Karnataka election 2023: ಹೆಬ್ಬಾರ್ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಎಸ್ಟಿ ಸಮಾವೇಶ 

By Ravi JanekalFirst Published Mar 14, 2023, 10:05 PM IST
Highlights

ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಮುಂದಿನ ಬಾರಿ ಮತ್ತೆ ಅಧಿಕಾರಕ್ಕೆ ಬರಲೇಬೇಕೆಂಬ ಉದ್ದೇಶದೊಂದಿಗೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರು ಭಾರೀ ಕಸರತ್ತು ನಡೆಸುತ್ತಿದ್ದಾರೆ. 

ಉತ್ತರ ಕನ್ನಡ (ಮಾ.14) : ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಮುಂದಿನ ಬಾರಿ ಮತ್ತೆ ಅಧಿಕಾರಕ್ಕೆ ಬರಲೇಬೇಕೆಂಬ ಉದ್ದೇಶದೊಂದಿಗೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರು ಭಾರೀ ಕಸರತ್ತು ನಡೆಸುತ್ತಿದ್ದಾರೆ. 

ಉತ್ತರಕನ್ನಡ(Uttara kannada) ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಶಾಸಕ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್(Minister Shivaram hebbar) ಕೂಡಾ ಜಿಲ್ಲಾ ಮಟ್ಟದ ಎಸ್ಟಿ ಸಮಾವೇಶ(BJP ST Convention) ಮಾಡುವ ಮೂಲಕ ಪರಿಶಿಷ್ಟ ಪಂಗಡದ ಮತ ಸೆಳೆಯಲು ತಂತ್ರ ಮಾಡಿದ್ದಾರೆ. ಈ ಮೂಲಕ ತನ್ನ ಕ್ಷೇತ್ರವನ್ನು ಮತ್ತಷ್ಟು ಪ್ರಬಲಗೊಳಿಸುತ್ತಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ... 

Latest Videos

Uttara Kannada : ಜನರ ಹಲವು ವರ್ಷದ ಕನಸು ನನಸು: ಶಿವರಾಮ ಹೆಬ್ಬಾರ್

ಯಲ್ಲಾಪುರ ಕ್ಷೇತ್ರ(Yallapur assembly constituency)ದಲ್ಲಿ ಪರಿಶಿಷ್ಟ ಪಂಗಡಗಳ ಮತ ಸೆಳೆಯಲು ಹೆಬ್ಬಾರ ತಂತ್ರ..   ಬೃಹತ್ ಸಮಾವೇಶ ಮಾಡುವ ಮೂಲಕ ಕ್ಷೇತ್ರದ ಮತದಾರರನ್ನು ಒಗ್ಗೂಡಿಸಿದ ಸಚಿವರು..  ಮೀಸಲಾತಿ ಹೆಚ್ಚಳದ ಅಸ್ತ್ರ ಬಳಸಿ ಪರಿಶಿಷ್ಟ ಪಂಗಡದ ಮತ ಸೆಳೆಯಲು ಹೆಬ್ಬಾರ ಯತ್ನ.

 ಹೌದು, ಇನ್ನೇನು ಕೆಲವೇ ದಿನದಲ್ಲಿ ರಾಜ್ಯ ವಿಧಾನ ಸಭೆ ಚುನಾವಣೆ(Karnataka assembly election) ಘೋಷಣೆ ಆಗಲಿದ್ದು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರು ಈಗಾಗಲೇ ಹಲವು ಸುತ್ತಿನ ಪ್ರಚಾರ ನಡೆಸಿದ್ದು ಶತಾಯಗತಾಯ ಅಧಿಕಾರಕ್ಕೆ ಹಿಡಿಯಲೇಬೇಕೆಂಬ ಹುಮ್ಮಸ್ಸಿನೊಂದಿಗೆ ಕಾಂಗ್ರೆಸ್ ಕೂಡ ತೀವ್ರ ಪೈಪೋಟಿ ಒಡ್ಡುತ್ತಿದೆ. ಸಚಿವ ಶಿವರಾಮ್ ಹೆಬ್ಬಾರ್ ಕೂಡ ಮತದಾರರನ್ನು ಸೆಳೆಯಲು ಹಿಂದೆ ಬಿದ್ದಿಲ್ಲ. ಮತದಾರರನ್ನು ಒಗ್ಗೂಡಿಸಲು ವಿವಿಧ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಇಂದು ಯಲ್ಲಾಪುರದ ಎಪಿಎಂಸಿ ಮೈದಾನದಲ್ಲಿ ಜಿಲ್ಲಾಮಟ್ಟದ ಎಸ್ಟಿ ಸಮಾವೇಶವನ್ನು ಆಯೋಜನೆ ಮಾಡುವ ಮೂಲಕ ಸುಮಾರು 3000ಕ್ಕೂ ಅಧಿಕ ಜನರನ್ನು ಸೇರಿಸಿ ಪರಿಶಿಷ್ಟ ಪಂಗಡಗಳ ಮತ ಸೆಳೆಯಲು ತಂತ್ರ ನಡೆಸಿದ್ದಾರೆ. ಈ ಸಮಾವೇಶದಲ್ಲಿ ತನ್ನ ಬಾಷಣದುದ್ದಕ್ಕೂ ಸರ್ಕಾರದ ಸಾಧನೆ, ಕ್ಷೇತ್ರಕ್ಕೆ ತಾನು ತಂದಿರುವ ಅನುದಾನ ಹಾಗೂ ಸರಕಾರ ಎಸ್ಟಿ ಮೀಸಲಾತಿ ಹೆಚ್ಚಳದ ಬಗ್ಗೆ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ತನಗೆ ಆರ್ಶೀವಾದ ಮಾಡಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕರಿಸಿ ಎಂದು ಜನರಲ್ಲಿ ಕೋರಿಕೊಂಡಿದ್ದಾರೆ. 

ನಾನು ಚುನಾವಣೆಗಾಗಿ ರಾಜಕಾರಣ ಮಾಡಲು ಬಂದಿಲ್ಲ. ಚುನಾವಣೆಗಾಗಿ ನನ್ನ ಪ್ರಚಾರ ಕಾರ್ಯ ಜೋರಾಗುವ ಮಾತಿಲ್ಲ. ಚುನಾವಣೆ ಬರೋತನಕ ನಾನು 70ಕಿ.ಮೀ.ವೇಗದಲ್ಲೇ ಹೋಗ್ತೇನೆ‌ ಹೊರತು 90 ಕಿ.ಮೀ.ವೇಗದಲ್ಲಿ ಹೋಗಬೇಕಾದ ಅವಶ್ಯಕತೆ ನನಗಿಲ್ಲ
ಅಂದಿನಿಂದ‌ ಇಂದಿಗೂ ನಾನು ಒಂದೇ ರೀತಿಯ ವೇಗದಲ್ಲಿ ಹೋಗುತ್ತಿದ್ದೇನೆ. ನಾನು ಹೋಗುವ ವೇಗದಲ್ಲೇ ಕಾರ್ಯಕರ್ತರನ್ನು ಕೂಡಾ ಕೊಂಡೊಯ್ಯುತ್ತಿದ್ದೇನೆ. ಬಿಜೆಪಿಯಲ್ಲಿ ಮೂಲ, ಹಳೇಯವ, ಹೊಸಬ ಹೇಳುವಂತಹ ಪದ್ಧತಿಯಿಲ್ಲ. ಕಾಂಗ್ರೆಸ್‌ನಲ್ಲಿ ಕೆಲವೇ ಜನರು ಉಳಿದಿದ್ದಾರೆ, ಅವರು ಶೀಘ್ರದಲ್ಲಿ ನನ್ನ ಜತೆ ಬರ್ತಾರೆ ಎಂದು ಹೆಬ್ಬಾರ್ ತಿಳಿಸಿದ್ದಾರೆ. 

ಅಂದಹಾಗೆ, ಯಲ್ಲಾಪುರ - ಮುಂಡಗೋಡ ಕ್ಷೇತ್ರದಲ್ಲಿ ಸುಮಾರು 35 ಸಾವಿರ ಎಸ್ಟಿ ಮತಗಳಿದ್ದು, ಬಲಿಷ್ಠ ಮತದಾರರ ಸಮುದಾಯ(ST Community)ಗಳ ಪೈಕಿ ಇವುಗಳೂ ಒಂದು. ಹೀಗಾಗಿ ಸಚಿವ ಹೆಬ್ಬಾರ ಎಸ್ಟಿ ಸಮುದಾಯಗಳ ಮತಗಳನ್ನು ಮತ್ತೆ ಸೆಳೆಯುವ ಯತ್ನ ನಡೆಸಿದ್ದಾರೆ. ಅದರಲ್ಲೂ  ಸಿದ್ದಿ, ಗೌಳಿ, ತಲ್ವಾರ ಜಾತಿಗಳ ಜನ್ರನ್ನು ಕೇಂದ್ರೀಕರಿಸಿ ಈ ಸಮಾವೇಶವನ್ನು ಆಯೋಜಿಸಿದ್ದಾರೆ. ಇನ್ನು ಕ್ಷೇತ್ರದಲ್ಲಿ ಹೆಬ್ಬಾರ ಗೆಲುವಿನ ಓಟಕ್ಕೆ, ಈ ಬಾರಿ ಬ್ರೇಕ್ ಹಾಕಲು ಕಾಂಗ್ರೆಸ್ ಪಕ್ಷದಿಂದ ಕ್ಷೇತ್ರದಲ್ಲಿ ವರ್ಚಸ್ಸು ಹೊಂದಿರುವ ವಿ.ಎಸ್.ಪಾಟೀಲ್‌ ಅವರನ್ನು ಕಣಕ್ಕಿಳಿಸಲು ಎಲ್ಲಾ ರೀತಿಯ ತಯಾರಿ ನಡೆಸಲಾಗಿದೆ‌. ಇದರಿಂದ ಕೊಂಚ ವಿಚಲಿತಗೊಂಡಿರುವ ಶಿವರಾಮ ಹೆಬ್ಬಾರ್, ಕ್ಷೇತ್ರದ ಜನರ ಮತಗಳನ್ನು ಸೆಳೆಯಲು ವಿವಿಧ ರೀತಿ ತಂತ್ರಗಾರಿಕೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಮಾವೇಶದಲ್ಲಿ ಭಾಗಿಯಾಗಿದ್ದ ಪರಿಶಿಷ್ಟ ಪಂಗಡ ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹ ರಾಜು ಬಿಜೆಪಿಯನ್ನು ಹಾಡಿ ಹೊಗಳಿದ್ದಾರೆ. ಸ್ವಾತಂತ್ರ್ಯ ನಂತರ ದಿನಗಳಿಂದ ಕಾಂಗ್ರೆಸ್ ಕೇವಲ ಹಿಂದುಳಿದ ಸಮುದಾಯಗಳನ್ನು ವೋಟ್ ಬ್ಯಾಂಕ್ ಆಗಿ ಬಳಕೆ ಮಾಡಿದೆ. ಆದರೆ, ಬಿಜೆಪಿ ಎಸ್ಟಿ ಸಮಾಜದ ಏಳಿಗೆಗೆ ಶ್ರಮಿಸಿದೆ. ಹೀಗಾಗಿ ಮತ್ತೆ ಬಿಜೆಪಿಗೆ ಮತ ನೀಡಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ...

ಮಠ-ಮಂದಿರ ವಿವಾದಕ್ಕೆ ಕಾಂಗ್ರೆಸ್‌ ಕಾರಣ- ಸಚಿವ ಶಿವರಾಮ ಹೆಬ್ಬಾರ್‌

ಒಟ್ಟಿನಲ್ಲಿ ಯಲ್ಲಾಪುರ - ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಸಿದ್ಧತೆ ರಂಗೇರಿದ್ದು, ಈ ಬಾರಿ ಎರಡು ಮದಗಜಗಳ ನಡುವೆ ಕಾಳಗ ಏರ್ಪಡಲಿದೆ. ಈ ಕಾಳಗದಲ್ಲಿ ಮತದಾರರ ಒಲವು ಯಾರ ಪರವಾಗಲಿದೆ ? ಯಾರು ಸೋಲನ್ನಪ್ಪುತ್ತಾರೆ ? ಎಂದು ಕಾದು ನೋಡಬೇಕಷ್ಟೇ. 

ಭರತ್‌ರಾಜ್ ಕಲ್ಲಡ್ಕ ಜತೆ ಕ್ಯಾಮೆರಾಮ್ಯಾನ್ ಗಿರೀಶ್ ನಾಯ್ಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕಾರವಾರ

click me!