ಕರ್ನಾಟಕ ಸಂಕಷ್ಟಕ್ಕೆ ಸರ್ವಪಕ್ಷ ಒಗ್ಗಟ್ಟು - ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಕಂಪ್ಲೀಟ್ ಮಾಹಿತಿ

Published : Aug 02, 2026, 03:28 PM IST
dk shivakumar yadiyurapp siddaramaiah in alla party meeting

ಸಾರಾಂಶ

ಕಾವೇರಿ ನೀರು ಹಂಚಿಕೆ ಕುರಿತ ಸರ್ವಪಕ್ಷ ಸಭೆಯಲ್ಲಿ ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದ್ದು, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ, ಕಾನೂನು ಹೋರಾಟವನ್ನು ಜಾಗರೂಕತೆಯಿಂದ ಮುಂದುವರಿಸಲು ಎಲ್ಲಾ ಪಕ್ಷಗಳು ಸಮ್ಮತಿಸಿವೆ.

ಬೆಂಗಳೂರು: ಇಡೀ ರಾಜ್ಯದ ಗಮನ ಸೆಳೆಯುತ್ತಿದ್ದ ಕಾವೇರಿ ನೀರು ಹಂಚಿಕೆ ಕುರಿತಾದ 'ಸರ್ವಪಕ್ಷ ಸಭೆ' ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ರಾಜ್ಯದ ಹಿತಾಸಕ್ತಿ ಕಾಯುವಲ್ಲಿ ಯಾವುದೇ ರಾಜಿ ಇಲ್ಲ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ.

ನಾವೂ ರೈತ ಮಕ್ಕಳೇ; ಅನ್ಯಾಯಕ್ಕೆ ಅವಕಾಶವಿಲ್ಲ!

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನಾನು ಈ ರಾಜ್ಯದಲ್ಲಿ ಜವಾಬ್ದಾರಿ ವಹಿಸಿಕೊಂಡು ಎರಡು ತಿಂಗಳಾಗಿದೆ. ನಾನು ಕಾವೇರಿ ಕಣಿವೆಯಲ್ಲೇ ಹುಟ್ಟಿ ಬೆಳೆದವನು, ರೈತನ ಮಗನಾಗಿ ಮಣ್ಣಿನಲ್ಲಿ ಕೆಲಸ ಮಾಡಿ ಬಂದವನು. ಹೀಗಾಗಿ ರಾಜ್ಯದ ಜನರ ಹಾಗೂ ರೈತರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಜನರಿಗೆ ಯಾವುದೇ ಅನುಮಾನ ಬೇಡ ಎಂದು ಭರವಸೆ ನೀಡಿದರು. ರಾಜ್ಯದ ಹಿತ ಕಾಪಾಡುವಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಿವೆ ಎಂದು ವಿರೋಧ ಪಕ್ಷಗಳನ್ನು ಶ್ಲಾಘಿಸಿದರು.

 

ಜಲಾಶಯಗಳ ಇಂದಿನ ಸ್ಥಿತಿಗತಿ ಹಾಗೂ ನೀರಿನ ಲೆಕ್ಕಾಚಾರ

ರಾಜ್ಯದಲ್ಲಿ ಬರಗಾಲದ ಛಾಯೆ ಇದ್ದರೂ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಡ್ಯಾಂಗಳಲ್ಲಿ ನೀರಿನ ಒಳಹರಿವು ಸುಧಾರಿಸಿದೆ. ಅದರ ಅಂಕಿಅಂಶಗಳು ಹೀಗಿವೆ.

  • ಕಬಿನಿ: 24,000 ಕ್ಯೂಸೆಕ್ ಒಳಹರಿವು (ಜಲಾಶಯ ಸಂಪೂರ್ಣ ಭರ್ತಿಯಾಗಿದೆ).
  • ಕೆಆರ್‌ಎಸ್: 22,000 ಕ್ಯೂಸೆಕ್ ಒಳಹರಿವು.
  • ಒಟ್ಟು ಒಳಹರಿವು: ಹಾರಂಗಿ, ಹೇಮಾವತಿ ಸೇರಿದಂತೆ ಒಟ್ಟು 67,368 ಕ್ಯೂಸೆಕ್ ಒಳಹರಿವು ಇದೆ.
  • ಪ್ರಸ್ತುತ ಲಭ್ಯತೆ: ಒಟ್ಟು 57 ಟಿಎಂಸಿ ನೀರು ಲಭ್ಯವಿದ್ದು, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗಿದೆ.

ತಮಿಳುನಾಡು ಸರ್ಕಾರವು ಜುಲೈನಲ್ಲಿ 40 ಟಿಎಂಸಿ ನೀರಿಗಾಗಿ ವಾದಿಸಿತ್ತು. ಆದರೆ ನಾವು ಕೇವಲ 0.7 ಟಿಎಂಸಿ ಬಿಟ್ಟಿದ್ದೇವೆ. ಆಗಸ್ಟ್‌ನಲ್ಲಿ 9.90 ಟಿಎಂಸಿ ಬಿಡಬೇಕಿದ್ದ ಜಾಗದಲ್ಲಿ ಕೇವಲ 2.9 ಟಿಎಂಸಿ ಬಿಟ್ಟಿದ್ದೇವೆ. ಈಗ ಕಬಿನಿ ಭರ್ತಿಯಾಗಿರುವುದರಿಂದ ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.

ಸರ್ವಪಕ್ಷಗಳ ಒಮ್ಮತದ ಬೆಂಬಲ

ಈ ಸಭೆಯಲ್ಲಿ ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಅಮೂಲ್ಯ ಸಲಹೆ ನೀಡಿದ್ದಾರೆ. ಎಲ್ಲಾ ಸಂಸತ್ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕರು ಸರ್ಕಾರದ ತೀರ್ಮಾನಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಸಿಎಂ ತಿಳಿಸಿದರು. ಅನಾರೋಗ್ಯದ ಕಾರಣ ಬರಲು ಸಾಧ್ಯವಾಗದಿದ್ದರೂ ದೇವೇಗೌಡರು ತಮ್ಮ ಬೆಂಬಲ ಸೂಚಿಸಿದ್ದಕ್ಕೆ ಧನ್ಯವಾದ ಅರ್ಪಿಸಿದರು.

'ಬಂದ್' ಕೈಬಿಡಲು ಸಂಘಟನೆಗಳಿಗೆ ಮನವಿ

ಕಾವೇರಿ ವಿಚಾರವಾಗಿ ಕೆಲವು ಸಂಘಟನೆಗಳು ಬಂದ್‌ಗೆ ಕರೆ ನೀಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಸರ್ಕಾರ, ಪ್ರಕೃತಿ ಮತ್ತು ಸರ್ಕಾರ ನಿಮ್ಮ ಪರವಾಗಿದೆ. ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲದ ಕಾರಣ ಅನಿವಾರ್ಯವಾಗಿ ಹರಿಯುವ ನೀರನ್ನು ಬಿಡಲಾಗುತ್ತಿದೆ. ರೈತರ ಹಿತ ಕಾಯಲು ನಾವು ಬದ್ಧರಾಗಿರುವುದರಿಂದ ಬಂದ್ ಕೈಬಿಡಿ ಎಂದು ಮನವಿ ಮಾಡಿದರು. ತಮಿಳುನಾಡಿನ ಡಿಎಂಕೆ ಪಕ್ಷವು ಖಾಸಗಿಯಾಗಿ ಸುಪ್ರೀಂಕೋರ್ಟ್‌ಗೆ ಹೋಗಿದೆ, ಆದರೆ ಖಾಸಗಿ ಅರ್ಜಿಗಳಿಗೆ ಮಾನ್ಯತೆ ಕಡಿಮೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬರಗಾಲ ಘೋಷಣೆ ಹಾಗೂ ಮೇಕೆದಾಟು

ಆಗಸ್ಟ್ ಕೊನೆಯ ವೇಳೆಗೆ ಮಾಹಿತಿ ಪಡೆದು ವಾಸ್ತವಾಂಶದ ಆಧಾರದ ಮೇಲೆ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗುವುದು. ಮೇಕೆದಾಟು ಯೋಜನೆ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ಮಾಜಿ ಸಿಎಂ ಬೊಮ್ಮಾಯಿ ಸೇರಿದಂತೆ ಎಲ್ಲರೂ ಒಪ್ಪಿದ್ದಾರೆ ಕೇಂದ್ರ ಕೇಳಿರುವ ಸ್ಪಷ್ಟನೆಗಳನ್ನು ಸರಿಪಡಿಸಿ ಡಿಪಿಆರ್ (DPR) ಕಳುಹಿಸಲಾಗುವುದು.

ಪ್ರಧಾನಿ ಭೇಟಿಗೆ ಕಾಲಾವಕಾಶ

ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಲು ಡಿಕೆ ಶಿವಕುಮಾರ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಸಮಯ ಕೇಳಿದ್ದಾರೆ. ಪಾರ್ಲಿಮೆಂಟ್ ಮುಗಿದ ನಂತರ ಪ್ರಧಾನಿಗಳು ಸಮಯ ಕೊಡುವ ಭರವಸೆ ನೀಡಿದ್ದು, ರಾಜ್ಯದ ಪರವಾಗಿ ನಿಯೋಗ ತೆರಳಿ ವಾಸ್ತವಾಂಶವನ್ನು ಮನವರಿಕೆ ಮಾಡಿಕೊಡಲಿದೆ. ಒಟ್ಟಾರೆ ರಾಜ್ಯ ಸರ್ಕಾರವು ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ, ರೈತರ ಬೆಳೆಗಳನ್ನು ರಕ್ಷಿಸಲು ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಿದೆ. ಕಾನೂನಾತ್ಮಕವಾಗಿ CWRC ಸಭೆಗಳಲ್ಲಿ ಜಾಗರೂಕತೆಯಿಂದ ಹೆಜ್ಜೆ ಇಡಲು ಸರ್ವಪಕ್ಷಗಳು ಸಮ್ಮತಿಸಿವೆ.

ಸಭೆಯಲ್ಲಿ ಉಪಸ್ಥಿತರಿದ್ದ ಪ್ರಮುಖರು

ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿಗಳಾದ ಡಾ. ಜಿ.ಪರಮೇಶ್ವರ, ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ನವದೆಹಲಿಯ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಸಂಸತ್ ಸದಸ್ಯ ಶ್ರೀ ಗೋವಿಂದ ಕಾರಜೋಳ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಹೆಚ್.ಕೆ.ಪಾಟೀಲ್, ಬಿ.ಕೆ.ಹರಿಪ್ರಸಾದ್, ನಿವೃತ್ತ ನ್ಯಾಯಾಧೀಶರಾದ ನಾಗಮೋಹನದಾಸ್, ಅಡ್ವೋಕೇಟ್‌ ಜನರಲ್ ಶಶಿಕಿರಣ್ ಶೆಟ್ಟಿ, ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಅವ್ರು ಮಗಳ ಬ್ರೈನ್​ವಾಷ್​ ಮಾಡಿದ್ರು, ನೀವು ಜೀವದಾನ ಕೊಟ್ರಿ': ಪ್ರಧಾನಿಯನ್ನು ನಿಂದಿಸಿದ್ದ ಬಾಲಕಿ ಅಮ್ಮನಿಂದ ಸಂದೇಶ
12 ವರ್ಷಗಳಾದರೂ ಮೋದಿ ಸರ್ವಾಧಿಕಾರಿಯಾಗಲು ಕಲಿಯಲಿಲ್ಲ! ನೆಹರೂ ಇಂದಿರಾಗಾಂಧಿಯಿಂದ ಕಲಿಯಿರಿ: ಪ್ರಧಾನಿಗೆ ಪೂನವಾಲಾ ಪಾಠ!