
ಬೆಂಗಳೂರು: ರಾಜ್ಯ ಸರ್ಕಾರವು ಪ್ರಮುಖ ರಾಜಕೀಯ ನಾಯಕರಿಗೆ ನೀಡಲಾಗಿದ್ದ ಭದ್ರತಾ ಸಿಬ್ಬಂದಿ ವ್ಯವಸ್ಥೆಯಲ್ಲಿ ಪರಿಷ್ಕರಣೆ ನಡೆಸಿದೆ. ಈ ಕ್ರಮದ ಹಿನ್ನೆಲೆಯಲ್ಲಿ, ಬಿಜೆಪಿ ನಾಯಕರ ಭದ್ರತೆ ಕಡಿತಗೊಂಡಿದ್ದು, ಅದೇ ವೇಳೆ ಕಾಂಗ್ರೆಸ್ ನಾಯಕರಿಗೆ ಹೆಚ್ಚುವರಿ ಭದ್ರತೆ ನೀಡಲಾಗಿದೆ. ಇದು ಪ್ರತಿಪಕ್ಷದವರ ಆಕ್ರೋಶಕ್ಕೆ ಕಾರಣವಾಗಿದೆ.
ಪರಿಷತ್ ಸಭೆಯ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ಅವರ ನಿವಾಸಕ್ಕೆ ಮೊದಲು ಮೂವರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ಇತ್ತೀಚಿನ ಪರಿಷ್ಕರಣೆಯಡಿ ಮೂರೂ ಭದ್ರತಾ ಗಾರ್ಡ್ಗಳನ್ನು ಹಿಂಪಡೆದಿದೆ. ಈ ನಿರ್ಧಾರವು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಮತ್ತೊಂದೆಡೆ, ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ಹೆಚ್ಚುವರಿ ಭದ್ರತೆ ನೀಡುವ ಆದೇಶ ಹೊರಡಿಸಲಾಗಿದೆ. ಅವರ ನಿವಾಸ ಮತ್ತು ಸಂಚಾರದ ವೇಳೆ ಸುರಕ್ಷತೆ ಕಾಪಾಡಲು ಬೆಂಗಾವಲು ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಮಹದೇವಪ್ಪ ಅವರಿಗೆ ನೀಡಲಾದ ಈ ಹೆಚ್ಚುವರಿ ಭದ್ರತೆ ರಾಜಕೀಯ ವಲಯದಲ್ಲಿ ವಿಭಿನ್ನ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.
ಹಿರಿಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೂ ಈ ಪರಿಷ್ಕರಣೆ ಪರಿಣಾಮ ಬೀರಿದೆ. ಅವರ ನಿವಾಸದಲ್ಲಿದ್ದ ಭದ್ರತಾ ಗಾರ್ಡ್ ಹಾಗೂ ಬೆಂಗಾವಲು ಭದ್ರತೆ ಎರಡನ್ನೂ ಪೊಲೀಸ್ ಇಲಾಖೆ ಹಿಂಪಡೆದಿದೆ. ಇದೇ ರೀತಿ, ಶಂಕರ್ ಬಿದರಿ ಮತ್ತು ಸಂತೋಷ್ ಗುರೂಜಿ ಅವರಿಗೆ ನೀಡಲಾಗಿದ್ದ ಭದ್ರತಾ ಸೌಲಭ್ಯಗಳನ್ನೂ ಸರ್ಕಾರ ಸಂಪೂರ್ಣವಾಗಿ ವಾಪಸ್ ಪಡೆದಿದೆ. ಈ ನಿರ್ಧಾರದಿಂದ ಬಿಜೆಪಿ ನಾಯಕರಲ್ಲಿ ಅಸಮಾಧಾನ ಮೂಡಿಸಿವೆ.
ಸರ್ಕಾರದ ಈ ಕ್ರಮವು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗಳಿಗೆ ಕಾರಣವಾಗಿದೆ. ಬಿಜೆಪಿ ವಲಯದಿಂದ ಸರ್ಕಾರವು ರಾಜಕೀಯ ಪೂರಕವಾದ ರೀತಿಯಲ್ಲಿ ಭದ್ರತಾ ಸಿಬ್ಬಂದಿ ಹಂಚಿಕೆಯನ್ನು ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಸರ್ಕಾರದ ಮೂಲಗಳು, ಈ ಪರಿಷ್ಕರಣೆ ಸಾಮಾನ್ಯ ಭದ್ರತಾ ಮೌಲ್ಯಮಾಪನದ ಭಾಗವಾಗಿ, ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಕೈಗೊಳ್ಳಲಾಗಿದೆ ಎಂದು ಹೇಳುತ್ತಿವೆ.
ಪ್ರತಿಪಕ್ಷ ನಾಯಕರ ಮನೆಗೆ ಕೊಟ್ಟಿದ್ದ ಭದ್ರತೆ ವಾಪಸ್ಸು ಪಡೆದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರದ ನೂನ್ಯತೆ, ಭ್ರಷ್ಟಾಚಾರ, ನೇರವಾಗಿ ಮಾತಾಡೋರ ಕಂಡರೆ ಸರ್ಕಾರಕ್ಕೆ ಆಗೋದಿಲ್ಲ. ಅದಕ್ಕಾಗಿ ನನಗೆ ಕೊಟ್ಟಿದ್ದ ಭದ್ರತೆ ವಾಪಸ್ ಪಡೆದಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ಒಂದುವರೆ ವರ್ಷಗಳು ಆಗ್ತಿದೆ
ಇದುವರೆಗೂ ಸರ್ಕಾರಿ ವಸತಿ ಗೃಹವನ್ನು ಕೊಟ್ಟಿಲ್ಲ. ಸಾಕಷ್ಟು ಬಾರಿ ಹೇಳಿದ್ರು, ನಿರ್ಲಕ್ಷ್ಯ ತೋರಿದ್ದಾರೆ. ಇದೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದ್ದಾಗ, ಜಗಳ ಮಾಡಿ ಮನೆ ತಗೊಂಡ್ರು. ಇವಾಗ ನನ್ನ ಮನೆಗೆ ಇದ್ದ ಬೆಂಗಾವಲು ರಕ್ಷಕರನ್ನು ವಿತ್ ಡ್ರಾ ಮಾಡಿದ್ದಾರೆ. ಇದರಿಂದಲೇ ಸರ್ಕಾರ ನನ್ನ ಮೇಲೆ ಟಾರ್ಗೆಟ್ ಮಾಡಿದೆ ಎಂದು ಗೊತ್ತಾಗ್ತಿದೆ.
ಪ್ರಿಯಾಂಕ ಖರ್ಗೆಯವರೇ ಇದನ್ನು ಮಾಡಿಸಿದ್ದಾರೆ. ನನಗೆ ಏನಾದರೂ ಆದರೆ ಸರ್ಕಾರ ಎಷ್ಟು ಹೊಣೆಯೋ ಅಷ್ಟೇ ಹೊಣೆ ಖರ್ಗೆ ಕುಟುಂಬ. ನಾನು ಎಷ್ಟೋ ಬಾರಿ ಅವರ ಬಗ್ಗೆ ಮಾತಾಡಿದ್ದೇನೆ. ಇದಕ್ಕೆ ಸಿಎಂ, ಗೃಹ ಸಚಿವರು ಉತ್ತರ ಕೊಡಬೇಕು.ಇಲ್ಲವಾದಲ್ಲಿ ನನಗೆ ಕೊಟ್ಟಿದ್ದ ಗನ್ ಮ್ಯಾನ್ ಗಳು, ಕಾರನ್ನು ಎಲ್ಲಾ ವಾಪಸ್ಸು ಕಳುಹಿಸ್ತೇನೆ ಎಂದು ಕಿಡಿಕಾರಿದ್ದಾರೆ
ವಿರೋಧ ಪಕ್ಷದ ನಾಯಕರ ಮುಗಿಸುವ ಕೆಲಸ ಮಾಡುತ್ತಿದೆ. ಪ್ರಿಯಾಂಕ್ ಖರ್ಗೆ ಮನೆಯ ಮುಂದೆ ಭದ್ರತೆ, ನನಗೂ ಥ್ರೆಟ್ ಕಾಲ್ ಬಂದರೂ ಭದ್ರತೆ ವಾಪಸ್ ಪಡೀತಿರಾ.? ನನಗೆ ಏನೇ ಆದರೂ ಖರ್ಗೆ ಫ್ಯಾಮಿಲಿ ಮತ್ತು ಸರ್ಕಾರ ಹೊಣೆ. ನನ್ನ ಹಿಂದೆಯೂ ಒಂದು ದೊಡ್ಡ ಸಮಾಜ ಇದೆ. ನಾನು ಕೂಡ ಕ್ಯಾಬಿನೆಟ್ ರ್ಯಾಂಕ್ ನಲ್ಲಿದ್ದೇನೆ. ಮಹಾದೇವಪ್ಪನಿಗೆ ಮತ್ತೆ ಭದ್ರತೆ ಹೆಚ್ಚು ಮಾಡಿದ್ದೀರಿ. ಈ ಥ್ರೆಟ್ ಇರೋದೇ ಸರ್ಕಾರದಿಂದ, ಇದನ್ನು ಎಲ್ಲಿಗೆ ಬೇಕಾದರೂ ನಾನು ತಗೊಂಡು ಹೋಗುತ್ತೇನೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.