ಪ್ರಲ್ಹಾದ್ ಜೋಶಿ ಸಿಎಂ ಹೇಳಿಕೆ, ದಿಕ್ಕು ತಪ್ಪಿಸುವ ತಂತ್ರ: ಸಚಿವ ಶ್ರೀರಾಮುಲು

By Kannadaprabha NewsFirst Published Feb 6, 2023, 10:24 PM IST
Highlights

ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಹ್ಲಾದ ಜೋಶಿ ಅವರನ್ನು ಸಿಎಂ ಮಾಡಲು ಆರ್‌ಎಸ್‌ಎಸ್‌ ಪ್ಲಾನ್‌ ಮಾಡಿದೆ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ಧ ಹರಿಹಾಯ್ದಿರುವ ಸಾರಿಗೆ ಸಚಿವ ಬಿ. ಶ್ರೀರಾಮುಲು, ಕುಮಾರಸ್ವಾಮಿ ಅವರ ಹೇಳಿಕೆ ದಿಕ್ಕು ತಪ್ಪಿಸುವ ತಂತ್ರ ಎಂದು ಟೀಕಿಸಿದ್ದಾರೆ.

ಬಳ್ಳಾರಿ (ಫೆ.06): ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಹ್ಲಾದ ಜೋಶಿ ಅವರನ್ನು ಸಿಎಂ ಮಾಡಲು ಆರ್‌ಎಸ್‌ಎಸ್‌ ಪ್ಲಾನ್‌ ಮಾಡಿದೆ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ಧ ಹರಿಹಾಯ್ದಿರುವ ಸಾರಿಗೆ ಸಚಿವ ಬಿ. ಶ್ರೀರಾಮುಲು, ಕುಮಾರಸ್ವಾಮಿ ಅವರ ಹೇಳಿಕೆ ದಿಕ್ಕು ತಪ್ಪಿಸುವ ತಂತ್ರ ಎಂದು ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕ್ಯಾಬಿನೆಟ್‌ನಲ್ಲಿ ಮಂತ್ರಿಯಾಗಿ ಜೋಶಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಅವರು ಯಾವುದೇ ದಾಖಲೆ ಬಿಚ್ಚಿಡುವ ಅಗತ್ಯವಿಲ್ಲ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಅವರೇ ನಮ್ಮ ಮುಂದಿನ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿದರು. ಸಂಡೂರಿನಲ್ಲಿ ಮಾಜಿ ಸಚಿವ ಸಂತೋಷ್‌ ಲಾಡ್‌ ಜತೆ ಆಲಿಂಗನ ಕುರಿತು ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ಸಂತೋಷ್‌ ಲಾಡ್‌ ಹಾಗೂ ನಾನು ಹಳೆಯ ಸ್ನೇಹಿತರು. ರಾಜಕೀಯ ಹೊರತುಪಡಿಸಿ ನಮ್ಮ ನಡುವೆ ಸ್ನೇಹವಿದೆ. ಸಂಡೂರು ಜಾತ್ರೆಗೆ ತೆರಳಿದ್ದಾಗ ಸಿಕ್ಕರು. ಹೀಗಾಗಿ ಆತ್ಮೀಯ ಭಾವದಿಂದ ಆಲಿಂಗನ ಮಾಡಿದೆವು. 

ಈ ಬಾರಿ ಕಾಂಗ್ರೆಸ್‌ ಸರ್ಕಾರ ರಚನೆಯಾಗುವುದು ಖಚಿತ: ಯತೀಂದ್ರ ಸಿದ್ದರಾಮಯ್ಯ

ನಾನು ಸಂಡೂರು ಕ್ಷೇತ್ರದಿಂದ ಸ್ಪರ್ಧಿಸುವ ಉದ್ದೇಶದಿಂದಲೇ ಆಲಿಂಗನ ಮಾಡಿಕೊಂಡಿದ್ದೇನೆ ಎಂಬುದು ಸುಳ್ಳು. ನನ್ನ ಸ್ಪರ್ಧೆಯನ್ನು ನಾನು ನಿರ್ಧರಿಸುವುದಿಲ್ಲ. ಪಕ್ಷ ನಿರ್ಧರಿಸುತ್ತದೆ. ಅವರವರ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ರಾಜಕೀಯ ತಂತ್ರಗಾರಿಕೆ ಮಾಡುವುದು ಸಹಜ ಎಂದರು. ಇದೇ ತಿಂಗಳು 21ರಂದು ಕೇಂದ್ರ ಸಚಿವ ಅಮಿತ್‌ ಶಾ ಅವರು ಬಳ್ಳಾರಿಗೆ ಆಗಮಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಚುನಾವಣಾ ಪ್ರಚಾರಕ್ಕಾಗಿ ಅಮಿತ್‌ ಶಾ ಅವರು ಬಳ್ಳಾರಿಗೆ ಆಗಮಿಸುತ್ತಿದ್ದಾರೆ ಎಂದು ಹೇಳಿದರು.

ದಾಖಲಾತಿ ನೀಡಿದರೆ ತನಿಖೆ: ಈ ಹಿಂದೆ 2007-08ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ 1500 ಕೋಟಿ ಹಣ ಬಿಡುಗಡೆ ಮಾಡಿ ಭದ್ರಾ ಮೇಲ್ದಂಡೆ ಯೋಜನೆಗೆ ಜಾರಿಗೊಳಿಸಿದರು. ಈ ಬಗ್ಗೆ ಟೆಂಡರ್‌ ಪ್ರಕ್ರಿಯೆಯಲ್ಲಿ ಮೋಸವಾಗಿದೆ ಎಂದು ಶಾಸಕರೇ ಆರೋಪಿಸಿದ ಬಗ್ಗೆ ಸೂಕ್ತ ದಾಖಲಾತಿಗಳನ್ನು ನೀಡಿದರೆ ತನಿಖೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೆಲವು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಸುಮಾರು 4500 ಕೋಟಿ ರು.ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿಶೇಖರ್‌ ಆರೋಪಿಸಿದ ಬಗ್ಗೆ ಪತ್ರಕರ್ತರ ಪ್ರಶ್ನಿಸಿದಾಗ ಉತ್ತರಿಸಿದ ಶ್ರೀರಾಮುಲು, ಯಾವುದೇ ಕಾರಣಕ್ಕೂ ಅನ್ಯಾಯ, ಮೋಸವಾಗದಂತೆ ಸರ್ಕಾರ ಜಾಗ್ರತೆ ವಹಿಸಲು ಸಿದ್ಧವಿದೆ. ಶಾಸಕರ ಆರೋಪ ಕುರಿತು ನಾನು ಸಹ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪರಿಶೀಲನೆ ನಡೆಸಲು ಸೂಚನೆ ನೀಡುತ್ತೇನೆಂದರು. 

ಮೋದಿ ಆಡಳಿತದಲ್ಲಿ ಮನೆಮನೆಗೂ ಸವಲತ್ತು: ಕೇಂದ್ರ ಸಚಿವ ನಾರಾಯಣಸ್ವಾಮಿ

ರಾಜ್ಯದ ರಸ್ತೆ ಸಾರಿಗೆ ನಿಗಮದಲ್ಲಿ ನೇಮಕಾತಿಗೆ ಸಂಬಂಧಪಟ್ಟಂತೆ ನಡೆದ ಲಿಖಿತ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಿಗಮದಲ್ಲಿ ನೇಮಕಾತಿಗೆ ಸಂಬಂಧಪಟ್ಟಂತೆ ಇನ್ನೂ ಯಾವುದೇ ಆದೇಶವನ್ನು ನೀಡಿಲ್ಲ. ಈ ಬಗ್ಗೆ ಸೂಕ್ತ ದಾಖಲಾತಿಗಳು ದೊರೆತಲ್ಲಿ ತನಿಖೆಗೆ ಆದೇಶಿಸಲಾಗುವುದು. ಒಂದು ಪಕ್ಷ ಅಕ್ರಮಗಳು ನಡೆದಿದ್ದು ಸಾಬೀತಾದಲ್ಲಿ ನೇಮಕಾತಿಯನ್ನೇ ರದ್ದುಪಡಿಸುವಂತೆ ಸಾರಿಗೆ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆಂದರು.

click me!