ನಮ್ಮ ಬಗ್ಗೆ ಜಗದೀಶ್‌ ಶೆಟ್ಟರ್‌ ಮಾತಾಡಿಲ್ಲ: ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದೇನು?

By Kannadaprabha NewsFirst Published Jan 27, 2024, 10:03 PM IST
Highlights

ಮಾಜಿ ಸಿಎಂ ಜಗದೀಶ್‌ ಶೆಟ್ಟರ್ ಅವರು ಕಾಂಗ್ರೆಸ್‌ ಪಕ್ಷಕ್ಕೆ ಬಂದಾಗ ಬಿಜೆಪಿಯ ಬಗ್ಗೆ ಏನೆಲ್ಲಾ ಮಾತನಾಡಿದ್ದರು, ಈಗ ಬಿಜೆಪಿಗೆ ಹೋಗಿದ್ದಾರೆ, ಕಾಂಗ್ರೆಸ್‌ ಬಗ್ಗೆ ಆಡಲು ಅವರಿಗೆ ಯಾವುದೇ ಮಾತಿಲ್ಲ ಎಂದು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು. 

ಚಿಕ್ಕಮಗಳೂರು (ಜ.27): ಮಾಜಿ ಸಿಎಂ ಜಗದೀಶ್‌ ಶೆಟ್ಟರ್ ಅವರು ಕಾಂಗ್ರೆಸ್‌ ಪಕ್ಷಕ್ಕೆ ಬಂದಾಗ ಬಿಜೆಪಿಯ ಬಗ್ಗೆ ಏನೆಲ್ಲಾ ಮಾತನಾಡಿದ್ದರು, ಈಗ ಬಿಜೆಪಿಗೆ ಹೋಗಿದ್ದಾರೆ, ಕಾಂಗ್ರೆಸ್‌ ಬಗ್ಗೆ ಆಡಲು ಅವರಿಗೆ ಯಾವುದೇ ಮಾತಿಲ್ಲ ಎಂದು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಪ್ರಜಾಪ್ರಭುತ್ವ ವ್ಯವಸ್ಥೆ, ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು. ಕಾಂಗ್ರೆಸ್‌ ಪಕ್ಷ ಆಪರೇಷನ್‌ ಮಾಡೋದಿಲ್ಲಾ, ಬೇರೆ ಪಕ್ಷದಿಂದ ಬರುವವರಿಗೆ ಸಿಎಂ ಹಾಗೂ ಡಿಸಿಎಂ ಸ್ವಾಗತಿಸುತ್ತಾರೆ ಎಂದರು.

ವಿಶ್ವದಲ್ಲಿ ತಲೆ ಎತ್ತಿ ನಿಂತ ಸ್ವಾಭಿಮಾನದ ದಿನ: ನಮ್ಮ ಭಾರತ ಗಣರಾಜ್ಯವಾಗಿ ‘ರೂಪಾಂತರ’ಗೊಂಡು ವಿಶ್ವದ ಭೂಪಟದಲ್ಲಿ ಭರತ ಭೂಮಿಯಾಗಿ ತಲೆ ಎತ್ತಿ ನಿಂತ ಸ್ವಾಭಿಮಾನದ ದಿನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು. ಜಿಲ್ಲಾ ಆಟದ ಮೈದಾನದಲ್ಲಿ ನಡೆದ ಗಣ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತದ ಪ್ರಜೆಗಳಿಗೆ ಶಾಸನಗಳನ್ನು ರೂಪಿಸುವ ಶಾಸಕಾಂಗ, ಪ್ರಜೆಗಳಿಗೆ ನ್ಯಾಯ ನೀಡುವ ನ್ಯಾಯಾಂಗ, ಪ್ರಜೆಗಳಿಗಾಗಿ ಕರ್ತವ್ಯ ನಿರ್ವಹಿಸುವ ಕಾರ್ಯಾಂಗಗಳಿಗೆ ನೀತಿ ನಿಯಮಗಳನ್ನು ಲಿಖಿತ ರೂಪದಲ್ಲಿ ಒಪ್ಪಿ ಭಾರತೀಯ ಪ್ರಜೆಗಳು ತಮಗೆ ತಾವೇ ಪ್ರಭುಗಳು ಎಂದು ಸಾರಿದ ಪವಿತ್ರ ದಿನ ಇದಾಗಿದೆ ಎಂದರು.

ನಮ್ಮ ಭಾರತ ಸ್ವಾತಂತ್ರ್ಯ ಭಾರತ ಎಂದು ಹೆಮ್ಮೆ ಪಡಲು, ಗಣರಾಜ್ಯವಾಗಿ ರೂಪುಗೊಳ್ಳಲು ಆಗಿರುವ ತ್ಯಾಗ, ಬಲಿದಾನ ಗಳಿಗೆ ಲೆಕ್ಕವೇ ಇಲ್ಲ. ನಮ್ಮ ಪೂರ್ವಜರು ನಮ್ಮ ಭವಿಷ್ಯಕ್ಕಾಗಿ ತಮ್ಮ ರಕ್ತ, ಬೆವರು ಹರಿಸಿ ಸ್ಥಾಪಿಸಿದ ಭಾರತದ ಪವಿತ್ರ ನೆಲದಲ್ಲಿ ಭಾರತೀಯ ಪ್ರಜೆಗಳಾದ ನಾವು ಸ್ವಾತಂತ್ರ್ಯಅನುಭವಿಸುತ್ತಿದ್ದೇವೆ ಎಂದು ಹೇಳಿದರು. ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಮಿತಿಯ ಅತಿದೊಡ್ಡ ಸಾಧನೆ. ಹಲವು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಅವುಗಳಲ್ಲಿರುವ ಉತ್ತಮ ಅಂಶಗಳನ್ನು ನಮ್ಮ ದೇಶದ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಈ ಸಂವಿಧಾನ ಭಾರತವನ್ನು ಒಂದು ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿಸಲು ಮತ್ತು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳು ಮತ್ತು ಅವಕಾಶ ಒದಗಿಸಲು ಸಹಾಯ ಮಾಡಿದೆ ಎಂದರು.

ಜಗದೀಶ ಶೆಟ್ಟರ್‌ ಬಿಜೆಪಿಗೆ: ಕಾಂಗ್ರೆಸ್‌ಗೆ ಹಾನಿಯಿಲ್ಲ: ಸಚಿವ ಡಾ.ಶರಣಪ್ರಕಾಶ ಪಾಟೀಲ್

ಗಣರಾಜ್ಯೋತ್ಸವ ಸಂಭ್ರಮದ ದಿನ ಮಾತ್ರವಲ್ಲ, ಪ್ರತಿ ಭಾರತೀಯನ ಪಾಲಿಗೂ ಆತ್ಮಾವಲೋಕನದ ದಿನ ಹಾಗೂ ಸಂಕಲ್ಪದ ಸುದಿನವೂ ಹೌದು. ಭೂತಕಾಲದ ಪರಂಪರೆ, ವರ್ತಮಾನದ ಸಮಸ್ಯೆ- ಸಂಕಟ ಮತ್ತು ಭವಿಷ್ಯತ್ತಿನ ಬಗ್ಗೆ ಯೋಚಿಸಬೇಕಾಗಿದೆ ಎಂದ ಅವರು, ಪರಂಪರೆ ಹೆಜ್ಜೆಗಳನ್ನು ಅನುಸರಿಸಿ ನಡೆಯುವುದು ನಾಗರಿಕರ ಆದ್ಯ ಕರ್ತವ್ಯ. ದೇಶದ ಘನತೆ, ಸಾರ್ವಭೌಮತೆ ಎತ್ತಿ ಹಿಡಿಯುವುದು ಸರ್ವರ ಹೊಣೆಗಾರಿಕೆ. ಅದನ್ನು ನಾವು ಮೊದಲು ಮನಗಾಣ ಬೇಕು. ನಮ್ಮೆಲ್ಲರ ಮನೆ ಮನಗಳಲ್ಲಿ ದೇಶಭಕ್ತಿ ನಂದಾದೀಪ ಹಚ್ಚುವ ಕೆಲಸ ಈಗಲಾದರೂ ತ್ವರಿತವಾಗಿ ಆಗಬೇಕಿದೆ ಎಂದು ಹೇಳಿದರು.

click me!