇ ಇದ್ದೀರಲ್ಲಾ ಎಂದು ಹಾಸ್ಯವಾಗಿ ಹೇಳಿದರು.