
ಬೆಂಗಳೂರು (ಆ.17): ಮೈಸೂರಿನ ಮುಡಾದಿಂದ ಅಕ್ರಮವಾಗಿ 14 ಸೈಟ್ ಪಡೆದುಕೊಂಡ ಆರೋಪದ ಮೇಲೆ ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಸಲ್ಲಿಕೆಯಾಗಿದ್ದ ಮೂರು ದೂರುಗಳು ಇತ್ಯರ್ಥವಾಗಿದೆ. ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ಕೂಡ ನೀಡಿದ್ದಾರೆ. ಟಿಜೆ ಅಬ್ರಾಹಂ, ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್ ಎನ್ನುವವರು ನೀಡಿದ ದೂರಿನ ಆಧಾರದಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗಿದೆ. ಇದಕ್ಕೂ ಮುನ್ನ ಸಿಎಂಗೆ ಈ ಕುರಿತಾಗಿ ರಾಜ್ಯಪಾಲ ಥಾವರ್ಚಂದ್ ಗೆಹಲೊತ್ ನೋಟಿಸ್ ನೀಡಿ ಉತ್ತರ ನೀಡುವಂತೆ ತಿಳಿಸಿದ್ದರು. ಇದಕ್ಕೆ ಸಿಎಂ ಕೂಡ 70 ಪುಟಗಳ ಸುದೀರ್ಘ ಉತ್ತರವನ್ನೂ ನೀಡಿದ್ದರು. ಇದೆಲ್ಲದರ ನಡುವೆಯೂ ರಾಜ್ಯಪಾಲರು ಈಗ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ಕಾರಣ ಸಿಎಂಗೆ ಕಾನೂನು ಸಂಕಷ್ಟ ಎದುರಾಗಿದೆ.
ಈ ಬಗ್ಗೆ ಮಾತನಾಡಿರುವ ಸಚಿವ ಎಂಬಿ ಪಾಟೀಲ್, 'ನಾವು ರಾಜ್ಯಪಾಲರರಿಂದ ಇದನ್ನು ಅಪೇಕ್ಷೆ ಮಾಡಿರಲಿಲ್ಲ. ಅಬ್ರಾಹಂ ಅರ್ಜಿ ಕೊಟ್ಟ ಬಳಿಕ ಸಿಎಸ್ ಖುದ್ದಾಗಿ ಹೋಗಿ ಮಾಹಿತಿ ನೀಡಿದ್ದಾರೆ. ನಾವು ಕ್ಯಾಬಿನೆಟ್ ನಲ್ಲಿ ಸುಧೀರ್ಘ ಉತ್ತರ ರಾಜ್ಯಪಾಲರಿಗೆ ಕೊಟ್ಟಿದ್ದೇವೆ. ಅಂದೇ ರಾತ್ರಿ ರಾಜ್ಯಪಾಲರು ನೋಟಿಸ್ ಕೊಟ್ಟಿದ್ದಾರೆ. ಆಗಲೇ ನಮಗೆ ಸಂಶಯವಿತ್ತು. ಜೊಲ್ಲೆ, ಕುಮಾರಸ್ವಾಮಿ ಮೇಲೆ ದೂರುಗಳಿವೆ. ಕುಮಾರಸ್ವಾಮಿ ಮೇಲೆ ಹತ್ತು ತಿಂಗಳಿಂದ ರಾಜ್ಯಪಾಲರ ಬಳಿ ಕೇಸ್ ಇದೆ. ಇವು ರಾಜ್ಯಪಾಲರಿಗೆ ನೆನಪಾಗೋದಿಲ್ಲ. ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ವಿರೋಧ ಪಕ್ಷಗಳು ಆಡಳಿತ ಇರುವ ರಾಜ್ಯದಲ್ಲಿ ಇದೆ ರೀತಿ ಆಗಿದೆ. ನಮ್ಮ ರಾಜ್ಯದಲ್ಲಿ ಕೂಡ ರಾಜ್ಯಪಾಲರ ದುರ್ಬಳಕೆ ಆಗಿದೆ. ಮುಡಾದಲ್ಲೆ ಬಾರಿ ಹಗರಣ ನಡೆದಿದೆ. ಮುಡಾ ಮೇಲೆಯೇ ಲೆಕ್ಕವಿಲ್ಲದಷ್ಟು ಆರೋಪಗಳಿವೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಗವರ್ನರ್ ಕೇಂದ್ರದ ಕೈಗೊಂಬೆ ಯಾಗಿ ಕೆಲಸ ಮಾಡ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಮುಂದುವರಿದ ಚಾಳಿಯಂತೆ ಇಲ್ಲೂ ಮಾಡ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯದ ಜನರು ಇದನ್ನು ಸಹಿಸೋದಿಲ್ಲ ಎಂದಿದ್ದಾರೆ.
ದೇವರಾಜ್ ಅರಸು ನಂತರ ಸಿದ್ದರಾಮಯ್ಯ ಐದು ವರ್ಷಗಳ ಸಿಎಂ ಆಗಿ ಪೂರೈಸಿರುವ ನಾಯಕ. ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ. ಅವರ ಜನಪ್ರಿಯತೆ ಗೆ ಮಸಿ ಬಳಿಯಲು ಪ್ರಯತ್ನ. ಸರ್ಕಾರ ದುರ್ಬಲ ಗೊಳಿಸುವ ಕೆಲಸ ಮಾಡ್ತಿದ್ದಾರೆ. ಕಾನೂನು ರೀತಿಯಲ್ಲಿ ಇದನ್ನು ನಾವು ಫೇಸ್ ಮಾಡುತ್ತೇವೆ. ರಾಜ್ಯಪಾಲರ ಮೂಲಕ ಕೇಂದ್ರ ಮಾಡಿರುವ ನಿರ್ಣಯದ ವಿರುದ್ಧ ನಾವು ಜನರ ಬಳಿ ಹೋಗುತ್ತೇವೆ. ಇದರ ಪರಿಣಾಮ ಗವರ್ನರ್ ಹಾಗೂ ಕೇಂದ್ರ ಸರ್ಕಾರ ಮುಂದೆ ಎದುರಿಸಬೇಕಾಗುತ್ತದೆ. ಗವರ್ನರ್ ರ ಸ್ವಂತ ನಿರ್ಧಾರ ಅಲ್ಲ, ಇದು ಕೇಂದ್ರದ ನಿರ್ಧಾರ. ಇದರಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಪಾರ್ಟಿ ಸೇರಿದಂತೆ ನಾವೆಲ್ಲರೂ, ಸಿಎಂ ಸಿದ್ದರಾಮಯ್ಯ ಜೊತೆ ಇದ್ದೇವೆ. ಸಿದ್ದರಾಮಯ್ಯರನ್ನು ಯಾರು ಏನು ಮಾಡೋಕೆ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.
ಸಿಎಂ ವಿರುದ್ಧ ಪ್ರಾಸಿಕ್ಯೂಷನ್: ತುರ್ತು ಸಚಿವ ಸಂಪುಟ ಸಭೆಗೆ ಕರೆ
ಸಿದ್ದರಾಮಯ್ಯ ಜನಪ್ರಿಯ ನಾಯಕ. ಎರಡು ಬಾರಿ ಸಿಎಂ ಆಗಿದ್ದಾರೆ. 40 ವರ್ಷದ ರಾಜಕೀಯದಲ್ಲಿ ಕಪ್ಪು ಚುಕ್ಕೆ ಇಲ್ಲ. ಅವರ ವಿರುದ್ಧ ಷಡ್ಯಂತ್ರ ನಡೆದಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ನ್ಯಾಯಲಯದ ಲ್ಲಿ ನಮಗೆ ನ್ಯಾಯ ಸಿಗುತ್ತೆ. ಜನರ ಬಳಿಗೆ ಈ ಪ್ರಕರಣ ತೆಗದುಕೊಂಡು ಹೋಗುತ್ತೇವೆ. ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರ ಕೆಟ್ಟ ಕೆಲಸ ಮಾಡಿದೆ. ಮೋದಿ, ಅಮಿತ್ ಶಾ ಸೂಚನೆ ಮೇಲೆ ಈ ನಿರ್ಧಾರವಾಗಿದೆ ಎಂದಿದ್ದಾರೆ. ಸಿಎಂ ರಾಜೀನಾಮೆ ಕೋಡುವ ಪ್ರಶ್ನೆಯೇ ಇಲ್ಲ. ಎಲ್ಲ ಶಾಸಕರು, ಹೈಕಮಾಂಡ್ ಸಿಎಂ ಬೆನ್ನಿಗೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
Muda Case: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಅನುಮತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.