
ಬಾಗಲಕೋಟೆ (ಮಾ.28): ಮಹಿಳೆಯರಿಗೆ ಉಚಿತ ಪ್ರಯಾಣ, ಮನೆಗಳಿಗೆ ಉಚಿತ ವಿದ್ಯುತ್ ನೀಡುತ್ತಿರುವುದಕ್ಕೆ ವಿರೋಧವಿಲ್ಲ. ಆದರೆ, ನಾಲ್ಕೂ ವಿದ್ಯುತ್ ನಿಗಮಗಳಿಗೆ, ಸಾರಿಗೆ ನಿಗಮಗಳಿಗೆ ಹಣ ನೀಡದ್ದರಿಂದ ವೇತನ ನೀಡಲೂ ಗತಿ ಇಲ್ಲದಂತಾಗಿದೆ ಎಂದು ಸಂಸದ ಜಗದೀಶ ಶೆಟ್ಟರ್ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲದ ಸುಳಿಗೆ ಸಿಲುಕಿರುವ ರಾಜ್ಯ ಸರ್ಕಾರದ ಬಳಿ, ಅಭಿವೃದ್ಧಿ ಕೆಲಸಗಳಿಗೆ ನೀಡಲು ಅನುದಾನವಿಲ್ಲ. ಇದರಿಂದಾಗಿ ಕೇಂದ್ರದ ರೈಲು ಮಾರ್ಗ ನಿರ್ಮಾಣದ ಹಲವು ಯೋಜನೆಗಳು ನನೆಗುದಿಗೆ ಬಿದ್ದಿವೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಆಡಳಿತ ಹಳಿ ತಪ್ಪಿದ್ದು, ಜನರು ರೋಸಿ ಹೋಗಿದ್ದಾರೆ. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸರ್ಕಾರಕ್ಕೆ ಪಾಠ ಕಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಜಗತ್ತಿನಲ್ಲಿ ಯುದ್ಧದ ವಾತಾವರಣ ಕವಿದಿದ್ದರೂ ದೇಶದಲ್ಲಿ ಜನರು ಸುರಕ್ಷಿತವಾಗಿರಲು ಪ್ರಧಾನಿ ಮೋದಿ ಅವರ ಸಮರ್ಥ ಆಡಳಿತವೇ ಕಾರಣ. ಪ್ರತಿ ಪಕ್ಷ ನಾಯಕ ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ನಾಯಕ. ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ಗೆ 70 ಡಾಲರ್ ನಿಂದ 120 ಡಾಲರ್ ಗೆ ಹೆಚ್ಚಾಗಿದೆ. ವಿವಿಧ ದೇಶಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆ. ಭಾರತದಲ್ಲಿ ಮೋದಿ ಅವರು ಎಕ್ಸೈಜ್ ತೆರಿಗೆ ಕಡಿಮೆ ಮಾಡುವ ಮೂಲಕ ಬೆಲೆ ಹೆಚ್ಚಳಕ್ಕೆ ತಡೆ ಹಾಕಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಒಂದೆಡೆ ಫೈಟ್ ನಡೆದಿದ್ದರೆ, ಇನ್ನೊಂದೆಡೆ ಶಾಸಕರು ಸಚಿವರಾಗಲು ಪೈಪೋಟಿ ನಡೆಸಿದ್ದಾರೆ. ಜನರ ಸಂಕಷ್ಟ ಆಲಿಸಲೂ ಅವರಿಗೆ ಪುರುಸೊತ್ತಿಲ್ಲ ಎಂದು ಟೀಕಿಸಿದರು. ಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ವಿಧಾನಸೌಧದ ಮುಂದೆ ಮೊನ್ನೆ ಶಾಸಕರ ಗ್ರೂಪ್ ಫೋಟೊ ತೆಗೆಸಲಾಗಿದೆ. ಸಾಮಾನ್ಯವಾಗಿ ಅವಧಿ ಪೂರ್ಣಗೊಳ್ಳುವಾಗ ತೆಗೆಯಿಸಲಾಗುತ್ತದೆ. ಈಗ ತೆಗೆಸಿರುವುದು ನೋಡಿದರೆ ಅವರಿಗೆ ಅವರ ಹೈಕಮಾಂಡ್ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ತಿಳಿಸಿದೆಯಾ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ವಿಧಾನಸೌಧದ ಕೊಠಡಿಗಳಿಗೆ ಹೊಸ ಬಾಗಿಲು, ಪಾವಟಿಗೆಗೆ ಮ್ಯಾಟ್ ಹೀಗೆ ವಿವಿಧ ಕೆಲಸಗಳನ್ನು ಸ್ಪೀಕರ್ ಮಾಡಿಸುತ್ತಿದ್ದಾರೆ. ಅವರು ಮೊದಲು ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ. ಅದರ ರಿಪೇರಿ ಮಾಡಲಿ ಎಂದು ವ್ಯಂಗ್ಯವಾಡಿದರು. ಸಚಿವ ಸತೀಶ ಜಾರಕಿಹೊಳಿ ಎರಡು ತಿಂಗಳಿಂದ ಇಲ್ಲಿ ಅಡ್ಡಾಡುತ್ತಾ ಕಾಂಗ್ರೆಸ್ ಮತ ಕೇಳುತ್ತಿದ್ದಾರೆ. ಬಿಜೆಪಿ ಹೆಚ್ಚು ಮಾಡಿದ್ದ ಮೀಸಲಾತಿ ಪ್ರಮಾಣವನ್ನು ಶೇ.7ರಿಂದ ಶೇ3ಕ್ಕೆ ಇಳಿಸಿದಾಗ ಯಾಕೆ ಮಾತನಾಡಲಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅನ್ಯಾಯವಾದಾಗ ಯಾಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು. ಸಂಸದ ಗೋವಿಂದ ಕಾರಜೋಳ, ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ, ಅರುಣ ಶಹಾಪುರ, ಶಾಂತಗೌಡ ಪಾಟೀಲ, ಶರಣು ತಳ್ಳಿಕೇರಿ, ಡಿ.ಬಿ. ಸಿದ್ದಾಪುರ, ಬಸವರಾಜ ಯಂಕಂಚಿ, ಸತ್ಯನಾರಾಯಣ ಹೇಮಾದ್ರಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.