ಬಾಂಬ್ ಇರುವವರ ಪರ ಇರುವವರಿಗೆ ಪಾಠ ಕಲಿಸಿ: ಮಾಜಿ ಸಚಿವ ಸಿ.ಟಿ.ರವಿ ವಾಗ್ದಾಳಿ

By Kannadaprabha NewsFirst Published Apr 14, 2024, 7:55 PM IST
Highlights

‘ಬಾಂಬ್ ಇಟ್ಟವರನ್ನು ನಮ್ಮ ಸಹೋದರರು ಎಂದು ದೇಶ ಒಡೆಯುವ ಹೇಳಿಕೆ ನೀಡುವವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸಿ.ಟಿ.ರವಿ ತೀವ್ರ ವಾಗ್ದಾಳಿ ನಡೆಸಿದರು.

ಬೇಲೂರು (ಏ.14): ‘ಬಾಂಬ್ ಇಟ್ಟವರನ್ನು ನಮ್ಮ ಸಹೋದರರು ಎಂದು ದೇಶ ಒಡೆಯುವ ಹೇಳಿಕೆ ನೀಡುವವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸಿ.ಟಿ.ರವಿ ತೀವ್ರ ವಾಗ್ದಾಳಿ ನಡೆಸಿದರು. ತಾಲೂಕಿನ ನಾಗೇನಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗೆಂಡೇಹಳ್ಳಿಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿ, ‘ಕಾಂಗ್ರೆಸ್ ಸಾಧನೆ ಏನೆಂದರೆ ೫ ಗ್ಯಾರಂಟಿಗಳನ್ನು ನೀಡಿದ್ದೇವೆ ಎಂದು ಸುಳ್ಳು ಆಶ್ವಾಸನೆ ಕೊಡುವ ಮೂಲಕ ಬಡವರನ್ನು ಕಿತ್ತುತಿನ್ನುವ ಕೆಲಸ ಮಾಡುತ್ತಿದೆ. 

ನರೇಂದ್ರ ಮೋದಿ ದೇಶದ ೧೪೦ ಕೋಟಿ ಜನತೆಯ ನಂಬಿಕೆಯ ಆಧಾರ ಸ್ಥಂಭವಾಗಿದ್ದಾರೆ. ಗ್ಯಾರಂಟಿಗಳ ಆಸೆಗಳನ್ನು ತೋರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಬಡವರಿಂದ ಒಂದು ಕಡೆ ಕಿತ್ತು ಮತ್ತೊಂದು ಕಡೆ ಕೊಟ್ಟು ಜನರ ದಾರಿ ತಪ್ಪಿಸುತ್ತ ಗ್ಯಾರಂಟಿ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಕುಟುಕಿದರು. ‘ಅವರು ಜಾತಿಗಳನ್ನು ಎತ್ತಿಕಟ್ಟಿ ಜಾತಿಗಳನ್ನು ವಿಂಗಡಿಸುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಇಟ್ಟವನ ಬಗ್ಗೆ ನನ್ನ ಬ್ರದರ್ ಎನ್ನುತ್ತಾರೆ. ಇತ್ತೀಚಿಗೆ ರಾಜ್ಯಸಭಾ ಚುನಾವಣೆಯಲ್ಲಿ ವಿಧಾನಸೌಧದೊಳಗೆ ಪಾಕಿಸ್ತಾನ ಜಿಂದಾಬಾದ್ ಎಂದಾಗ ಅವರನ್ನು ಸಮರ್ಥನೆ ಮಾಡುವ ಕೆಲಸವನ್ನು ಈ ಪಕ್ಷ ಮಾಡುತ್ತಿದೆ. 

ಇಂತಹ ನೀಚ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಲು ಎನ್‌ಡಿಎ ಮೈತ್ರಿ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣರನ್ನು ಗೆಲ್ಲಿಸಬೇಕು’ ಎಂದು ಹೇಳಿದರು. ‘ಇಲ್ಲಿ ನಾವು ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್‌ ಅನ್ನು ಸೋಲಿಸುವುದರ ಜತೆಗೆ ನಮ್ಮ ರಾಜ್ಯದ ೨೮ ಕ್ಷೇತ್ರದಲ್ಲಿ ನಾವು ಗೆಲ್ಲಲೇಬೇಕು. ಜೆಡಿಎಸ್ ಬಿಜೆಪಿಯವರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಯಾವ ಅಪಪ್ರಚಾರಕ್ಕೂ ಕಿವಿಗೊಡಬಾರದು’ ಎಂದು ಮನವಿ ಮಾಡಿದರು. ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್ ಪಕ್ಷದವರು ಅಭಿವೃದ್ಧಿ ಮಾಡಿದ್ದೇವೆ ಎಂದು ಮತ ಕೇಳಲು ನೈತಿಕತೆ ಕಳೆದುಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಮತ ಕೊಡಿ ಎಂದು ಕೇಳುವ ಇವರು ಯಾವ ಅಭಿವೃದ್ಧಿ ಮಾಡಿದ್ದಾರೆ. 

ಕುಮಾರಸ್ವಾಮಿ ಹೇಳಿಕೆಯಿಂದ ಹೆಣ್ಣು ಕುಲಕ್ಕೆ ಅಪಮಾನ: ಡಿ.ಕೆ.ಶಿವಕುಮಾರ್ ಆಕ್ರೋಶ

ನರೇಂದ್ರ ಮೋದಿ ಜಗತ್ತು ಕಂಡ ನಾಯಕರಾಗಿದ್ದು ಮತ್ತೊಮ್ಮೆ ಪ್ರಧಾನಿಯಾಗಬೇಕು ಆದ್ದರಿಂದ ಈ ಬಾರಿ ನಡೆಯುವ ಚುನಾವಣೆ ದೇಶದ ಉಳಿವಿಗಾಗಿ ನಡೆಯುತ್ತಿರುವ ಚುನಾವಣೆಯಾಗಿದೆ. ಒಂದು ವೇಳೆ ತಿಳಿಯದೆ ನಾನು ತಪ್ಪು ಮಾಡಿದ್ದರೆ ನನ್ನನ್ನು ಕ್ಷಮಿಸಿ’ಎಂದರು. ಶಾಸಕ ಎಚ್.ಕೆ.ಸುರೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೆಂದ್ರ, ರಾಷ್ಟ್ರೀಯ ತೆಂಗು ಬೆಳೆಗಾರರ ನಿರ್ದೇಶಕ ರೇಣುಕುಮಾರ್, ತಾಲೂಕು ಅಧ್ಯಕ್ಷ ತೊಚ ಅನಂತ ಸುಬ್ಬರಾವ್, ತಾಲೂಕು ಮಂಡಲ ಅಧ್ಯಕ್ಷ ಅಡಗೂರು ಆನಂದ್, ಮುಖಂಡರಾದ ಎಮ್.ಎ.ನಾಗರಾಜ್, ಸಿ.ಎಚ್.ಪ್ರಕಾಶ್, ಜಿಕೆ ಕುಮಾರ್, ಬಾಣಸವಳ್ಳಿ ಅಶ್ವಥ್, ಹೋಬಳಿ ಅಧ್ಯಕ್ಷ ಕುಮಾರ್, ನಂದಕುಮಾರ್ ಹಾಜರಿದ್ದರು.

click me!