ಯಾವುದೇ ಅನುಮಾನ ಬೇಡ, ಗ್ಯಾರಂಟಿ ಅನುಷ್ಠಾನ ಖಚಿತ: ಡಾ.ಜಿ.ಪರಮೇಶ್ವರ್‌

By Kannadaprabha NewsFirst Published May 31, 2023, 8:24 PM IST
Highlights

ಕಾಂಗ್ರೆಸ್‌ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಕೊರಟಗೆರೆ (ಮೇ.31): ಕಾಂಗ್ರೆಸ್‌ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು. ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಶ್ರೀಗಳ ಆಶೀರ್ವಾದವನ್ನು ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವಿರೋಧ ಪಕ್ಷದವರು ಸಾಮಾನ್ಯ ಜನರನ್ನು ದಾರಿ ತಪ್ಪಿಸುವಂತಹ ಕೆಲಸವನ್ನು ಮಾಡುತ್ತಿದ್ದು, ಇದನ್ನು ನಿಲ್ಲಿಸಬೇಕು. 

ಕಾಂಗ್ರೆಸ್‌ ಕೊಟ್ಟಿರುವ ಭರವಸೆಯನ್ನು ಜೂನ್‌ 1ರಿಂದ ಅನುಷ್ಠಾನ ಮಾಡಲಿದೆ. ಹೈಕಮಾಂಡ್‌ ಸೂಚನೆಯಂತೆ ಎಲ್ಲಾ ಖಾತೆ ಹಂಚಿಕೆಗಳು ಸಚಿವರಿಗೆ ಆಗಿದ್ದು ಸಣ್ಣ ಪುಟ್ಟಗೊಂದಲಗಳಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಶಮನ ಮಾಡಿದ್ದು, ಈಗ ಸರ್ಕಾರದ ಮುಖ್ಯ ಉದ್ದೇಶ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವುದು ಎಂದು ತಿಳಿಸಿದರು. ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠ ಸೇರಿದಂತೆ ತಾಲೂಕಿನ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನಗಳನ್ನು ತರುವ ಮೂಲಕ ತಾಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವುದಾಗಿ ಭರವಸೆ ನೀಡಿದರು.

ಸುಖಾಸುಮ್ಮನೆ ಸಂಘಟನೆಗಳ ಬ್ಯಾನ್‌ ಇಲ್ಲ: ಸಚಿವ ಡಾ.ಜಿ.ಪರಮೇಶ್ವರ್‌

ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಕ್ಷೇತ್ರದ ಜನರ ಆಶಯದಂತೆ ಪರಮೇಶ್ವರ್‌ ಈಗ ಮಂತ್ರಿಯಾಗಿದ್ದಾರೆ. ಮುಂಬರುವ ದಿನದಲ್ಲಿ ಇನ್ನೂ ದೊಡ್ಡ ಸ್ಥಾನವನ್ನು ಅಲಂಕರಿಸುವುದರ ಮೂಲಕ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಮತ್ತು ರಾಜ್ಯದ ಸಾಮಾನ್ಯ ಜನರ ಕುಂದು ಕೊರತೆಗಳನ್ನು ನಿವಾರಿಸುವಂತಹ ಶಕ್ತಿ ಸಾಮರ್ಥ್ಯವನ್ನು ಭಗವಂತ ಕರುಣಿಸಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಗೌಡ, ಕೆಪಿಸಿಸಿ ಸದಸ್ಯರಾದ ಟಿಡಿ ಪ್ರಸನ್ನ ಕುಮಾರ್‌, ಎಡಿ ಬಲರಾಮಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಅರಕೆರೆ ಶಂಕರ್‌, ಕೊಡ್ಲಳ್ಳಿ ಅಶ್ವಥನಾರಾಯಣ ಸೇರಿದಂತೆ ಇತರರು ಇದ್ದರು.

ಡಿಸಿಎಂ ಹುದ್ದೆ ಸಿಗದ್ದಕ್ಕೆ ಬೇಸರವಿಲ್ಲ: ಸಚಿವ ಡಾ.ಜಿ.ಪರಮೇಶ್ವರ್‌

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ಗೆ ಅಭಿನಂದನೆ: ಕರ್ನಾಟಕ ರಾಜ್ಯದ ಗೃಹ ಮಂತ್ರಿಗಳಾದ ಡಾ.ಜಿ.ಪರಮೇಶ್ವರ್‌ ಅವರನ್ನು ಭಾರತ ಜನಜಾಗೃತಿ ಸೇನೆ ರಾಜ್ಯಾಧ್ಯಕ್ಷ ನಾಗನಾಯಕನಹಳ್ಳಿ ಸಿ.ಮುನಿಯಪ್ಪ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಮಹಿಳಾ ಪ್ರದಾನ ಕಾರ್ಯದರ್ಶಿ ಅಕ್ಕಯ್ಯಮ್ಮ ಅಭಿನಂದಿಸಿದರು. ಭಾರತ ಜನಜಾಗೃತಿ ಸೇನೆ ರಾಜ್ಯಾಧ್ಯಕ್ಷ ಮುನಿಯಪ್ಪ ಮಾತನಾಡಿ, ಪರಮೇಶ್ವರ್‌ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾದರೂ, ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕಿತ್ತು. ಬದಲಾಗಿ ಈಗ ಪ್ರಮುಖ ಹಾಗೂ ಪ್ರಬಲ ಖಾತೆಯಾದ ಗೃಹ ಖಾತೆ ಸಿಕ್ಕಿದೆ. ರಾಜಕೀಯ ಜೀವನದಲ್ಲಿ ಸಾಕಷ್ಟುಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿರುವ ಪರಮೇಶ್ವರ್‌ ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪರಿಣಾಮಕಾರಿ ಕೆಲಸ ಮಾಡಲಿದ್ದಾರೆ. ರಾಜ್ಯದಲ್ಲಿ ಇನ್ನು ಮುಂದಾದರೂ ಶಾಂತಿ ಸುವ್ಯವಸ್ಥೆ ನೆಲೆಸಲಿದೆ ಎಂದು ಹೇಳಿದರು.

click me!