ಮಹಾರಾಷ್ಟ್ರದ ಮಾದರಿಯ ಬದಲಾವಣೆ ಕರ್ನಾಟಕದಲ್ಲೂ ಆಗಲಿದೆ: ಎಚ್‌.ಡಿ.ಕುಮಾರಸ್ವಾಮಿ

By Kannadaprabha NewsFirst Published Dec 11, 2023, 3:30 AM IST
Highlights

ಮುಂದಿನ ಲೋಕಸಭಾ ಚುನಾವಣೆ ಕಳೆಯಲಿ. ಆಮೇಲೆ ಕರ್ನಾಟಕದಲ್ಲೂ ಮಹಾರಾಷ್ಟ್ರದಲ್ಲಿ ನಡೆದ ಅಂತಹುದೇ ರಾಜಕೀಯ ಬದಲಾವಣೆಯಾಗುತ್ತದೆ. ಅದಕ್ಕೆ ಕಾರಣಕರ್ತರಾಗಿ ಕರ್ನಾಟಕದಲ್ಲಿ ಯಾರು ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶಂಕೆ ವ್ಯಕ್ತಪಡಿಸಿದರು.

ಹಾಸನ (ಡಿ.11): ಮುಂದಿನ ಲೋಕಸಭಾ ಚುನಾವಣೆ ಕಳೆಯಲಿ. ಆಮೇಲೆ ಕರ್ನಾಟಕದಲ್ಲೂ ಮಹಾರಾಷ್ಟ್ರದಲ್ಲಿ ನಡೆದ ಅಂತಹುದೇ ರಾಜಕೀಯ ಬದಲಾವಣೆಯಾಗುತ್ತದೆ. ಅದಕ್ಕೆ ಕಾರಣಕರ್ತರಾಗಿ ಕರ್ನಾಟಕದಲ್ಲಿ ಯಾರು ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶಂಕೆ ವ್ಯಕ್ತಪಡಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಭೇಟಿ ನೀಡಿದ್ದ ಕುರಿತು ಭಾನುವಾರ ನಗರದಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರು, ಈ ದೇಶದಲ್ಲಿ ಇವತ್ತಿನ ರಾಜಕಾರಣ ನೋಡಿದಾಗ ಏನು ಬೇಕಾದರೂ ನಡೆಯಬಹುದು. ಇಲ್ಲಿ ಯಾರಿಗೂ ಪ್ರಾಮಾಣಿಕತೆ, ನಿಷ್ಠೆ ಅನ್ನೋದು ಉಳಿದಿಲ್ಲ. ಅವರವರ ಸ್ವಾರ್ಥಕ್ಕೆ ಏನೇನು ಆಗಬೇಕೋ ಅದನ್ನೇ ಮಾಡಿಕೊಂಡು ಹೋಗುತ್ತಿದ್ದಾರೆ. ಇವತ್ತು ಇಲ್ಲಿ ಇರ್ತಾರೆ, ಅನುಕೂಲ ಆಗಬೇಕಾದರೆ ಇನ್ನೊಂದು ಕಡೆ ಹೋಗ್ತಾರೆ. ಇದು ರಾಜಕೀಯದಲ್ಲಿ ನಡೆದುಕೊಂಡು ಬಂದಿದೆ ಎಂದು ಹೇಳಿದರು.

ಸಂಸದೆ ಮಹುವಾ ಮೊಯಿತ್ರಾ ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪುಚುಕ್ಕೆ: ಶೋಭಾ ಕರಂದ್ಲಾಜೆ

ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂಬ ನೊಣವಿನಕೆರೆ ಸ್ವಾಮೀಜಿಗಳ ಹೇಳಿಕೆ ಕುರಿತು ಪ್ರತಿಕ್ರಯಿಸಿದ ಅವರು, ಈ‌ ಸರ್ಕಾರದ ಬಗ್ಗೆ ಯಾರೂ ಏನು ಊಹೆ ಮಾಡಲು ಆಗುವುದಿಲ್ಲ. ಇರಬಹುದು ಯಾರು ಬೇಕಾದರೂ ಆಗಬಹುದು. ಲೋಕಸಭಾ ಚುನಾವಣೆ ಆದಮೇಲೆ ಬಿಜೆಪಿ ಸೇರಲಿಕ್ಕಾಗಿ ಅರ್ಜಿ ಹಾಕಿಕೊಂಡು ಹೋಗಿದ್ದಾರೆ ಅಂದೆನಲ್ಲಾ. ನಾನು ಐವತ್ತು, ಅರವತ್ತು ಜನ ಕರೆದುಕೊಂಡು ಬರುತ್ತೇನೆ. ಏನು ತೊಂದರೆ ಆಗುವುದು ಬೇಡ ಅಂತ ಹೋಗಿದ್ದಾರೆ. ಸಣ್ಣಪುಟ್ಟವರು ಹೋಗಲು ಆಗುತ್ತಾ.. ಐವತ್ತು, ಅರವತ್ತು ಜನ ಕರೆದುಕೊಂಡು. ಪ್ರಭಾವಿಗಳೇ ತಾನೆ ಅಷ್ಟು ಜನ ಶಾಸಕರನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಲು ಸಾಧ್ಯ ಎನ್ನುವ ಮೂಲಕ ಮುಂದಿನ ದಿನಗಳಲ್ಲಿ ಪ್ರಭಾವಿ ಸಚಿವರೊಬ್ಬರು ಬಿಜೆಪಿ ಸೇರಲಿದ್ದಾರೆ ಎನ್ನುವ ಶಂಕೆ ವ್ಯಕ್ತಪಡಿಸಿದರು.

ಕೊಬ್ಬರಿ ಖರೀದಿ ಕೇಂದ್ರ ಪುನಾರಂಭ ಮಾಡಲು ಆಗ್ರಹ: ಕೊಬರಿ ಬೆಳೆಗಾರರ ಸಂಕಷ್ಟವನ್ನು ಸದನದಲ್ಲಿ ವಿವರಿಸಿದ ಕುಮಾರಸ್ವಾಮಿ, ರೈತರಿಗೆ ಅನುಕೂಲವಾಗಲು ತಕ್ಷಣವೇ ಕೊಬರಿ ಖರೀದಿ ಕೇಂದ್ರಗಳನ್ನು ಮರು ಆರಂಭ ಮಾಡಬೇಕು. ಕೊಬ್ಬರಿ ಬೆಲೆ ಈ ಹಿಂದೆ ಕ್ವಿಂಟಾಲ್ ಗೆ 18 ಸಾವಿರ ರು ಇತ್ತು. ಈಗ 7,500 ರುಗೆ ಬಂದಿದೆ. ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ನಾಫೆಡ್ ಗೆ ಎಷ್ಟು ಪತ್ರ ಬರೆದರೂ ಉಪಯೋಗ ಇಲ್ಲದಾಗಿದೆ ಎಂದು ಹೇಳಿದರು. 

ಈ ಹಿಂದೆ ಖರೀದಿ ಕೇಂದ್ರಗಳ ಮೂಲಕ ನಾಫೆಡ್ ಪ್ರತಿ ಕ್ವಿಂಟಲ್ ಗೆ 11,750 ರು. ನೀಡಿ ಕೊಬ್ಬರಿ ಖರೀದಿ ಮಾಡುತ್ತಿತ್ತು. ಅಂದಾಜು ಒಟ್ಟು 50 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಗೆ 580 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಕೆಲ ದಿನಗಳ ನಂತರ ಖರೀದಿ ಕೇಂದ್ರಗಳು ಸ್ಥಗಿತವಾದವು. ಕೊಬ್ಬರಿ ದರವೂ 7500 ರೂಪಾಯಿಗೆ ಕುಸಿಯಿತು. ನಾಫೆಡ್ ಅಂದು ಕ್ವಿಂಟಾಲ್ ಕೊಬ್ಬರಿಯನ್ನು 11,750 ರೂಪಾಯಿಗೆ ಖರೀದಿ ಮಾಡಿದ್ದು, ಈಗ ಅದನ್ನು ಖಾಸಗಿ ಎಣ್ಣೆ ಕಂಪನಿಗಳಿಗೆ 7,500 ರೂಪಾಯಿಗೆ ಮಾರಾಟ ಮಾಡುತ್ತಿದೆ. ಅವರಿಗೆ 200 ಕೋಟಿ ರು. ನಷ್ಟವಾಗುತ್ತಿದೆ ಎಂದು ಹೇಳಿದರು.

ಜೋಡೆತ್ತುಗಳೆಂದು ಹೇಳಿಕೊಳ್ಳುವ ಬಿಎಸ್‌ವೈ-ಅಶೋಕ್ ನಡುವೆ ಹೊಂದಾಣಿಕೆ ಇಲ್ಲ: ಶಾಸಕ ಯತ್ನಾಳ್

ನಾನು ಸಹ ತೆಂಗು ಬೆಳೆಗಾರನಾಗಿದ್ದು, ಸುಮಾರು ಒಂದೂವರೆ ಲಕ್ಷ ದಷ್ಟು ಕೊಬ್ಬರಿಯನ್ನು ಒಂದೂವರೆ ವರ್ಷದಿಂದ ಮಾರಾಟ ಮಾಡಲಾಗದೆ ಇಟ್ಟಿದ್ದೇನೆ. ನನ್ನಂತಹವನಿಗೆ ಈ ಸ್ಥಿತಿಯಾದರೆ, ರೈತರ ಪಾಡೇನು ಎಂದು ಹೇಳಿದ ಅವರು, ಲಕ್ಷ ಕೋಟಿ ಬಜೆಟ್ ಮಂಡನೆ ಮಾಡುವ ಸರ್ಕಾರಗಳು ರೈತನಿಗೆ ಸಣ್ಣ ಪ್ರಮಾಣದ ಬೆಂಬಲ ಬೆಲೆ ನೀಡುವುದಕ್ಕೆ ಇಷ್ಟು ಮೀನಾಮೇಷ ಏಕೆ? ಎಂದು ತಿಳಿಸಿದರು.

click me!