
ಬೆಂಗಳೂರು (ಫೆ.07): ನರೇಂದ್ರ ಮೋದಿಯವರು ಮೂರನೆ ಬಾರಿ ಪ್ರಧಾನಿಯಾದ 1 ತಿಂಗಳಲ್ಲಿ ಕಾಂಗ್ರೆಸ್ ಇಬ್ಭಾಗವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.
ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕರ್ನಾಟಕದ ಇತಿಹಾಸದಲ್ಲಿ ಇಷ್ಟು ದೊಡ್ಡ ನಾಟಕ ಮಾಡುವ ಸರ್ಕಾರ ಇನ್ನೊಂದಿಲ್ಲ. ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆದ ಮೇಲೆ ತಮ್ಮ ತತ್ವ ಸಿದ್ದಾಂತ ಗಾಳಿಗೆ ತೂರಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಆರಂಭವಾಗಿಲ್ಲ. ಬರಗಾಲ ಬಿದ್ದಿದೆ ಬರ ಪರಿಹಾರ ನೀಡಿಲ್ಲ. ಯಾವ ನೈತಿಕತೆ ಇಟ್ಟುಕೊಂಡು ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ನಾಚಿಕೆಯಾಗಬೇಕು ಇವರಿಗೆ ಎಂದು ಕಿಡಿಕಾರಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ. ಎನ್ ಡಿಎ ಅವಧಿಯಲ್ಲಿ ಎಷ್ಟು ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಲಿ, ಯುಪಿಎ ಅವಧಿಯಲ್ಲಿ 82 ಸಾವಿರ ಕೋಟಿ ಮಾತ್ರ ಬಂದಿದೆ. ಮೋದಿ ಕಲಾವದಲ್ಲಿ 2.82 ಲಕ್ಷ ಕೋಟಿ ಬಂದಿದೆ. ಎನ್ ಡಿಎ ಅವಧಿಯಲ್ಲಿ ಎರಡು ಲಕ್ಷ ಕೋಟಿ ರೂ ಹೆಚ್ಚಿಗೆ ಬಂದಿದೆ. ರಾಜ್ಯಕ್ಕೆ ಅನ್ಯಾಯ ಮಾಡಿದವರು ಮನಮೋಹನ್ ಸಿಂಗ್ ಮತ್ತು ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಯಡಿಯೂರಪ್ಪ ಚಾಲನೆ ಕೊಟ್ಟ ಕೆ-100 ಜಲಮಾರ್ಗ ಬೊಮ್ಮಾಯಿ ಹೋಗಿ, ಸಿದ್ದರಾಮಯ್ಯ ಬಂದ್ರೂ ಮುಗಿದಿಲ್ಲ!
ಮೊದಲು ರಾಜ್ಯಗಳಿಗೆ ಅನುದಾನ ಶೇ 32% ಬರುತ್ತಿತ್ತು. ಮೋದಿಯವರು ಅದನ್ನು ಶೇ 42% ಹೆಚ್ಚಳ ಮಾಡಿದ್ದಾರೆ. ಹಣಕಾಸು ಆಯೋಗ ಕೇಂದ್ರ ಸರ್ಕಾರಕ್ಕೂ ಸಂಬಂಧ ಇಲ್ಲ. ಅದು ಎಲ್ಲ ರಾಜ್ಯಗಳಿಗೂ ಭೇಟಿ ನೀಡಿ, ಬಡತನ, ಜಸಂಖ್ಯೆ ತಲಾ ಆದಾಯ ಎಲ್ಲವನ್ನು ಪರಿಗಣನೆ ಮಾಡುತ್ತದೆ. 15 ನೇ ಹಣಕಾಸು ಆಯೋಗ ರಾಜ್ಯಕ್ಕೆ ಭೇಟಿ ನೀಡಿದಾಗ ಸಿದ್ದರಾಮಯ್ಯ ಅವರ ಸರ್ಕಾರ ಇತ್ತು. ಆಗ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ತಿಳಿಸಲು ವಿಫಲವಾಗಿದೆ. ರಾಜ್ಯದ ಪಾಲು ಶೇ 4.7 % ದಿಂದ ಶೇ 3.6% ಕ್ಕೆ ಕಡಿಮೆಯಾಗಲು ಸಿದ್ದರಾಮಯ್ಯ ಅವರೆ ನೇರ ಕಾರಣ ಎಂದು ವಾಗ್ದಾಳಿ ನಡೆಸಿದರು. ಮೋದಿಯವರ ಕಾಲದಲ್ಲಿ ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ 60 ಲಕ್ಷ ಜನರಿಗೆ ಆರೋಗ್ಯ ಸೌಲಭ್ಯ ಪಡೆದಿದ್ದಾರೆ.
ಮುದ್ರಾ ಯೋಜನೆ ಅಡಿಯಲ್ಲಿ 60 ಲಕ್ಷ ಯುವಕರಿಗೆ ಬ್ಯಾಂಕ್ ಸಾಲ ನೀಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಗಳನ್ನು ಮೊದಿ ಸರ್ಕಾರ ನೀಡಿದೆ. ಕಾಂಗ್ರೆಸ್ ಕಾಲದಲ್ಲಿ 85 ಕಿ. ಮೀ ರೈಲ್ವೆ ವಿದ್ಯುದೀಕರಣ ಆಗಿತ್ತು. ನಮ್ಮ ಅವಧಿಯಲ್ಲಿ 3500 ಕಿ. ಮೀ ರೈಲ್ವೆ ವಿದ್ಯುದೀಕರಣ ಆಗಿದೆ. ರಾಷ್ಟ್ರೀಯ ಹೆದ್ದಾರಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 65 ವರ್ಷದಲ್ಲಿ 6500 ಕೀ. ಮೀ ಅಭಿವೃದ್ಧಿ ಮಾಡಲಾಗಿತ್ತು. ನಮ್ಮ ಮೊದಿ ಅವರ ಅವಧಿಯಲ್ಲಿ 13000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡೆಸಿದ್ದಾರೆ. ರಾಜ್ಯಕ್ಕೆ ಅನ್ಯಾಯ ಮಾಡಿದ್ದು ಮನಮೊಹನ್ ಸಿಂಗ್ ಸರ್ಕಾರ ಎಂದು ಕಿಡಿಕಾರಿದರು.
ನನ್ನ ದೇಶ ಕೇವಲ ದೆಹಲಿಯಲ್ಲ, ಬೆಂಗಳೂರು ಕೂಡ ನನ್ನ ದೇಶ; ವಿಪಕ್ಷಗಳಿಗೆ ಚಾಟಿ ಬಿಸಿದ ಪ್ರಧಾನಿ ಮೋದಿ !
ಕೃಷ್ಣಾ3 ನೇ ಹಂತದ ಯೊಜನೆಗೆ ನಾವು ಚಾಲನೆ ಕೊಟ್ಡಿದ್ದೇವೆ. ಅದನ್ನು ಸಿದ್ದರಾಮಯ್ಯ ಮುಂದುವರೆಸಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಕೇಂದ್ರ ಸರ್ಕಾರ ಭದ್ರಾ ಯೋಜನೆಗೆ ಬಜೆಟ್ ನಲ್ಲಿ ಮೀಸಲಿಟ್ಟಿರುವ 5300 ಕೋಟಿ ರೂ. ಹಣವನ್ನು ಪಡೆಯಲು ಸರಿಯಾದ ರೀತಿಯಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿಲ್ಲ. ಕಾವೇರಿ ಕೊಳ್ಳದ ಯೋಜನೆಗಳು ಸ್ಥಗಿತವಾಗಿವೆ. ನಾವು ಪ್ರವಾಹ ಬಂದಾಗ ನೇರವಾಗಿ ರೈತರ ಅಕೌಂಟ್ ಗೆ ಹಣ ವರ್ಗಾವಣೆ ಮಾಡಿದ್ದೇವೆ. ಯಾವ ಸರ್ಕಾರ ರೈತರು, ಮಹಿಳೆಯರು, ಬಡವರ ಕಷ್ಟಕ್ಕೆ ಸ್ಪಂದಿಸುವುದಿಲ್ಲವೋ ಅದು ಇದ್ದೂ ಸತ್ತಂತೆ. ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರದ ಇತರ ಇಲಾಖೆಗಳಲ್ಲಿ ಏನು ನಡೆಯುತ್ತಿದೆ ಎಂದು ನೋಡಿ, ಕೇವಲ ವರ್ಗಾವಣೆ ದಂಧೆ ಮಾಡಿಕೊಂಡು ತಿರುಗಾಡುತ್ತಿದ್ದೀರಾ ಎಂದು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.