ನರೇಂದ್ರ ಮೋದಿಯೇ ಆಫರ್ ಮಾಡಿದ್ದರು: ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ

By Suvarna NewsFirst Published Sep 30, 2020, 6:34 PM IST
Highlights

ಬಿಜೆಪಿಯವರು ನನ್ನನ್ನು ಸಿಎಂ ಮಾಡಲು ಮುಂದಾಗಿದ್ದರು ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ತುಮಕೂರು, (ಸೆ.30): ಬಿಜೆಪಿಯವರು ನನ್ನನ್ನು ಸಿಎಂ ಮಾಡಲು ಮುಂದಾಗಿದ್ದರು  ನರೇಂದ್ರ ಮೋದಿ ಅವರೇ ಆಫರ್ ಮಾಡಿದ್ದರು ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಹೇಳಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲ ಮೂಡಿಸಿದ್ದಾರೆ.

ಇಂದು (ಬುಧವಾರ) ತುಮಕೂರು ಜಿಲ್ಲೆಯ ಶಿರಾದಲ್ಲಿ ನಡೆದ ಜೆಡಿಎಸ್​ ಸಭೆಯಲ್ಲಿ ಮಾತನಾಡಿದ ಎಚ್​ಡಿಕೆ, ಕೇಂದ್ರದಿಂದ ನರೇಂದ್ರ ಮೋದಿ ಅವರೇ ಆಫರ್ ಮಾಡಿದ್ದರು. ಐದು ವರ್ಷ ನಿನ್ನನ್ನು ಯಾರೂ ಟಚ್ ಮಾಡಲ್ಲ ಅಂದಿದ್ದರು. ಕಾಂಗ್ರೆಸ್​ನವರ ಸಂಕುಚಿತ ಮನೋಭಾವದಿಂದ ರಾಜ್ಯದಲ್ಲಿ ದರಿದ್ರ ಸರ್ಕಾರ ಬಂದಿದೆ ಎಂದು ಹೇಳಿದರು.

 ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ರಾಹುಲ್ ಗಾಂಧಿಯಿಂದಲೇ ಹಾಸನದಲ್ಲಿ ಭಾಷಣ ಮಾಡಿಸಿದರು ಎಂದು ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದು.

ಶಿರಾ ಬೈ ಎಲೆಕ್ಷನ್: ಕುಮಾರಸ್ವಾಮಿ ಭಾವನಾತ್ಮಕ ಮಾತು...!

ಕಳೆದ ವಿಧಾನಸಭೆ ಫಲಿತಾಂಶ ನೋಡಿ ರಾಜಕೀಯದಿಂದ ನಿರ್ಗಮಿಸಬೇಕು ಅಂದುಕೊಂಡೆ. ಆದ್ರೆ ಕಾಂಗ್ರೆಸ್​ನವರು ತರಾತುರಿಯಲ್ಲಿ ದೇವೇಗೌಡರಿಗೆ ಫೋನ್ ಮಾಡಿ ಕರೆದ್ರು. ದೇವೇಗೌಡರು ಕುಮಾರಸ್ವಾಮಿ ಆರೋಗ್ಯ ಸರಿ ಇಲ್ಲ. ನಿಮ್ಮಲ್ಲಿ ಯಾರಿಗಾದರೂ ಮುಖ್ಯಮಂತ್ರಿ ಮಾಡಿ ಅಂದಿದ್ರು. ಎಷ್ಟೇ ಹೇಳಿದ್ರೂ ಕೇಳದೇ ನನಗೆ ಕಾಂಗ್ರೆಸ್​ನವರು ಮುಖ್ಯಮಂತ್ರಿ ಪಟ್ಟ ಕಟ್ಟಿದ್ರು. ನನಗೆ ಮುಖ್ಯಮಂತ್ರಿ ಆಗುವ ಆಸೆ ಇರಲಿಲ್ಲ ಎಂದು ಅಂದಿನ ಘಟನೆಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟರು.

ಕೆಲ ಕಾರಣಗಳಿಂದ ಕಾರ್ಯಕರ್ತರ ಸಭೆ ಮಾಡಲು ಆಗಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಬಹಳ ವೇಗದಲ್ಲಿ ಹೊರಟಿದೆ. ಸಭೆ ಸಮಾರಂಭ ಮಾಡಿದೆ. ಆದರೂ ಇದರಿಂದ ಕಾರ್ಯಕರ್ತರು ಎದೆಗುಂದಬೇಕಿಲ್ಲ. ಈ ಕ್ಷೇತ್ರದಲ್ಲಿ ಕಾಡು ಗೊಲ್ಲರು ನನಗೆ ಸತ್ಕಾರ ನೀಡಿದ್ದಾರೆ. ನಾನು ಗ್ರಾಮ ವಾಸ್ತವ್ಯ ಮಾಡಿದ್ದು ಕಾಡು ಗೊಲ್ಲರ ಮನೆಯಲ್ಲಿ, ಶಿರಾ ಕ್ಷೇತ್ರದಲ್ಲಿ ಗೊಲ್ಲ ಸಮುದಾಯದ ಮತ ನಿರ್ಣಾಯಕ ಎಂದು ತಿಳಿಸಿದರು.

click me!