
ನವದೆಹಲಿ (ಜು.30): ‘ಕರ್ನಾಟಕದಲ್ಲಿ 20 ಲಕ್ಷ ಆರ್ಎಸ್ಎಸ್ ಸ್ವಯಂಸೇವಕರು ಕೈಯಲ್ಲಿ ಲಾಠಿ ಹಿಡಿದು, ಸಮವಸ್ತ್ರ ತೊಟ್ಟು ಬೀದಿ ಬೀದಿ ಸುತ್ತುತ್ತಿದ್ದಾರೆ. ಅವರಿಗೆ ಗೃಹ ಇಲಾಖೆ ಭದ್ರತೆ ನೀಡಬೇಕೆಂದರೆ, ಮೊದಲು ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅವರಿಂದ ಹೇಗೆ ಉತ್ತರ ಪಡೆಯಬೇಕೆಂಬುದು ನನಗೆ ಗೊತ್ತಿದೆ’ ಎಂದು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ ಖರ್ಗೆ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನನ್ನ ರಾಜ್ಯದಲ್ಲಿ 20 ಲಕ್ಷ ಜನ ಲಾಠಿ ಹಿಡಿದು ರಸ್ತೆ ರಸ್ತೆಯಲ್ಲಿ ತಿರುಗುತ್ತಿದ್ದಾರೆ. ಅವರಿಗೆ ಗೃಹ ಇಲಾಖೆ ಭದ್ರತೆ ನೀಡಬೇಕು ಎಂದು ನಿರೀಕ್ಷಿಸಿದರೆ, ಅವರು ಯಾರು ಎಂಬುದನ್ನು ನನಗೆ ತಿಳಿಸಬೇಕು. ಅವರು ಯಾವುದೇ ಕಾನೂನುಬಾಹಿರ ಕೃತ್ಯ ಮಾಡಿದರೂ ನೆಲದ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುತ್ತದೆ. ಮೊದಲು ಆರ್ಎಸ್ಎಸ್ ನೋಂದಣಿ ಮಾಡಿಕೊಳ್ಳಬೇಕು’ ಎಂದು ಪುನರುಚ್ಚರಿಸಿದರು.
‘ಸರ್ಕಾರ ಮತ್ತು ಗೃಹ ಇಲಾಖೆ ಯಾವ ಸಂಘಟನೆಯ ಸೇವಕನೂ ಅಲ್ಲ. ಮೊದಲು ಆರ್ಎಸ್ಎಸ್ ನೋಂದಣಿ ಮಾಡಿಕೊಳ್ಳಲಿ. ಅವರು ಯಾರು, ಏನು ಮಾಡುತ್ತಿದ್ದಾರೆ ಎಂಬುದನ್ನು ನಮಗೆ ತಿಳಿಸಲಿ. ಹೊಣೆಗಾರಿಕೆ ನೀಡಲಿ. ಆಮೇಲೆ ನಾವು ಅವರಿಗೆ ಸಹಾಯ ಮಾಡುತ್ತೇವೆ. ಅವರು ಉತ್ತರ ಕೊಡುವುದಿಲ್ಲ ಎಂದು ನನಗೆ ಗೊತ್ತಿದೆ. ಏಕೆಂದರೆ ಅವರು ಹೇಡಿಗಳು. ಅವರಿಂದ ಹೇಗೆ ಉತ್ತರ ಪಡೆಯಬೇಕೆಂಬುದು ನನಗೆ ಗೊತ್ತಿದೆ. ನಾನು ದೇಶದ ಅತ್ಯಂತ ಅಭಿವೃದ್ಧಿಶೀಲ ರಾಜ್ಯವೊಂದರ ಗೃಹ ಸಚಿವ. ಏನು ಮಾಡಬೇಕೆಂಬುದು ನನಗೆ ತಿಳಿದಿದೆ’ ಎಂದು ಎಚ್ಚರಿಸಿದರು.
‘ಆರ್ಎಸ್ಎಸ್ ಸಿದ್ಧಾಂತ ಅಷ್ಟೊಂದು ಉತ್ತಮವಾಗಿದ್ದರೆ, ಏಕೆ ಬಿಜೆಪಿಗರ ಮಕ್ಕಳು ಆರ್ಎಸ್ಎಸ್ನಲ್ಲಿಲ್ಲ? ಸ್ವಯಂಸೇವಕರಾಗಿಲ್ಲ? ಶಾಖೆಗೆ ಹೋಗುವುದಿಲ್ಲ? ಗೋಮೂತ್ರ ಕುಡಿಯುವುದಿಲ್ಲ? ಈ ಚಿಂತನಾ ಕ್ರಮದ ವಿರುದ್ಧವೇ ನಾವು ಹೋರಾಡುತ್ತಿರುವುದು’ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.