
ಹುಬ್ಬಳ್ಳಿ (ಜು.15): ಇದು ಬಿಜೆಪಿಯವರ ಟ್ರಿಕ್ಸ್ ಅಷ್ಟೆ. ಕಳೆದ ಹತ್ತು ವರ್ಷದಲ್ಲಿ ಬಿಜೆಪಿಯವರು ಎಷ್ಟು ಎಂಎಲ್ಎಗಳನ್ನು ಖರೀದಿ ಮಾಡಿದ್ದಾರೆ ಎಂಬುದನ್ನು ಪ್ರಹ್ಲಾದ್ ಜೋಶಿ ತಿಳಿಸಲಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ನಲ್ಲಿ ಸಿಎಂ ಹುದ್ದೆಗೆ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದರು. ನಮ್ಮ ಪಕ್ಷದಲ್ಲಿ ನಾವೇನಾದರೂ ಮಾಡಿಕೊಳ್ಳುತ್ತೇವೆ. ಇವರಿಗೇನು?
ಕರ್ನಾಟಕ ಕಾಂಗ್ರೆಸ್ನಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆ ಬಿಟ್ಟದ್ದು. ಅದೆಲ್ಲ ಬಿಜೆಪಿಗೇಕೆ ಬೇಕು? ನಾವೇನಾದರೂ ಮಾಡಿಕೊಳ್ಳುತ್ತೇವೆ. ಇವರಿಗೇನು ಸಂಬಂಧ? ನಮ್ಮ ಸರ್ಕಾರದ ಉತ್ತಮ ಆಡಳಿತದಿಂದ ದೇಶದಲ್ಲೇ ಜಿಡಿಪಿಯಲ್ಲಿ ಕರ್ನಾಟಕ ನಂಬರ್ ಒನ್ ಇದೆ. ಬಿಜೆಪಿ ಆಡಳಿತವಿರುವ ಗುಜರಾತ್, ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನಗಳಲ್ಲಿ ಯಾವ ಅಭಿವೃದ್ಧಿಯಾಗಿದೆ ಹೇಳಲಿ. ಇವರೇನು ಮಾಡುತ್ತಿದ್ದಾರೆ ಎಂಬುದನ್ನು ಹೇಳಲಿ. ರಾಜ್ಯ ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಮೊದಲು ಹೇಳಲಿ ಎಂದು ಸವಾಲೆಸೆದರು.
ದೇಶದ ಬಗ್ಗೆ ನಾವು ಪ್ರಶ್ನೆ ಕೇಳಬಾರದಾ?: ದೇಶದಲ್ಲಿ 1.14 ಲಕ್ಷ ಕೋಟಿ ಮೌಲ್ಯದ ₹500ರ ಖೋಟಾ ನೋಟುಗಳಿವೆ ಎಂದು ಆರ್ಬಿಐ ಹೇಳಿದೆ. ಕೇಂದ್ರ ಸರ್ಕಾರ ಏನು ಕ್ರಮ ಕೈಗೊಂಡಿದೆ. ಇದನ್ನು ನಾವು ಪ್ರಶ್ನಿಸಬಾರದಾ? ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಕೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖೋಟಾ ನೋಟು ಮತ್ತು ಭ್ರಷ್ಟಾಚಾರ ನಿಯಂತ್ರಿಸುತ್ತೇವೆ ಎಂದು ಪ್ರಧಾನಿ ಮೋದಿ ನೋಟು ಅಮಾನ್ಯ ಮಾಡಿದರು. ಆದರೆ, ಏನಾಯಿತು?. ಇದೀಗ ಆರ್ಬಿಐ ಬಿಡುಗಡೆ ಮಾಡಿರುವ ವರದಿಯಲ್ಲಿ 1.14 ಲಕ್ಷ ಕೋಟಿ ನಕಲಿ ನೋಟುಗಳು, 2 ಸಾವಿರಗಳ 26 ಸಾವಿರ ಕೋಟಿ ನಕಲಿ ನೋಟುಗಳಿವೆ. ಪ್ರಧಾನಿ ಮತ್ತು ಅವರ ಸಚಿವರು, ಸಂಸದರು ಯಾಕೆ ಮಾತನಾಡುತ್ತಿಲ್ಲ. ನಾವು ಈ ಬಗ್ಗೆ ಕೇಳಬಾರದಾ? ಎಂದರು. ಅಧಿಕಾರಕ್ಕೆ ಬರುವ ಮುನ್ನ ಏನು ಭರವಸೆ ಕೊಟ್ಟಿದ್ದರೋ ಅದನ್ನೇ ಕೇಳುತ್ತೇವೆ. ಅದಕ್ಕೆ ಉತ್ತರಿಸುತ್ತಿಲ್ಲ. ಬದಲಿಗೆ ಮೈ ಪರಚಿಕೊಂಡಂತೆ ಮಾತನಾಡುತ್ತಾರೆ.
ದೇಶ ಬಿಜೆಪಿ, ಕಾಂಗ್ರೆಸ್ಗೆ ಸೇರಿದ್ದಲ್ಲ. ದೇಶವನ್ನಾಳುವ ಪ್ರಧಾನಿಗೆ ಪ್ರಶ್ನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ನಾವು ಕೇಳುತ್ತೇವೆ. ಅದಕ್ಕೆ ಉತ್ತರಿಸಲಿ ಎಂದು ಛೇಡಿಸಿದರು. ಇವರಿಗೆ ಮುಜುಗರ ತರುವಂತಹ ಪ್ರಶ್ನೆ ಕೇಳಿದರೆ ತ್ರಾಸ್ ಆಗುತ್ತದೆ ಎಂದು ಕಿಡಿಕಾರಿದರು. ಭಾರತ- ಪಾಕಿಸ್ತಾನ ನಡುವಣ ಯುದ್ಧವನ್ನು ನಾನೇ ನಿಲ್ಲಿಸಿರುವುದಾಗಿ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕಳೆದ 40-50 ದಿನಗಳ ಅವಧಿಯಲ್ಲಿ ಕನಿಷ್ಠ 25 ಬಾರಿ ಹೇಳಿದ್ದಾರೆ. ಅದರ ಬಗ್ಗೆ ಪ್ರಧಾನಿ ಮೋದಿ, ಸಚಿವರು ಏಕೆ ತುಟಿ ಬಿಚ್ಚುತ್ತಿಲ್ಲ. ಗುಜರಾತ್ ಪೋರ್ಟ್ದಲ್ಲಿ ₹21 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ಸಿಕ್ಕಿತು.
ಅದು ಭಯೋತ್ಪಾದಕ ಚಟುವಟಿಕೆಗೆ ಬಳಕೆಯಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ(ಎನ್ಐಎ) ತಿಳಿಸಿದೆ. ಇದರ ಬಗ್ಗೆ ಪ್ರಧಾನಿಯವರು ಮಾಹಿತಿ ನೀಡಬೇಕು ಎಂದರು. 2014ರ ಮುನ್ನ ಅಭಿವೃದ್ಧಿಯಲ್ಲಿ 78ನೇ ಸ್ಥಾನದಲ್ಲಿದ್ದ ಭಾರತ ಈಗ 144ನೇ ಸ್ಥಾನಕ್ಕೆ ಕುಸಿದಿದೆ. ಕಳೆದ 11 ವರ್ಷಗಳಲ್ಲಿ ದೇಶವನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪಿಸಿದ ಸಚಿವ ಲಾಡ್, ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶದಲ್ಲಿ 96 ಸಾವಿರ ಶಾಲೆಗಳಲ್ಲಿ 60 ಸಾವಿರ ಶಾಲೆಗಳನ್ನು ಮುಚ್ಚಿದ್ದು, 5ರಿಂದ 8ನೇ ತರಗತಿ ವರೆಗೆ 2.50 ಕೋಟಿ ಮಕ್ಕಳು ಶಾಲೆಯಿಂದ ವಂಚಿತರಾಗಿದ್ದಾರೆ. ಇದನ್ನು ನಾವು ಪ್ರಶ್ನಿಸಬಾರದೇ. ಬಿಜೆಪಿಯವರು ಯಾಕೆ ಮಾತನಾಡುವುದಿಲ್ಲ ಎಂದು ಕುಟುಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.