ಬಿಎಸ್‌ವೈ ಪರ ಇಂದು 1,000 ಸ್ವಾಮೀಜಿಗಳ ಶಕ್ತಿ ಪ್ರದರ್ಶನ!

By Kannadaprabha NewsFirst Published Jul 25, 2021, 7:21 AM IST
Highlights

* ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸುವಂತೆ ಒತ್ತಾಯಿಸಿ ಶಕ್ತಿ ಪ್ರದರ್ಶನ

* ಬೆಂಗಳೂರಿನ ಅರಮನೆ ಮೈದಾನದ ಸಭಾಂಗಣವೊಂದರಲ್ಲಿ ಸಮಾವೇಶ

* ನಾಡಿನ ಎಲ್ಲ ಸಮುದಾಯಗಳ ಸ್ವಾಮೀಜಿಗಳು ಭಾಗಿ

ಬೆಂಗಳೂರು(ಜು.25): ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸುವಂತೆ ಒತ್ತಾಯಿಸಿ ವಿವಿಧ ಮಠಾಧೀಶರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಭಾನುವಾರ ಬೆಂಗಳೂರಿನ ಅರಮನೆ ಮೈದಾನದ ಸಭಾಂಗಣವೊಂದರಲ್ಲಿ ಸಮಾವೇಶ ನಡೆಯಲಿದ್ದು, ನಾಡಿನ ಎಲ್ಲ ಸಮುದಾಯಗಳ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

ಸಮಾವೇಶದಲ್ಲಿ ಒಂದು ಸಾವಿರ ಮಠಾಧೀಶರು ಭಾಗವಹಿಸುವ ನಿರೀಕ್ಷೆ ಇದೆ. ಬೆಳಗ್ಗೆಯಿಂದಲೇ ಸಮಾವೇಶ ನಡೆಯಲಿದೆ. ಸದ್ಯಕ್ಕೆ ಯಾವುದೇ ಕಾರ್ಯಸೂಚಿ ರೂಪಿಸಿಲ್ಲ. ಎಲ್ಲ ಮಠಾಧೀಶರು ಸೇರಿಯೇ ಚರ್ಚೆ ನಡೆಸುತ್ತೇವೆ. ಇದರಲ್ಲಿ ಯಡಿಯೂರಪ್ಪ ಅವರ ರಾಜೀನಾಮೆ ವಿಚಾರ ಬರಬಹುದು, ಬರದೇ ಇರಬಹುದು. ಸಮಾವೇಶಕ್ಕೆ ಸಾರ್ವಜನಿಕರು ಹಾಗೂ ರಾಜಕಾರಣಿಗಳಿಗೆ ಪ್ರವೇಶ ಇರುವುದಿಲ್ಲ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಯಡಿಯೂರಪ್ಪ ಅವರನ್ನು ಮುಂದುವರಿಸಬೇಕೆ ಬೇಡವೆ ಎಂಬುದು ಪಕ್ಷಕ್ಕೆ ಬಿಟ್ಟತೀರ್ಮಾನ. ಪ್ರಸ್ತುತ ವಿದ್ಯಮಾನಗಳ ಕುರಿತು ಚರ್ಚಿಸುತ್ತೇವೆ. ಸಮಾಜದಲ್ಲಿ ಸಂಕಷ್ಟಎದುರಾದಾಗ, ಅನ್ಯಾಯ ಎದುರಾದಾಗ ಸನ್ಯಾಸಿಗಳು ಮಧ್ಯಪ್ರವೇಶಿಸುವುದು ಹೊಸದಲ್ಲ. ವೇದಗಳು, ರಾಮಾಯಣ, ಮಹಾಭಾರತ, ದಾಸ, ಶರಣರ ಕಾಲದಲ್ಲೂ ಇದು ನಡೆದಿತ್ತು. ಈಗಲೂ ನಡೆದಿದ್ದು, ತಪ್ಪೇನೂ ಇಲ್ಲ ಎಂದು ತಮ್ಮ ನಿಲುವು ಸಮರ್ಥಿಸಿಕೊಂಡಿದ್ದಾರೆ.

click me!