Lok Sabha Election 2024: ಚಿಕ್ಕಬಳ್ಳಾಪುರ ಟಿಕೆಟ್‌ಗೆ ಕೈ, ಬಿಜೆಪಿಯಲ್ಲಿ ಪೈಪೋಟಿ: ಡಾ.ಸುಧಾಕರ್‌- ಅಲೋಕ್‌ ಲಾಬಿ

By Kannadaprabha NewsFirst Published Mar 18, 2024, 10:30 AM IST
Highlights

ಹೊಸ ಮತ್ತು ಹಳೇ ಅಭ್ಯರ್ಥಿಗಳ ನಡುವೆ ಲೋಕಸಭಾ ಚುನಾವಣೆಯ ಟಿಕೆಟ್ ಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಭಾರೀ ಪೈಪೋಟಿ ನಡೆದಿದೆ. ಚಿಕ್ಕಬಳ್ಳಾಪುರದ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ಭಾರಿ ಪೈಪೋಟಿ ಏರ್ಪಟ್ಟಿದ್ದರೆ, ಕಾಂಗ್ರೆಸ್‌ನಲ್ಲಿ ಒಂದು ರೀತಿ ಅಂತಿಮ ತೀರ್ಮಾನಕ್ಕೆ ಬಂದಂತಿದೆ. 

ಚಿಕ್ಕಬಳ್ಳಾಪುರ (ಮಾ.18): ಹೊಸ ಮತ್ತು ಹಳೇ ಅಭ್ಯರ್ಥಿಗಳ ನಡುವೆ ಲೋಕಸಭಾ ಚುನಾವಣೆಯ ಟಿಕೆಟ್ ಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಭಾರೀ ಪೈಪೋಟಿ ನಡೆದಿದೆ. ಚಿಕ್ಕಬಳ್ಳಾಪುರದ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ಭಾರಿ ಪೈಪೋಟಿ ಏರ್ಪಟ್ಟಿದ್ದರೆ, ಕಾಂಗ್ರೆಸ್‌ನಲ್ಲಿ ಒಂದು ರೀತಿ ಅಂತಿಮ ತೀರ್ಮಾನಕ್ಕೆ ಬಂದಂತಿದೆ. ಹೀಗಿದ್ದೂ ಕಾಂಗ್ರೆಸ್‌ ಪಾಳಯದಲ್ಲೂ ಪೈಪೋಟಿ ಇದೆ. ಎನ್‌ಡಿಎ ಅಂಗಪಕ್ಷ ಜೆಡಿಎಸ್‌ಗೆ ಈ ಕ್ಷೇತ್ರ ಹಂಚಿಕೆಯಾಗುವ ಸಾಧ್ಯತೆಯಿಲ್ಲ. ಮಾಜಿ ಸಚಿವ ಡಾ ಕೆ ಸುಧಾಕರ್‌ ಕ್ಷೇತ್ರದ ಬಿಜೆಪಿ ಟಿಕೆಟ್‌ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಎಂ.ಎಸ್. ರಕ್ಷಾ ರಾಮಯ್ಯ ಕಣಕ್ಕಿಳಿಯುವುದು ಬಹುತೇಕ ನಿಚ್ಚಳವಾಗಿದೆ.

ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧೆ: ಚಿಕ್ಕಬಳ್ಳಾಪುರದ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ಭಾರಿ ಪೈಪೋಟಿ ಏರ್ಪಟ್ಟಿದೆ. ಎನ್‌ಡಿಎ ಅಂಗಪಕ್ಷ ಜೆಡಿಎಸ್‌ಗೆ ಈ ಕ್ಷೇತ್ರ ಹಂಚಿಕೆಯಾಗುವ ಸಾಧ್ಯತೆ ಕಡಿಮೆ, ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆಯೇ ಇಲ್ಲಿ ಹೋರಾಟ ನಡೆಯಲಿದೆ. ಬಿಜೆಪಿಯ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಗಳಾಗಿರುವ ಮಾಜಿ ಸಚಿವ ಡಾ.ಕೆ. ಸುಧಾಕರ್‌ ಮತ್ತು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ನಡುವೆ ಪೈಪೋಟಿ ನಡೆದಿದೆ. ಎಐವೈಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಕ್ಷಾ ರಾಮಯ್ಯ, ಮಾಜಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಮತ್ತು ಮಾಜಿ ಸಚಿವ ಎನ್.ಹೆಚ್ .ಶಿವಶಂಕರರೆಡ್ಡಿ ಕಾಂಗ್ರೆಸ್ ನ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆದರೂ ಕಾಂಗ್ರೆಸ್‌ನಲ್ಲಿ ಒಂದು ರೀತಿ ಸೆಟ್ಲ್‌ ಆದಂತಿದೆ. ಈ ಭಾಗದಲ್ಲಿ ಜೆಡಿಎಸ್‌ ಮತಗಳಿರುವುದರಿಂದ ಬಿಜೆಪಿ ಅಭ್ಯರ್ಥಿಗೆ ಬೆಂಬಲದ ನಿರೀಕ್ಷೆ ಸಹಜ.

ಇನ್ಸ್ಟಾಗ್ರಾಂ ಮೂಲಕ ಲವ್: ಮದುವೆ ಆಗದಿದ್ದರೆ ಬಿಲ್ಡಿಂಗ್ ಮೇಲಿಂದ ಬಿದ್ದು ಸಾಯ್ತೀನಿ ಎಂದ ಮಹಿಳೆ!

ಮಾಜಿ ಸಚಿವ ಡಾ.ಸುಧಾಕರ್‌ ಆಕಾಂಕ್ಷಿ: ಮಾಜಿ ಸಚಿವ ಡಾ.ಕೆ.ಸುಧಾಕರ್‌ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ. 2013, 2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಶಾಸಕರಾಗಿ 2019ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಂದು ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರಲ್ಲಿ ಇವರು ಪ್ರಮುಖರು. ಬಳಿಕ 2019ರ ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾಗಿ ಪ್ರಭಾವ ಬೆಳೆಸಿಕೊಂಡಿದ್ದರು. ಹೈಕಮಾಂಡ್‌ಗೂ ನಿಕಟವರ್ತಿಯಾಗಿದ್ದರು. ರಾಜ್ಯದ ಕೋವಿಡ್‌ ನಿರ್ವಹಣೆ ಬಗ್ಗೆ ಕೇಂದ್ರ ಮೆಚ್ಚುಗೆ ವ್ಯಕ್ತಪಡಿಸಿತ್ತು. ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಅಭಿವೃದ್ಧಿ ಯೋಜನೆ ಕೊಂಡೊಯ್ಯಲಾಗಿತ್ತು ಎನ್ನುವುದು ಡಾ ಕೆ ಸುಧಾಕರ್‌ ವಿಶ್ವಾಸ. ಹಾಗಿದ್ದರೂ ಕಾಂಗ್ರೆಸ್‌ನ ವಿಶೇಷ ರಣತಂತ್ರ ಸುಧಾಕರ್‌ ಅವರನ್ನು ವಿಧಾನಸಭೆ ಚುನಾವಣೆಯಲ್ಲಿ ಮಣಿಸಿತ್ತು.

ಶಾಸಕ ವಿಶ್ವನಾಥ್‌ ಅಡ್ಡಿ: ಲೋಕಸಭೆ ಚುನಾವಣೆ ಟಿಕೆಟ್‌ಗೆ ಡಾ.ಕೆ. ಸುಧಾಕರ್ ಬೇಡಿಕೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ಆಪ್ತರಾಗಿರುವ ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಅವರ ಪುತ್ರ ಅಲೋಕ್‌ ಕೂಡ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿ. ಪುತ್ರನಿಗೆ ಟಿಕೆಟ್‌ ಕೊಡಿಸಲು ವಿಶ್ವನಾಥ್‌ ಎಲ್ಲ ರೀತಿಯ ಶ್ರಮ ಹಾಕುತ್ತಿದ್ದಾರೆ. ತಮಗೆ ಅವಕಾಶ ನೀಡಿದರೆ ಈ ಭಾಗದ 2 ರಿಂದ 3 ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆಗೆ ಅನುಕೂಲವೆಂದು ಹೇಳುತ್ತಿದ್ದಾರೆ. ಹಾಗಾಗಿ ಹೈಕಮಾಂಡ್‌ ನಿರ್ಧಾರದ ಬಗ್ಗೆ ತೀವ್ರ ಕುತೂಹಲವಿದೆ.

ಶುಭಸುದ್ದಿ: ಮುಂದಿನ 3 ದಿನಗಳಲ್ಲಿ ಕರ್ನಾಟಕದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ ಸಂಭವ!

ರಕ್ಷಾ ರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿ: ಕಾಂಗ್ರೆಸ್‌ನಲ್ಲಿ ಈ ಬಾರಿ 50 ವರ್ಷದೊಳಗಿನ ಹೊಸಬರಿಗೆ ಟಿಕೆಟ್ ನೀಡಬೇಕೆಂಬ ರಾಹುಲ್ ಗಾಂಧಿ ನಿರ್ಣಯದಂತೆ ಈ ಬಾರಿಗೆ ಎಂ.ಎಸ್. ರಕ್ಷಾ ರಾಮಯ್ಯ ಹೆಸರು ಬಹುತೇಕ ಅಂತಿಮಗೊಂಡಿದೆ. ಮಾಜಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ಸಹ ಇಲ್ಲಿ ಕಾಂಗ್ರೆಸ್‌ನ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಹಾಗೂ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರೂ ಆಗಿ, ಕಳೆದ ಬಾರಿ ಪರಾಭವಗೊಂಡಿದ್ದ ಡಾ.ಎಂ.ವೀರಪ್ಪ ಮೊಯ್ಲಿ ಅವರೂ ಸ್ಪರ್ಧಿಸಲು ಬಯಸಿದ್ದಾರೆ. ರಕ್ಷಾ ರಾಮಯ್ಯ ಹಾಗೂ ಮೊಯ್ಲಿ ಬೆಂಬಲಿಗರ ನಡುವೆ ಟಿಕೆಟ್‌ ಗಲಾಟೆಯೂ ಜೋರಾಗಿ ನಡೆದಿತ್ತು. ಆದರೆ ರಕ್ಷಾ ರಾಮಯ್ಯ ಅಂತಿಮ ನಗು ಬೀರಿದಂತೆ ಕಾಣಿಸುತ್ತಿದೆ.

click me!