
ಬೆಂಗಳೂರು(ಏ.15): ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರ ಬಂದರೆ ಎರಡು ತಿಂಗಳಲ್ಲಿಯೇ ಕಾರ್ಯಕರ್ತರಿಗೆ ಸ್ಥಾನಮಾನ ನೀಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಶುಕ್ರವಾರ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಮಾಜಿ ಶಾಸಕರಾದ ರಘು ಆಚಾರ್, ಎಂ.ಪಿ.ಕುಮಾರಸ್ವಾಮಿ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಗುರುಪಾಟೀಲ ಶಿರವಾಳ ಸೇರಿದಂತೆ ಹಲವು ಮಂದಿಯನ್ನು ಪಕ್ಷದ ಬಾವುಟ ನೀಡಿ ಸ್ವಾಗತಿಸಿದ ಬಳಿಕ ಮಾತನಾಡಿದರು.
ಪಕ್ಷವು ಸದೃಢವಾಗಿ ಸಂಘಟನೆಯಾಗಿದೆ. ಪಕ್ಷದ ಕಾರ್ಯಕರ್ತರ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಕಾಂಗ್ರೆಸ್-ಬಿಜೆಪಿಯಿಂದ ಹಲವು ಮಂದಿ ಪಕ್ಷಕ್ಕೆ ಆಗಮಿಸುತ್ತಿದ್ದಾರೆ. ಚುನಾವಣೆಯಲ್ಲಿ ಬಹುಮತ ಪಡೆದು ಜೆಡಿಎಸ್ ಅಧಿಕಾರಕ್ಕೆ ಬಂದರೆ ಎರಡು ತಿಂಗಳಲ್ಲಿ ಕಾರ್ಯಕರ್ತರಿಗೆ ಸ್ಥಾನಮಾನ ಸಿಗಲಿದೆ. ಈ ಬಾರಿ ಯಾವುದೇ ಕಾರಣಕ್ಕೂ ಕಾಯಿಸುವುದಿಲ್ಲ ಎಂದು ಅಶ್ವಾಸನೆ ನೀಡಿದರು.
Breaking : ಜೆಡಿಎಸ್ 2ನೇ ಪಟ್ಟಿ ಬಿಡುಗಡೆ: ಭವಾನಿಗಿಲ್ಲ ಹಾಸನ, ಸ್ವರೂಪ್ಗೆ ಸಿಂಹಾಸನ!
ಕಲಬುರಗಿ, ಕಾರವಾಡ, ಚಿತ್ರದುರ್ಗ, ಮಂಗಳೂರು ಭಾಗದಿಂದ ಅನೇಕ ಜನ ಸೇರ್ಪಡೆಯಾಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ಗೆ ಶಕ್ತಿ ಇಲ್ಲ ಎನ್ನುತ್ತಿದ್ದರು. ಈ ಬಾರಿ ಉತ್ತರ ಕರ್ನಾಟಕದಲ್ಲಿ 40 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಪಡೆಯುತ್ತೇವೆ. ಪಂಚರತ್ನ ಮೂಲಕ 104 ಕ್ಷೇತ್ರದಲ್ಲಿ ಸಂಚರಿಸಿದ್ದೇನೆ. ಜನರ ಬಳಿಕ ಹೋಗಿ ಅವರ ನಾಡಿಮಿಡಿತ ಅರಿತಿದ್ದೇನೆ. ಜನತೆಯ ಒಲವು ಪಕ್ಷದ ಪರವಾಗಿದೆ. ನಾನು ಪಕ್ಷಕ್ಕೆ 123 ಸ್ಥಾನ ಬರಲಿದೆ ಎಂದು ಹೇಳಿದಾಗ ಹಲವರು 20-30 ಸ್ಥಾನ ಬರುತ್ತದೆ ಎಂದು ಮಾತನಾಡಿದರು. ಈಗ 40-60 ಸ್ಥಾನ ಬರಲಿದೆ ಎನ್ನುತ್ತಿದ್ದಾರೆ. ಇನ್ನೆರಡು ದಿನದಲ್ಲಿ ಮತ್ತಷ್ಟುಮಂದಿ ಪಕ್ಷಕ್ಕೆ ಬರಲಿದ್ದಾರೆ. ಕುಮಾರಸ್ವಾಮಿ ಸಮಾವೇಶಕ್ಕೆ ಜನ ಬರುತ್ತಾರೆಯೇ ಹೊರತು ಮತ ಬರುವುದಿಲ್ಲ ಎಂದು ಹೇಳುವವರಿಗೆ ಮೇ 13 ರಂದು ಜನರು ಉತ್ತರ ನೀಡಲಿದ್ದಾರೆ ಎಂದು ಕಾಂಗ್ರೆಸ್-ಬಿಜೆಪಿಗೆ ತಿರುಗೇಟು ನೀಡಿದರು.
ಎಂ.ಪಿ.ಕುಮಾರಸ್ವಾಮಿ, ರಘು ಆಚಾರ್ ಜೆಡಿಎಸ್ ಸೇರ್ಪಡೆ
ಬೆಂಗಳೂರು: ವಿಧಾನಪರಿಷತ್ ಮಾಜಿ ಸದಸ್ಯ ರಘು ಆಚಾರ್, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ, ಗುರುಪಾಟೀಲ ಶಿರವಾಳ ಸೇರಿದಂತೆ ವಿವಿಧ ಜಿಲ್ಲೆಯ ಹಲವು ನಾಯಕರು ಬಿಜೆಪಿ ಮತ್ತು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಎಲ್ಲರಿಗೂ ಪಕ್ಷದ ಶಾಲು ಹೊದಿಸಿ, ಬಾವುಟ ನೀಡಿದ ಪಕ್ಷಕ್ಕೆ ಬರಮಾಡಿಕೊಂಡರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಭವಾನಿಗೆ ಪರಿಷತ್ ಸ್ಥಾನ?
ಚಿತ್ರದುರ್ಗದ ರಘು ಆಚಾರ್ ಕಾಂಗ್ರೆಸ್ ತೊರೆದು ತಮ್ಮ ನೂರಾರು ಬೆಂಬಲಿಗರ ಜತೆ ಜೆಡಿಎಸ್ಗೆ ಸೇರಿದರು. ಜೇವರ್ಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದೊಡ್ಡಪ್ಪ ಗೌಡ ಪಾಟೀಲ, ಶಹಾಪುರ ಕ್ಷೇತ್ರದ ಮಾಜಿ ಶಾಸಕ ಗುರುಪಾಟೀಲ್ ಶಿರವಾಳ ಅವರು ಬಿಜೆಪಿ ತೊರೆದು ತಮ್ಮ ಬೆಂಬಲಿಗರ ಜತೆ ಜೆಡಿಎಸ್ಗೆ ಸೇರ್ಪಡೆಯಾದರು. ಕಾರವಾರದ ಚೈತ್ರಾ ಕೊಡೇಕರ್, ಪಾವಗಡದ ಶ್ರೀರಾಮ್, ಮಾಯಕೊಂಡದ ಸವಿತಾ ಬಾಯಿ, ಹಿರಿಯೂರಿನ ಎಚ್.ಆರ್.ತಮ್ಮಯ್ಯ ಸೇರಿದಂತೆ ಇತರರು ಸೇರ್ಪಡೆಯಾದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.