
ಹಾಸನ (ಜ.10): ಎ.ಟಿ.ರಾಮಸ್ವಾಮಿ ಅವರು ಪಾಪ ಬಹಳ ತತ್ವಾದಾರಿತ ನಡವಳಿಕೆಯಲ್ಲಿ ಬಂದ ಗೌರವಾನ್ವಿತ ವ್ಯಕ್ತಿ. ಅವರೀಗ ರೇವಣ್ಣ ಕುಟುಂಬದ ಬಗ್ಗೆ ಭಾರಿ ಆರೋಪ ಮಾಡಿದ್ದಾರೆ. ರೇವಣ್ಣ ಕುಟುಂಬ ಆ ರೀತಿ ಏನಾದರೂ ತಪ್ಪು ಮಾಡಿದ್ದರೆ ಸೂಕ್ತ ತನಿಖೆ ಆಗಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಹಾಸನ ಮಾರ್ಗವಾಗಿ ಚಿಕ್ಕಮಗಳೂರಿಗೆ ತೆರಳುವ ಮಾರ್ಗಮಧ್ಯೆ ನಗರದ ಬೈಪಾಸಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಾಪ ಅವರ ಒತ್ತಾಯ ಏನಿದೆ, ರೇವಣ್ಣ ಕುಟುಂಬದ ಬಗ್ಗೆ ಸರ್ಕಾರ ತನಿಖೆ ನಡೆಸಲಿ. ವಾಸ್ತವಾಂಶ ಏನಿದೆ ಎನ್ನುವುದನ್ನು ಅವರು ಸರ್ಕಾರಕ್ಕೆ ತಿಳಿಸಲಿ. ರೇವಣ್ಣ ಕುಟುಂಬದಿಂದ ತಪ್ಫಾಗಿದ್ದರೆ ಏನು ಕ್ರಮ ಬೇಕೊ ಅದನ್ನು ಸರ್ಕಾರ ತೆಗೆದುಕೊಳ್ಳಲಿ. ಅದನ್ನು ಬಿಟ್ಟು ರಾಜಕೀಯ ಲಾಭ ತೆಗೆದುಕೊಳ್ಳುವ ಪ್ರಯತ್ನ ಬೇಡ. ಈಗ ಆರೋಪ ಮಾಡ್ತಿರುವ ವ್ಯಕ್ತಿ ಆಗ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಏಕೆ ಹೇಳಲಿಲ್ಲ. ಇಷ್ಟು ದಿನ ಯಾಕೆ ಸುಮ್ಮನಿದ್ದ? ಅವನನ್ನು ಮಾಧ್ಯಮದ ಮುಂದೆ ಹೋಗಲು ತಡೆದಿದ್ದವರು ಯಾರು? ಇಷ್ಟು ದಿನ ಯಾಕೆ ಮೌನವಾಗಿ ಇದ್ದರು ಎಂದು ಪ್ರಶ್ನಿಸಿದರು.
ಡೈರಿ ಮಿಲ್ಕ್ ಚಾಕಲೇಟ್ ನೀಡಿಕೆ: ಅನ್ಯ ಕೋಮಿನ ಯುವಕನ ಮೇಲೆ ಹಲ್ಲೆ, ದೂರು ಪ್ರತಿ ದೂರು ದಾಖಲು
‘ನಮ್ಮ ಕುಟುಂಬದಲ್ಲಿ ಅಧಿಕಾರದ ದುರುಪಯೋಗ ಆಗಿ ಅಕ್ರಮ ಆಗಿದ್ದರೆ ಯಾವುದೇ ರೀತಿಯ ತನಿಖೆಗೆ ಆದೇಶ ಮಾಡಲಿ. ಬೇನಾಮಿ ಆಸ್ತಿ ಬಗ್ಗೆ ದಾಖಲೆ ಇದ್ದರೆ ಸಂಬಂಧಪಟ್ಟ ಇಲಾಖೆಗೆ ಕೊಟ್ಟು ತನಿಖೆ ಮಾಡಿಸಲಿ. ರಾಮಸ್ವಾಮಿ ಅವರನ್ನು ನನ್ನ ಕಾಲದಲ್ಲೆ ಸದನ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದೆ. ಅವರಿಗೆ ಬಹಳ ಅನುಭವ ಇದೆ. ಹಾಗಾಗಿ ಅವರ ಬಳಿಯೇ ಮಾಹಿತಿ ಇದ್ದರೆ ಮಾಹಿತಿ ಕೊಡಲು ಹೇಳಿ’ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಡಿಕೆಶಿಗೆ ಟಾಂಗ್: ‘ಮಂತ್ರಾಕ್ಷತೆಗೆ ಬಳಸುವ ಅಕ್ಕಿಯ ಬಗ್ಗೆ ರಾಜ್ಯದ ಉಪಮುಖ್ಯಂತ್ರಿಗಳ ಬಾಲಿಶ ಹೇಳಿಕೆ ಇದೆಯಲ್ಲಾ ಅದಕ್ಕೆ ಉತ್ತರ ಕೊಡಬೇಕಾದ ಅನಾವಶ್ಯಕತೆ ಇಲ್ಲ. ಅನ್ನಭಾಗ್ಯ ಅಕ್ಕಿ ಅಂತ ಹೇಳಿದ್ದಾರೆ. ಈ ಸರ್ಕಾರ ಹತ್ತು ಕೆಜಿ ಅಕ್ಕಿ ಕೊಡ್ತೀನಿ ಅಂದ್ರು, ನುಡಿದಂತೆ ನಡೆಯಬೇಕಿತ್ತು. ಈ ಕ್ಷಣದವರೆಗೂ ಅಕ್ಕಿಯನ್ನು ಕೊಡಲು ಆಗಿಲ್ಲ. ಪ್ರತಿ ತಿಂಗಳು ಹತ್ತು ಕೆಜಿ ಎಲ್ಲಿ ಕೊಟ್ಟಿದ್ದಾರೆ. ಮಂತ್ರಾಕ್ಷತೆ ಮಾಡಿರುವ ಅಕ್ಕಿಯನ್ನು ಬೆಳೆದಿರುವನು ರೈತ. ಕೃಷಿಕರು ಬೆಳೆದಿರುವ ಆ ಅಕ್ಕಿಯನ್ನು ಮಂತ್ರಾಕ್ಷತೆ ಮಾಡಿ ಮನೆ ಮನೆಗೆ ಕೊಡುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಅದರ ಬಗ್ಗೆ ಈ ರೀತಿ ಸಣ್ಣತನದಲ್ಲಿ ಮಾತನಾಡುವುದು ಅನಾವಶ್ಯಕ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕೆಗೆ ತಿರುಗೇಟು ನೀಡಿದರು.
ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ: ‘ನಮ್ಮ ದೇಶದ ಸಂವಿಧಾನ ವ್ಯವಸ್ಥೆಯಲ್ಲಿ ಯಾವುದೇ ಒಂದು ವಿಷಯಗಳನ್ನು ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶ ಇದೆ. ಪ್ರತಿಭಟನೆ ಮಾಡಬಾರದು ಅಂತ ಇದೆಯಾ...?’ ಎನ್ನುವ ಮೂಲಕ ಕರಸೇವಕರ ಬಂಧನಕ್ಕೆ ಎಚ್ಡಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಕಾನೂನು ಬಾಹಿರವಾಗಿ ಪ್ರತಿಭಟನೆ ಮಾಡಿದ್ದರೆ ಕೇಸ್ ಹಾಕಲಿ. ಈ ಸರ್ಕಾರ ನಾವು ಸಂವಿಧಾನದ ರಕ್ಷಕರು ಅಂತ ಜಾಗಟೆ ಹೊಡಿತಾರಲ್ಲ ಈ ರೀತಿ ಕೇಸ್ ಹಾಕುವುದರಿಂದ ಯಾವ ರೀತಿ ಸಂವಿಧಾನ ರಕ್ಷಣೆ ಮಾಡ್ತಾರೆ, ಅದ್ಯಾವ ಆಧಾರದ ಮೇಲೆ ಕೇಸ್ ಹಾಕಿದ್ದಾರೋ ಗೊತ್ತಿಲ್ಲ’ ಎಂದರು.
ಡಿಸಿ ಕಛೇರಿಯ ಮಹಾತ್ಮ ಗಾಂಧಿ ಪ್ರತಿಮೆಗೆ ಮನವಿ ಕೊಟ್ಟ ರೈತ ಮುಖಂಡ!
ಮಂಡ್ಯ ಸಂಸದೆ ಸುಮಲತಾ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ‘ಯಾರನ್ನು ಬೇಕಾದರೂ ಭೇಟಿ ಮಾಡಿ ಚರ್ಚೆ ಮಾಡ್ತೀನಿ ಅಂತ ಹೇಳಿದ್ದೀನಿ. ಮುಂದಿನ ಚುನಾವಣೆ ದೃಷ್ಟಿಯಿಂದ, ಬಿಜೆಪಿ-ಜೆಡಿಎಸ್ ಮೈತ್ರಿ ಇದೆ. ಅದಕ್ಕೆ ಸಂಬಂಧಪಟ್ಟಂತೆ ಬಿಜೆಪಿಯಲ್ಲಿ ಇರುವ ಯಾರನ್ನು ಬೇಕಾದರೂ ಭೇಟಿ ಮಾಡಿ ಚರ್ಚೆ ಮಾಡ್ತೀನಿ. ಎಲ್ಲಾ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುವ ದೃಷ್ಟಿಯಿಂದ ನಾನು ಯಾರನ್ನು ಬೇಕಾದರೂ ಭೇಟಿ ಮಾಡಲು ತಯಾರಾಗಿದ್ದೇನೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.