
ವರದಿ - ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ
ರಾಮನಗರ(ಜು.10): ಶಾಸಕಿ ಅನಿತಾ ಕುಮಾರಸ್ವಾಮಿ ಮುಂಬರುವ 2023ರ ಸಾರ್ವತ್ರಿಕ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ. ಕ್ಷೇತ್ರದ ಮಹಿಳೆಯರು, ಸ್ತ್ರೀ ಶಕ್ತಿ ಸಂಘಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ. ಇಂದು(ಭಾನುವಾರ) ನಡೆದ ರಂಗೋಲಿ ಸ್ಪರ್ಧೆಯಲ್ಲಿ ಮಕ್ಕಳಿಂದ ವಯೋ ವೃದ್ಧರವರೆಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಆಕರ್ಷಕ ರಂಗು ರಂಗಿನ ರಂಗೋಲಿಯನ್ನು ಬಿಡಿಸಿದರು.
ಹೌದು, ಹೆಂಗಳೆಯರ ಕೈಯಲ್ಲಿ ಅರಳಿರುವ ಸುಂದರ ರಂಗೋಲಿಗಳು ಹೊಸ್ತಿಲು, ತುಳಸಿ ಕಟ್ಟೆ, ಮನೆಯ ಮುಂದೆ ಇದ್ದರೆ ಅದು ಶುಭದ ಸಂಕೇತ ಅನ್ನೋ ಮಾತಿದೆ. ಆದ್ರೆ ಇಂದಿನ ಆಧುನಿಕ ಯುಗದ ಭರದಲ್ಲಿ ಈ ರಂಗೋಲಿ ಸಂಸ್ಕೃತಿಯನ್ನ ಮರೆತು ನಿಧಾನವಾಗಿ ರಂಗೋಲಿ ಕಲೆ ಕಣ್ಮರೆಗೊಳ್ಳುತ್ತಿದೆ. ಹೀಗಾಗಿ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಹಳ್ಳಿಮಾಳದಲ್ಲಿ ರಂಗೋಲೆ ಸ್ಪರ್ಧೆ ಏರ್ಪಡಿಸಿದ್ದರು. ಇನ್ನು ಹಳ್ಳಿಮಾಳ ಸರ್ಕಲ್ನ ಬಯಲಿನಲ್ಲಿ ನೂರಾರು ಮಹಿಳೆಯರ ಕೈಯಲ್ಲಿ ಮೂಡಿದ್ದ ಬಣ್ಣ ಬಣ್ಣದ ಚಿತ್ತಾಕರ್ಷಕ ರಂಗೋಲಿಯನ್ನ ಶಾಸಕಿ ಅನಿತಾ ಕುಮಾರಸ್ವಾಮಿಯವರು ವಿಕ್ಷೀಸಿದ್ರು. ಇನ್ನು ಸುಮ್ಮನೇ ನಮ್ಮ ಹಿರಿಯರು ರಂಗೋಲಿ ಸಂಸ್ಕೃತಿಯನ್ನ ಬೆಳಸಿಲ್ಲ ಈ ಕಲೆಯನ್ನ ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾದ ಅಗತ್ಯತೆ ಇದ್ದು ಹೀಗಾಗಿ ಸ್ಪರ್ಧೆ ಏರ್ಪಡಿಸಿರುವುದಾಗಿ ತಿಳಿಸಿದ್ರು.
ಬಿಜೆಪಿಯ ಬಿ ಟೀ ಯಾವುದೆಂದು ರಾಜ್ಯದ ಜನತೆಗೆ ಗೊತ್ತಾಗಿದೆ: ಅನಿತಾ ಕುಮಾರಸ್ವಾಮಿ
ಇನ್ನು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಯೋವೃದ್ಧರು ಸೇರಿದಂತೆ ಯುವತಿಯರು ಪಾಲ್ಗೊಂಡು ಚುಕ್ಕಿ ರಂಗೋಲಿ, ವಿವಿಧ ವಿನ್ಯಾಸದ ಬಣ್ಣದ ರಂಗೋಲಿ ಇಟ್ಟು ಗಮನ ಸೆಳೆದ್ರು. ಅಲ್ಲದೇ ಖುದ್ದು ಶಾಸಕಿ ಅನಿತಾ ಕುಮಾರಸ್ವಾಮಿಯವರೇ ರಂಗೋಲಿ ಬಿಡಿಸಿದ್ದ ಮಹಿಳೆಯರ ಬಳಿ ತೆರಳಿ ಹೆಂಗೆಳೆಯರ ಕ್ರೀಯಾಶೀಲತೆಗೆ ಸಾಕ್ಷಿಯಾಗಿದ್ದ ರಂಗೋಲಿ ಚಿತ್ತಾರಕ್ಕೆ ತಮ್ಮ ಮೆಚ್ಚುಗೆಯನ್ನ ಸೂಚಿಸಿದ್ರು. ಇನ್ನು ಕೇವಲ ಹಬ್ಬ ಹರಿದಿನಗಳಲ್ಲಿ ಅಷ್ಟೇ ರಂಗೋಲಿ ಬಿಡಿಸುವ ಕಲೆ ಇದ್ದು, ಎಷ್ಟೋ ಜನ ಈ ರಂಗೋಲಿ ಎಂಬ ಕಲೆಯನ್ನ ಮರೆತಿದ್ದಾರೆ. ಇನ್ನು ಈ ರೀತಿಯ ಸ್ಫರ್ಧೆ ಆಯೋಜಿಸಿರುವುದು ನಮ್ಮ ಭಾರತೀಯ ಸಂಸ್ಕೃತಿ ವೃದ್ಧಿಗೆ ಸಹಕಾರಿಯಾಗಿದೆ. ಈ ರಂಗೋಲಿ ಸ್ಪರ್ಧೆ ಏರ್ಪಡಿಸಿ ಹೆಣ್ಣುಮಕ್ಕಳ ಪ್ರೋತ್ಸಾಹಕ್ಕೆ ಮುಂದಾದ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಸ್ಫರ್ಧಿಗಳು ಧನ್ಯವಾದ ತಿಳಿಸಿದ್ರೆ, ಅತ್ತ್ಯುತ್ತಮ ರಂಗೋಲಿಯನ್ನ ಬಿಡಿಸಿದವರಿಗೆ ವೇದಿಕೆಯಲ್ಲಿ ನಗದು ಜೊತೆಗೆ ಬಹುಮಾನ ನೀಡಿ ಶಾಸಕಿ ಅನಿತಾ ಕುಮಾರಸ್ವಾಮಿ ಮಹಿಳೆಯರ ಬೆನ್ನು ತಟ್ಟಿದ್ರು.
ಒಟ್ಟಾರೆ, ರಂಗು ರಂಗಿನ ರಂಗೋಲಿ ಸ್ಪರ್ಧೆಗೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದಲ್ಲದೇ ವಯೋವೃದ್ಧರಿಂದ ಹಿಡಿದು ಮಹಿಳೆಯರು, ಯುವತಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಇನ್ನು ಮುಂಬರುವ ಸಾರ್ವತ್ರಿಕ ಚುನಾವಣೆಗೆ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ನಿಟ್ಟಿನಲ್ಲಿ ಕ್ಷೇತ್ರದ ಮಹಿಳೆಯರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಕಡೆ ಪಂಚಾಯಿತಿ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ರಂಗೋಲಿ ಸ್ಪರ್ಧೆ ನಡೆಸುವ ಚಿಂತನೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.